ಮಹಿಳಾ ಅಧಿಕಾರಿಗಳಿಗೆ ಖಾಯಂ ಹುದ್ದೆ; ಸೇನೆಗೆ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್‌

ಅರ್ಹ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ತಾನು ಆದೇಶಿಸಿದ್ದರೂ ಅದನ್ನು ಭಾರತೀಯ ಸೇನೆಯು ಕಡೆಗಣಿಸುತ್ತಿರುವುದು ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ತನ್ನ ಸುಪರ್ದಿಯಲ್ಲಿ ಭಾರತೀಯ ಸೇನೆ ಅಗ್ರಮಾನ್ಯ ಇರಬಹುದು. ಆದರೆ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್‌ ಸರ್ವೋಚ್ಚ ಎನ್ನುವುದನ್ನು ಮರೆಯದಿರಿ. ಈಗಾಗಲೇ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ಸಾಕಷ್ಟು ಅವಧಿಯನ್ನು ಸರಕಾರಕ್ಕೆ ಮತ್ತು ಭಾರತೀಯ ಸೇನೆಗೆ ಕೋರ್ಟ್‌ ನೀಡಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮಹಿಳಾ ಅಧಿಕಾರಿಗಳಿಗೆ ಖಾಯಂ ಹುದ್ದೆ; ಸೇನೆಗೆ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್‌
Linkup
ಹೊಸದಿಲ್ಲಿ: ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಸುಪ್ರೀಂ ಕೋರ್ಟ್‌ ನೀಡಿದ ಎಚ್ಚರಿಕೆಗೆ ಮಣಿದ ಸೇನೆಯು, ಎಲ್ಲ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನ್ವಯ ಕಾಯಂ ಹುದ್ದೆ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸೇನೆಯಲ್ಲಿನ ಲಿಂಗ ತಾರತಮ್ಯದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಮಹಿಳಾ ಅಧಿಕಾರಿಗಳಿಗೆ ಮತ್ತೊಂದು ಜಯ ಸಿಕ್ಕಂತಾಗಿದೆ. ‘ವುಮೆನ್‌ ಶಾರ್ಟ್‌ ಸರ್ವಿಸ್‌ ಕಮಿಷನ್‌ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡುವಂತೆ ಲೆಫ್ಟಿನೆಂಟ್‌ ಕರ್ನಲ್‌ ನಿತಿಶಾ ಪ್ರಕರಣದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಹಾಗಿದ್ದೂ ತಮಗೆ ಕಾಯಂ ನೇಮಕಾತಿ ನೀಡಲಾಗುತ್ತಿಲ್ಲ’ ಎಂದು ಆರೋಪಿಸಿ 11 ಮಹಿಳಾ ಸೇನಾಧಿಕಾರಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು, 10 ದಿನಗಳ ಒಳಗಾಗಿ ಈ 11 ಮಹಿಳಾ ಅಧಿಕಾರಿಗಳ ಸೇವೆ ಕಾಯಂಗೊಳಿಸಬೇಕು ಎಂದು ಆದೇಶಿಸಿತು. ಅಲ್ಲದೆ, ಕೋರ್ಟ್‌ ಮೆಟ್ಟಿಲೇರದೇ ಇರುವ ಇತರ ಅರ್ಹ ಮಹಿಳಾ ಅಧಿಕಾರಿಗಳಿಗೆ ಮೂರು ವಾರಗಳ ಒಳಗಾಗಿ ಕಾಯಂ ಹುದ್ದೆ ಕಲ್ಪಿಸಬೇಕು ಎಂದೂ ನಿರ್ದೇಶನ ನೀಡಿತು. ಅರ್ಹ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ತಾನು ಆದೇಶಿಸಿದ್ದರೂ ಅದನ್ನು ಭಾರತೀಯ ಸೇನೆಯು ಕಡೆಗಣಿಸುತ್ತಿರುವುದು ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ತನ್ನ ಸುಪರ್ದಿಯಲ್ಲಿ ಭಾರತೀಯ ಸೇನೆ ಅಗ್ರಮಾನ್ಯ ಇರಬಹುದು. ಆದರೆ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್‌ ಸರ್ವೋಚ್ಚ ಎನ್ನುವುದನ್ನು ಮರೆಯದಿರಿ. ಈಗಾಗಲೇ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ಸಾಕಷ್ಟು ಅವಧಿಯನ್ನು ಸರಕಾರಕ್ಕೆ ಮತ್ತು ಭಾರತೀಯ ಸೇನೆಗೆ ಕೋರ್ಟ್‌ ನೀಡಿದೆ. ಕಾಯಂ ನೇಮಕಾತಿ ಸಂಬಂಧ ಇನ್ನೂ ಕೂಡ ಕೋರ್ಟ್‌ ಮೆಟ್ಟಿಲು ಏರದೇ ಇರುವವರು, ಸೇನೆಯ ಅರ್ಹತಾ ಮಾನದಂಡ ಪೂರೈಸಿದಲ್ಲಿಅವರಿಗೂ ಕೂಡ ಕಾಯಂ ನೇಮಕಾತಿ ಕಲ್ಪಿಸಲೇಬೇಕು. ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಯು ಸುಪ್ರೀಂ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಹಠಮಾರಿತನ ಪ್ರದರ್ಶಿಸಲ್ಲ ಎಂಬ ವಿಶ್ವಾಸವಿದೆ’ ಎಂದು ನ್ಯಾ. ಚಂದ್ರಚೂಡ್‌ ಅವರಿದ್ದ ಪೀಠ ಹೇಳಿದೆ. ಕಳೆದ ಮಾರ್ಚ್ 25ರಂದು ಲೆಫ್ಟಿನೆಂಟ್‌ ಕರ್ನಲ್‌ ನಿತಿಶಾ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಕಾಯಂ ನೇಮಕಾತಿಗೆ ನಿಗದಿಪಡಿಸಿರುವ ಅರ್ಹತಾ ಮಾನದಂಡ ಗಳನ್ನು 'ನಿರಂಕುಶ ಮತ್ತು ತರ್ಕಬದ್ಧವಲ್ಲದ್ದು' ಎಂದು ಅಭಿಪ್ರಾಯಪಟ್ಟಿತ್ತು. ‘ಐದು ಅಥವಾ 10 ವರ್ಷಗಳು ಶಾರ್ಟ್‌ ಸರ್ವಿಸ್‌ ಕಮಿಷನ್‌ ಸೇವೆ ಪೂರೈಸಿದ್ದರೂ ಮೆಡಿಕಲ್‌ ಫಿಟ್‌ನೆಸ್‌ ಹೆಸರಲ್ಲಿ ಕೆಲವು ಮಾನದಂಡಗಳನ್ನು ನಿಗದಿಪಡಿಸಿಕೊಂಡು ಕಾಯಂ ನೇಮಕಾತಿಯಿಂದ ದೂರ ಇರಿಸಲಾಗುತ್ತಿದೆ. ಇದು ಲಿಂಗ ತಾರತಮ್ಯ’ ಎಂದು 72 ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ದೀರ್ಘ ವಿಚಾರಣೆ ನಡೆಸಿ ತೀರ್ಪು ನೀಡಿತ್ತು.