ಮಹಾರಾಷ್ಟ್ರದಲ್ಲಿ ಮತ್ತಿಬ್ಬರಿಗೆ ಓಮಿಕ್ರಾನ್‌ ಸೋಂಕು, ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿ?

ಮಹಾರಾಷ್ಟ್ರದಲ್ಲಿ ಓಮಿಕ್ರಾನ್‌ ಕೊರೊನಾ ರೂಪಾಂತರಿ ವೈರಾಣುವಿನ 2 ಪ್ರಕರಣಗಳು ಸೋಮವಾರ ಪತ್ತೆಯಾಗಿದ್ದು, ಹೀಗಾಗಿ ರಾಜ್ಯದಲ್ಲಿ ಕೊರೊನಾ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಗಳಿವೆ.

ಮಹಾರಾಷ್ಟ್ರದಲ್ಲಿ ಮತ್ತಿಬ್ಬರಿಗೆ ಓಮಿಕ್ರಾನ್‌ ಸೋಂಕು, ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿ?
Linkup
ಮುಂಬಯಿ: ಮಹಾರಾಷ್ಟ್ರದಲ್ಲಿ ರೂಪಾಂತರಿ ವೈರಾಣುವಿನ ಎರಡು ಪ್ರಕರಣಗಳು ಸೋಮವಾರ ಪತ್ತೆಯಾಗಿದೆ. ಹೀಗಾಗಿ ಕೊರೊನಾ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಗಳಿವೆ. ದಕ್ಷಿಣ ಆಫ್ರಿಕಾದಿಂದ ಮರಳಿರುವ 37 ವರ್ಷದ ಯುವಕ ಹಾಗೂ ಅಮೆರಿಕದಿಂದ ವಾಪಸಾಗಿರುವ ಅವರ 36 ವರ್ಷದ ಸ್ನೇಹಿತನಿಗೆ ಓಮಿಕ್ರಾನ್‌ ಸೋಂಕು ತಗುಲಿರುವುದು ಜಿನೋಮ್‌ ಸೀಕ್ವೆನ್ಸಿಂಗ್‌ ಮೂಲಕ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ರೂಪಾಂತರಿ ವೈರಾಣು ಸೋಂಕಿತರ ಸಂಖ್ಯೆ 10ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಮೊದಲ ಪ್ರಕರಣ ಡಿ. 2ರಂದು ಪತ್ತೆಯಾಗಿತ್ತು, ಭಾನುವಾರ ಏಳು ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಒಟ್ಟು 23 ಮಂದಿ ಓಮಿಕ್ರಾನ್‌ ಸೋಂಕಿತರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. "ರಾಜ್ಯದಲ್ಲಿಓಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅಧ್ಯಕ್ಷತೆಯಲ್ಲಿ ಕೊರೊನಾ ಕಾರ್ಯಪಡೆ ಸಭೆ ನಡೆಯಲಿದ್ದು, ಕೊರೊನಾ ನಿರ್ಬಂಧಗಳನ್ನು ಬಿಗಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ," ಎಂದು ರಾಜ್ಯ ಸರಕಾರದ ಮೂಲಗಳು ತಿಳಿಸಿವೆ. ಕ್ಷಿಪ್ರವಾಗಿ ಜಿನೋಮ್‌ ಸೀಕ್ವೆನ್ಸಿಂಗ್‌ಈ ನಡುವೆ, "ಓಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಜೈವಿಕ ಮಾದರಿಯ ಜಿನೋಮ್‌ ಸೀಕ್ವೆನ್ಸಿಂಗ್‌ ವರದಿಯನ್ನು ಕ್ಷಿಪ್ರವಾಗಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ," ಎಂದು ಜಿನೋಮ್‌ ಸೀಕ್ವೆನ್ಸಿಂಗ್‌ ಕಾನ್ಸೋರ್ಟಿಯಂ ಸದಸ್ಯರಾಗಿರುವ ವೈರಾಣು ತಜ್ಞ ಡಾ. ಸೌಮಿತ್ರ ದಾಸ್‌ ಮಾಹಿತಿ ನೀಡಿದ್ದಾರೆ. "ಪ್ರಯಾಣಿಕರು ಅನವಶ್ಯಕವಾಗಿ ಕಾಯುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ದೇಶದಲ್ಲಿ 28 ಜಿನೋಮ್‌ ಸೀಕ್ವೆನ್ಸಿಂಗ್‌ ಕೇಂದ್ರಗಳಿದ್ದು, ಒಂದೇ ಸಲಕ್ಕೆ 100-750 ಮಾದರಿ ಪರೀಕ್ಷೆ ನಡೆಸುವ ಸಾಮರ್ಥ್ಯದ ಯಂತ್ರಗಳಿವೆ. ಹಾಗಾಗಿ, 72 ಗಂಟೆಗಳಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ ವರದಿ ಲಭ್ಯವಾಗುತ್ತಿದೆ,'' ಎಂದು