ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಕನ್ನಡದ ಯುವ ನಟರು!

ಕನ್ನಡದ ಪ್ರತಿಭಾವಂತ ನಟರು ಪರಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಈಗ ಕಾಮನ್‌. ಸದ್ಯಕ್ಕೆ ಪಕ್ಕದ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಮೂವರು ಯುವ ನಟರ ವಿವರ ಇಲ್ಲಿದೆ.

ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಕನ್ನಡದ ಯುವ ನಟರು!
Linkup
ಹರೀಶ್‌ ಬಸವರಾಜ್‌ ಕನ್ನಡದ ಪ್ರತಿಭಾವಂತ ನಟರು ಪರಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಈಗ ಕಾಮನ್‌. ಸದ್ಯಕ್ಕೆ ಪಕ್ಕದ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಮೂವರು ಯುವ ನಟರ ವಿವರ ಇಲ್ಲಿದೆ. ಸೂಪರ್ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಅಥವಾ ಅದ್ಭುತ ನಟನೆ ತೋರುವ ಕಲಾವಿದರನ್ನು ಎಲ್ಲಾ ಚಿತ್ರರಂಗದಲ್ಲಿಯೂ ಕೈ ಬೀಸಿ ಕರೆಯುತ್ತಾರೆ. ಈ ರೀತಿ ಹಲವು ಕಲಾವಿದರು ಬೇರೆ ಭಾಷೆಗಳ ಚಿತ್ರರಂಗದಿಂದ ಸ್ಯಾಂಡಲ್‌ವುಡ್‌ಗೆ ಬಂದು ಇಲ್ಲಿಯವರೇ ಆಗಿ ಹೋಗಿದ್ದಾರೆ. ಇನ್ನು ಕೆಲವರು ಇಲ್ಲಿಂದ ಬೇರೆ ಭಾಷೆಗೆ ಹೋಗಿ ಅಲ್ಲಿಯವರಾಗಿದ್ದಾರೆ. ಮತ್ತೆ ಕೆಲವರು ಅಲ್ಲಿ ಮತ್ತು ಇಲ್ಲಿಯೂ ತಮ್ಮ ಪ್ರತಿಭೆಯಿಂದ ಗಮನ ಸೆಳೆಯುತ್ತಿದ್ದಾರೆ. ಈ ಸಾಲಿಗೆ ಈಗ ಯುವ ನಟರಾದ ಬಾಲಾಜಿ ಮನೋಹರ್‌, ಇಶಾನ್‌, ನಟ ಕಮ್‌ ನಿರ್ದೇಶಕ ಅರವಿಂದ್‌ ಕುಪ್ಳೀಕರ್‌ ಸೇರಿದ್ದಾರೆ. ಹೌದು, ಈ ಮೂವರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ, ಬೇರೆ ಭಾಷೆಯಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬಾಲಾಜಿ ಮನೋಹರ್‌ ಮಲಯಾಳಂ ಚಿತ್ರದಲ್ಲಿ ನಟಿಸಿದರೆ, ಅರವಿಂದ್‌ ಕುಪ್ಳೀಕರ್‌ ಹಿಂದಿಯ ವೆಬ್‌ ಸೀರಿಸ್‌ ಒಂದರಲ್ಲಿ ನಟಿಸಿದ್ದಾರೆ. ಇಶಾನ್‌ ತೆಲುಗಿನ ವೆಬ್‌ ಸೀರಿಸ್‌ ಒಂದರಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಮಾಲಿವುಡ್‌ನಲ್ಲಿ ಬಾಲಾಜಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟರಲ್ಲಿಒಬ್ಬರಾದ ಬಾಲಾಜಿ ಮನೋಹರ್‌ ಈಗ ಮಲಯಾಳಂನ ಸ್ಟಾರ್‌ ನಿರ್ದೇಶಕ ಸತ್ಯನ್‌ ಅಂತಿಕಾಡ್‌ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ನ್ಯಾನ್‌ ಪ್ರಕಾಶನ್‌’ ಸಿನಿಮಾ ಖ್ಯಾತಿಯ ಸತ್ಯನ್‌ ಅಂತಿಕಾಡ್‌ರ ಈ ಸಿನಿಮಾದಲ್ಲಿ ಮಲಯಾಳಂನ ಸೂಪರ್‌ ಸ್ಟಾರ್‌ ಜಯರಾಮ್‌ ನಾಯಕರಾಗಿದ್ದು, ಇದಕ್ಕೆ ‘ಮಗಳ್‌’ ಎಂದು ಹೆಸರಿಡಲಾಗಿದೆ. ಇದರಲ್ಲಿ ಬಾಲಾಜಿ ಮನೋಹರ್‌ ಕನ್ನಡಿಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನನಗೆ ಒಮ್ಮೆ ಇದಕ್ಕಿದ್ದ ಹಾಗೆ ಸತ್ಯನ್‌ ಅವರ ಪುತ್ರ ಕರೆ ಮಾಡಿ ತಮ್ಮ ತಂದೆಯ ಸಿನಿಮಾದಲ್ಲಿ ನಟಿಸಬೇಕು ಎಂದರು. ನಾನು ರಂಗಭೂಮಿಯ ದಿನದಿಂದಲೂ ಸತ್ಯನ್‌ ಅವರ ಹೆಸರು ಕೇಳಿದ್ದೇನೆ. ಅವರ ಸಿನಿಮಾಗಳನ್ನು ನೋಡಿದ್ದೇನೆ. ಈಗ ಅವರ ಸಿನಿಮಾದಲ್ಲೇ ನಟಿಸಲು ಅವಕಾಶ ಸಿಕ್ಕಾಗ ಬಹಳ ಸಂತೋಷವಾಯಿತು. ಈಗಾಗಲೇ ನಾನು ಕೇರಳದಲ್ಲಿ ಇದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. 15 ದಿನಗಳ ಕಾಲ ಶೂಟಿಂಗ್‌ ನಡೆಯಲಿದೆ. ಇದೊಂದು ಹೊಸ ಸಿನಿಮಾ ಸೆಟ್‌ ಎನಿಸುವುದಿಲ್ಲ. ನಟ ಜಯರಾಮ್‌ ಅವರು ನನ್ನ ಪರ್ಫಾಮೆನ್ಸ್‌ ನೋಡಿ ಖುಷಿಯಾಗಿದ್ದಾರೆ’ ಎಂದು ಬಾಲಾಜಿ ಮನೋಹರ್‌ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಕುಪ್ಳೀಕರ್‌ ಕನ್ನಡದಲ್ಲಿ‘ಪುಕ್ಸಟ್ಟೆ ಲೈಫು’ ಸಿನಿಮಾ ಮೂಲಕ ಸೂಕ್ಷ್ಮ ಸಂವೇದನೆಯ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ಅರವಿಂದ್‌ ಕುಪ್ಳೀಕರ್‌ ಅವರು ಮೂಲತಃ ರಂಗಭೂಮಿ ನಟ. ನಟನೆ, ನಿರ್ದೇಶನ, ಲೈಟಿಂಗ್‌ ಡಿಸೈನರ್‌ ಹೀಗೆ ಹಲವು ಕೆಲಸಗಳನ್ನು ಮಾಡುವ ಅವರು ‘ಪುಕ್ಸಟ್ಟೆ ಲೈಫು’ ಸಿನಿಮಾ ನಂತರ ಹಿಂದಿಯ ಎರಡು ವೆಬ್‌ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಇವೆರಡು ವೆಬ್‌ ಸೀರಿಸ್‌ಗಳನ್ನು ನಿರ್ಮಾಣ ಮಾಡಿರುವುದು ಪ್ರತಿಷ್ಠಿತ ಬಿಬಿಸಿ ಸ್ಟುಡಿಯೋ ಎಂಬುದು ವಿಶೇಷ. ‘ನಾನು ನಟ ನಾನಾ ಪಾಟೇಕರ್‌ ಅವರ ‘ತಡ್ಕಾ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ ಮತ್ತು ಅದರಲ್ಲಿ ಒಂದು ಪಾತ್ರದಲ್ಲಿಯೂ ನಟಿಸಿದ್ದೆ. ಆಗ ಅಲ್ಲಿನ ಕಾಸ್ಟಿಂಗ್‌ ಡೈರೆಕ್ಟರ್‌ ನನಗೆ ಪರಿಚಯವಿದ್ದರು. ಅವರೇ ನನಗೆ ಈ ಎರಡು ವೆಬ್‌ ಸೀರಿಸ್‌ಗಳ ಆಫರ್‌ ನೀಡಿದರು. ಇದರಲ್ಲಿಒಂದು ಶಹದ್‌ ಅಲಿ ನಿರ್ದೇಶನ ಮಾಡಿರುವ ‘ಸೀಕ್ರೆಟ್ಸ್‌’, ಮತ್ತೊಂದು ವಿನಯ್‌ ಎಂಬವರು ನಿರ್ದೇಶನ ಮಾಡಿರುವ ‘ಪ್ರೆಸ್‌’ ಈ ಸೀರಿಸ್‌ಗಳಲ್ಲಿ ನಟಿ ಸೋನಾಲಿ ಬೇಂದ್ರೆ ಸೇರಿದಂತೆ ಬಾಲಿವುಡ್‌ನ ಹಲವು ತಾರೆಯರು ನಟಿಸಿದ್ದಾರೆ’ ಎಂದಿದ್ದಾರೆ ಅರವಿಂದ್‌ ಕುಪ್ಳೀಕರ್‌. ಈ ವೆಬ್‌ ಸೀರಿಸ್‌ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಸೀರಿಸ್‌ಗಳ ಎರಡನೇ ಸೀಸನ್‌ನಲ್ಲಿಯೂ ಇರುತ್ತಾರೆ ಎನ್ನಲಾಗುತ್ತಿದೆ. ಈ ನಡುವೆ ಅವರು ತಮ್ಮ ಮುಂದಿನ ಸಿನಿಮಾಗಾಗಿ ಕಥೆಯನ್ನೂ ಬರೆಯುತ್ತಿದ್ದಾರೆ. ಟಾಲಿವುಡ್‌ನಲ್ಲಿಇಶಾನ್‌ ರೋಗ್‌ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿರುವ ನಟ ಇಶಾನ್‌ ಅವರು ಪವನ್‌ ಒಡೆಯರ್‌ ನಿರ್ದೇಶನದ ‘ರೆಮೋ’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇವರು ಚಿತ್ರರಂಗಕ್ಕೆ ಎಂಟ್ರಿಯಾದಾಗ ಈ ಹುಡುಗ ನೋಡಲು ಕೊಂಚ ಬಾಲಿವುಡ್‌ ಹೀರೊನಂತಿದ್ದಾನೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ತಮ್ಮ ಎರಡನೇ ಸಿನಿಮಾವನ್ನು ಅಳೆದು ತೂಗಿ ಒಪ್ಪಿಕೊಂಡ ಇಶಾನ್‌, ತೆಲುಗಿನ ‘ಪರಂಪರಾ’ ಎಂಬ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ. ಇದರಲ್ಲಿ ಜಗಪತಿಬಾಬು, ಶರತ್‌ಕುಮಾರ್‌ ಸೇರಿದಂತೆ ಬಹು ದೊಡ್ಡ ತಾರಾಗಣವಿದೆ ಮತ್ತು ಇದನ್ನು ‘ಬಾಹುಬಲಿ’ ಸಿನಿಮಾ ನಿರ್ಮಿಸಿರುವ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದೆ ಎಂಬುದು ವಿಶೇಷ.