'ಆದೇಶ ಪಾಲಿಸದವರಿಗೆ ದಂಡ ಹಾಕಿ, ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ'- ಜಗ್ಗೇಶ್‌ ಮನವಿ!

ಕೊರೊನಾವನ್ನು ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರ್ಫ್ಯೂ, ಲಾಕ್‌ಡೌನ್ ಜಾರಿ ಮಾಡುತ್ತಿರುವುದಿರಂದ ಜನರು ಮನೆಯಲ್ಲೇ ಇರಬೇಕು ಎಂದು ಸೂಚಿಸಿದೆ. ಆದರೂ, ಜನ ಹೊರಗೆ ಬಂದು ಪೊಲೀಸರಿಂದ ಒದೆ ತಿನ್ನುತ್ತಿದ್ದಾರೆ! ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

'ಆದೇಶ ಪಾಲಿಸದವರಿಗೆ ದಂಡ ಹಾಕಿ, ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ'- ಜಗ್ಗೇಶ್‌ ಮನವಿ!
Linkup
ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಲಾಕ್‌ಡೌನ್ ಜಾರಿ ಮಾಡುವ ಮೂಲಕ ಕೊರೊನಾವನ್ನು ಕಟ್ಟಿ ಹಾಕುವುದಕ್ಕೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಲಾಕ್‌ಡೌನ್‌ ಇದ್ದಾಗಿಯೂ ಕೂಡ ಕಲವರು ರಸ್ತೆಗೆ ಇಳಿಯುತ್ತಿದ್ದಾರೆ. ಹೀಗೆ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಪೊಲೀಸರು ಕೂಡ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ತಮ್ಮ ಲಾಠಿಗಳಿಗೆ ಕೆಲಸ ನೀಡಿರುವ ಪೊಲೀಸರು, ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಒದೆ ನೀಡುತ್ತಿದ್ದಾರೆ. ಆದರೆ, 'ನವರಸ ನಾಯಕ' ಈ ವಿಚಾರವಾಗಿ ಒಂದು ಮನವಿ ಮಾಡಿಕೊಂಡಿದ್ದಾರೆ. 'ಸರ್ಕಾರ ಮಾಡುವ ಆದೇಶಗಳನ್ನು ಪಾಲಿಸದವರಿಗೆ ದಂಡ ಹಾಕಿ, ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ' ಎಂದಿದ್ದಾರೆ. ಲಾಠಿ ಪ್ರಯೋಗ ಬೇಡವೆಂದ ಜಗ್ಗೇಶ್‌ ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್‌, 'ರಾಜ್ಯದ ಆರಕ್ಷಕ ಇಲಾಖೆಯ ಮುಖ್ಯಸ್ಥರಿಗೆ ವಿನಂತಿ, ಸರ್ಕಾರ ಹಾಗೂ ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ, ವಾಹನ ಜಪ್ತಿಮಾಡಿ, ತೊಂದರೆ ಇಲ್ಲಾ. ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ! ಯುವಕರಾದರೆ ಪರವಾಗಿಲ್ಲಾ, ತಡೆಯುತ್ತಾರೆ. ಆದರೆ ವಯಸ್ಸಾದವರು, ಪಾಪ ಯಾವ ಖಾಯಿಲೆ ಇರುತ್ತದೆಯೋ ನಿಮಗೇನು ತಿಳಿದಿರುತ್ತದೆ! ಕೆಲ ಅಧಿಕಾರಿಗಳು ಒಂದು ಏಟು ಕೊಟ್ಟು ಭಯಪಡಿಸುವ ಬದಲು ಪ್ರಾಣ ಹೋಗುವಂತೆ ಬಾರಿಸುತ್ತಾರೆ' ಎಂದು ಹೇಳಿದ್ದಾರೆ ಜಗ್ಗೇಶ್‌. ಧರೆಯೇ ಹತ್ತಿ ಉರಿಯುತ್ತಿದೆ 'ಈ ಹಾಳಾದ ಕೊರೊನಾ ಮನುಕುಲದ ಅನ್ನ, ದುಡಿಮೆ, ನೆಮ್ಮದಿಯನ್ನು ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲೂ ಮನವಿ, ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ಧರೆಯೇ ಹತ್ತಿ ಉರಿಯುತ್ತಿದೆ. ದಯಮಾಡಿ ಸ್ವಲ್ಪ ದಿನ ವೈದ್ಯಲೋಕದ ಮಾತಿನಂತೆ ಕೆಲ ತಿಂಗಳು ಎಚ್ಚರವಾಗಿ ಇದ್ದುಬಿಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಪಾರದರ್ಶಕ ವ್ಯವಸ್ಥೆಗೆ ಮನವಿ ಮಾಡಿದ್ದ ಜಗ್ಗೇಶ್‌ ಕೆಲ ದಿನಗಳ ಹಿಂದಷ್ಟೇ ಕೊರೊನಾ ರೋಗಿಗಳಿಗೆ ನೀಡುತ್ತಿತುವ ಚಿಕಿತ್ಸೆಯನ್ನು ಪಾರದರ್ಶಕವಾಗಿ ನೀಡುವಂತೆ ಜಗ್ಗೇಶ್ ಮನವಿ ಮಾಡಿಕೊಂಡಿದ್ದರು. 'ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ, ಸಾರ್ ಕೊರೊನಾ ರೋಗಿ ಅಡ್ಮಿಟ್ ಆದ 2-2 ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ). ಯಾವ ಚಿಕಿತ್ಸೆ ನೀಡುತ್ತಾರೆ ಎಂದು ಹೊರಗಿರುವ ಬಂಧುಗಳಿಗೆ ತಿಳಿಯದು! ಸಾವಾಗಿದೆ ಎಂದು ತಿಳಿಸುತ್ತಾರೆ, ಮುಖಸಹಿತ ನೋಡಲಾಗದು. ಬೆರಳೆಣಿಕೆಯ ಕೆಲ ಸಿಬ್ಬಂದಿ ಹೊರತುಪಡಿಸಿ, ವಿಷಯ ತಿಳಿಯಲು ತಜ್ಞರು ವೈಯಕ್ತಿಕವಾಗಿ ಸಿಗುವುದಿಲ್ಲ. ಪ್ರತಿ ರೋಗಿಯ ಮನೆಯವರಿಗೆ ದೂರದಿಂದ ನೋಡಲು ಅವಕಾಶ (ಸುರಕ್ಷಿತ ಕ್ರಮಗಳನ್ನು ಪಾಲಿಸಿ) ನೀಡಬೇಕು. ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುತ್ತಿಲ್ಲಾ' ಎಂದು ಜಗ್ಗೇಶ್‌ ಟ್ವೀಟ್ ಮಾಡಿದ್ದರು.