ತಿಳಿಸಿದ್ದಾರೆ. ಡೆಲ್ಟಾ, ಬೀಟಾಗಿಂತ ವೇಗದ ಪ್ರಸರಣ ಕೊರೊನಾದ ಡೆಲ್ಟಾ, ಬೀಟಾ ರೂಪಾಂತರಿಗಿಂತ ಓಮಿಕ್ರಾನ್‌ ಬಹಳ ವೇಗವಾಗಿ ಪ್ರಸರಣ ಹೊಂದುತ್ತದೆ ಮತ್ತು ಮರುಸೋಂಕಿನ ಸಾಧ್ಯತೆ ಇದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ. "ಇದು ಓಮಿಕ್ರಾನ್‌ನ ಆರಂಭಿಕ ಹಂತದ ಮಾಹಿತಿ ಮಾತ್ರ. ಮತ್ತಷ್ಟು ಅಧ್ಯಯನ ನಡೆದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸದ್ಯದ ಮಟ್ಟಿಗೆ ಇದು ಬಹಳ ವೇಗವಾಗಿ ಪ್ರಸರಣ ಹೊಂದುವ ಸಾಮರ್ಥ್ಯ ಹೊಂದಿರುವುದಂತೂ ನಿಜ," ಎಂದು ಸಚಿವಾಲಯ ತಿಳಿಸಿದೆ. ಪ್ರಸರಣ ತಡೆಗೆ ಚೂಯಿಂಗ್‌ ಗಮ್‌ ಹೊಸ ರೂಪಾಂತರಿಯು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹಲವು ವರದಿಗಳು ತಿಳಿಸಿರುವ ಬೆನ್ನಲ್ಲೇ, ಸಾರ್ಸ್‌-ಸಿಒವಿ-2 ವೈರಾಣು ಪ್ರಸರಣದ ತಡೆಗೆ ಅಮೆರಿಕ ವಿಜ್ಞಾನಿಗಳು ಚೂಯಿಂಗ್‌ ಗಮ್‌ ಅಭಿವೃದ್ಧಿಪಡಿಸುತ್ತಿದ್ದಾರೆ. ''ಸೀನಿದಾಗ, ಕೆಮ್ಮಿದಾಗ ಹಾಗೂ ಮಾತನಾಡುವಾಗ ಲಾಲಾರಸದ ಮೂಲಕ ವೈರಾಣು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ, ಲಾಲಾರಸದ ಮೂಲಕ ಹರಡುವುದನ್ನು ತಡೆಯಲು ಚೂಯಿಂಗ್‌ ಗಮ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವೇಗವಾಗಿ ಹರಡುವುದನ್ನು ತಗ್ಗಿಸಬಹುದಾಗಿದೆ,'' ಎಂದು ಪೆನ್ಸಿಲ್ವೇನಿಯಾ ವಿವಿ ತಜ್ಞ ಹೆನ್ರಿ ಡೇನಿಯಲ್‌ ತಿಳಿಸಿದ್ದಾರೆ. ಕೇರಳದಲ್ಲಿ ವೈದ್ಯಾಧಿಕಾರಿಗಳು ಸಾರ್ವಜನಿಕ ಹೇಳಿಕೆ ಕೂಡದು ಕೇರಳದಲ್ಲಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಹೇಳಿಕೆ ನೀಡುವಂತಿಲ್ಲ, ಸುದ್ದಿಗೋಷ್ಠಿ ನಡೆಸುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೊರೊನಾ ಪ್ರಸರಣ ಕುರಿತು ಜನರಿಗೆ ತಪ್ಪು ಮಾಹಿತಿ ರವಾನೆಯಾಗುವ ಹಾಗೂ ಆರೋಗ್ಯ ಇಲಾಖೆ ಕಾರ್ಯವೈಖರಿ ಕುರಿತು ಜನರ ದಾರಿ ತಪ್ಪಿಸುವ ಸಾಧ್ಯತೆ ಇರುವುದರಿಂದ ಇಂತಹ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. "ತುರ್ತು ಸಂದರ್ಭ ಸೇರಿ ಯಾವುದೇ ಪರಿಸ್ಥಿತಿಯಲ್ಲಿ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಲು, ಸಾರ್ವಜನಿಕವಾಗಿ ಮಾಹಿತಿ ನೀಡಲು ಇಲಾಖೆಯ ಅನುಮತಿ ಅಗತ್ಯ," ಎಂದು ಕೇರಳ ಆರೋಗ್ಯ ಇಲಾಖೆ ನಿರ್ದೇಶಕ ವಿ.ಕೆ. ರಾಜು ತಿಳಿಸಿದ್ದಾರೆ. ಸೋಮವಾರ ಎಲ್ಲೆಲ್ಲಿ ಹೊಸ ಕೇಸ್‌? - ನೇಪಾಳ, ಥೈಲ್ಯಾಂಡ್‌, ಲ್ಯಾಟಿವಾ, ರಷ್ಯಾ, ಕ್ರೊವೇಷಿಯಾದಲ್ಲಿ ಮೊದಲ ಕೇಸ್‌ ಪತ್ತೆ - ಸುಮಾರು 15 ದೇಶಗಳ ಪ್ರಯಾಣಿಕರ ಪ್ರವೇಶ ನಿರ್ಬಂಧಿಸಿದ ಪಾಕಿಸ್ತಾನ - ಗೋವಾ ಕಡಲತೀರಕ್ಕೆ ಆಗಮಿಸಿದ ವಿದೇಶಿ ವ್ಯಾಪಾರಿ ಹಡಗಿನ ಐವರು ಸಿಬ್ಬಂದಿಗೆ ಪಾಸಿಟಿವ್‌, ಹಡಗಿನಲ್ಲಿಯೇ ಐಸೊಲೇಷನ್‌ - ದೇಶದಲ್ಲಿ ಅರ್ಹ ಶೇ.85ರಷ್ಟು ಜನರಿಗೆ ಒಂದು ಡೋಸ್‌ ಲಸಿಕೆ ನೀಡಲಾಗಿದೆ ಎಂದ ಕೇಂದ್ರ