'ಡಿ ಬಾಸ್' ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ! ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಬಂಧನ!

'ಚಾಲೆಂಜಿಂಗ್ ಸ್ಟಾರ್' ದರ್ಶನ್‌ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ!

'ಡಿ ಬಾಸ್' ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ! ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಬಂಧನ!
Linkup
ನಟ ದರ್ಶನ್‌ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿದ ಆರೋಪದ ಮೇಲೆ ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿದ್ದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಸಂಬಂಧ ಮೈಸೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆಯನ್ನು ಡಿಸಿಪಿ ಪ್ರದೀಪ್ ಗುಂಠಿ ವಿಚಾರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಎನ್ಆರ್ ಎಸಿಪಿ ಕಚೇರಿಗೆ ನಟ ಆಗಮಿಸಿದ್ದಾರೆ. ಯಾರೇ ಇದ್ದರೂ ನಾನು ಬಿಡುವುದಿಲ್ಲ! ಎನ್ಆರ್ ಎಸಿಪಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದರ್ಶನ್, 'ನನ್ನದೊಂದು ದಾಖಲೆ ಪೋರ್ಜರಿ ಆಗಿತ್ತು. 'ಅದು ಸಿಕ್ಕಿದೆ, ಬನ್ನಿ' ಎಂದು ಪೊಲೀಸರು ಹೇಳಿದ್ದರು. ಅದಕ್ಕೆ ಬಂದಿದ್ದೇನೆ. ಸದ್ಯ ನಾನೊಂದು ಹೇಳುವುದು, ಬೇರೆಯವರು ಒಂದು ಹೇಳುವುದು ಸರಿ ಆಗಲ್ಲ. ಎಲ್ಲ ಬಗೆಹರಿದ ಮೇಲೆ ನಾನೇ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಸದ್ಯ ಪೊಲೀಸ್ ಅಧಿಕಾರಿ ದೀಪಕ್ ಅವರು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರು ಇದ್ದಾರೆ, ಅವರು ಎಲ್ಲವನ್ನು ಹೊರಗೆ ತರುತ್ತಾರೆ. ನಾವೆಲ್ಲ ಸ್ನೇಹಿತರು ಚೆನ್ನಾಗಿದ್ದೇವೆ. ಸುಮ್ಮನೆ ಯಾರ ಮೇಲೂ ಗೂಬೆ ಕೂರಿಸೋದು ಬೇಡ. ಆ ಮಹಿಳೆಯೇ ಎಲ್ಲವನ್ನು ಹೇಳಬೇಕು. ಎಲ್ಲವೂ ಬಗೆಹರಿದರೆ ಡಿಟೈಲ್ ಆಗಿ ಮಾತನಾಡುತ್ತೇನೆ. ಇಲ್ಲಿ ಯಾವುದೇ ಬ್ಲ್ಯಾಕ್‌ಮೇಲ್ ಆಗಿಲ್ಲ. ಆದರೆ, ಇದರಲ್ಲಿ ಯಾರೇ ಇದ್ದರೂ ನಾನು ಬಿಡುವುದಿಲ್ಲ' ಎಂದು ಹೇಳಿದ್ದಾರೆ. ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇನ್ನು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಹೇಳಿಕೆ ನೀಡಿದ್ದಾರೆ. 'ನಾನೇ ಖುದ್ದಾಗಿ ಬೆಂಗಳೂರಿನ ಜಯನಗರದಲ್ಲಿ ದೂರು ನೀಡಿದ್ದೇನೆ. ಆ ಮಹಿಳೆ ಯಾಕೆ ಇಷ್ಟೊಂದು ಮುಂದುವರಿದಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಬೇಕಿದೆ. ತನಿಖೆಗೆ ಅನುಕೂಲ ಆಗಲಿ ಎಂದು ಮೈಸೂರಿನಲ್ಲಿ ದೂರು ನೀಡಿದ್ದೇವೆ. ನನ್ನ, ದರ್ಶನ್ ಮತ್ತು ಇತರೆ ಸ್ನೇಹಿತರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರು ನೀಡಿದ್ದೇವೆ. ಕಳೆದ 2 ತಿಂಗಳಿನಿಂದ ಇದು ನಡೆಯುತ್ತಿದೆ' ಎಂದಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ. ಅಂದಹಾಗೆ, ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಅರುಣಾಕುಮಾರಿ ಎಂಬ ಆರೋಪಿಯು, ದರ್ಶನ್ ಅವರ ಹೆಸರಿನಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡುವುದಕ್ಕೆ ಮುಂದಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಕೆಲ ದಿನಗಳ ಹಿಂದೆ 'ನಾನು ಬ್ಯಾಂಕ್ ಮ್ಯಾನೇಜರ್.. ನಿಮ್ಮ ಹೆಸರು ಬಳಸಿಕೊಂಡು ಲೋನ್ಗೆ ಅರ್ಜಿ ಹಾಕಿದ್ದಾರೆ. ಆಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ' ಎಂದು ನಟ ದರ್ಶನ್ ಬಳಿ ಮಾಹಿತಿ ಪಡೆಯಲು ಈ ಮಹಿಳೆ ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ.