ಭಾರತಕ್ಕೆ ಚೀನಾವೇ ಅತಿ ದೊಡ್ಡ ಭದ್ರತಾ ಬೆದರಿಕೆ: ಜನರಲ್ ಬಿಪಿನ್ ರಾವತ್

ಹಿಮಾಲಯದ ಗಡಿ ಭಾಗದಲ್ಲಿ ಭಾರತದೊಂದಿಗೆ ನಿರಂತರ ತಂಟೆ ಮಾಡುತ್ತಿರುವ ಚೀನಾವು ಅತಿ ದೊಡ್ಡ ಭದ್ರತಾ ಬೆದರಿಕೆಯಾಗಿದೆ. ಹೀಗಾಗಿ ಸಂಪೂರ್ಣ ಸೇನೆಯ ಗಮನ ಅತ್ತ ಕೇಂದ್ರೀಕರಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಭಾರತಕ್ಕೆ ಚೀನಾವೇ ಅತಿ ದೊಡ್ಡ ಭದ್ರತಾ ಬೆದರಿಕೆ: ಜನರಲ್ ಬಿಪಿನ್ ರಾವತ್
Linkup
ಹೊಸದಿಲ್ಲಿ: ಚೀನಾವು ಭಾರತದ ಅತಿ ದೊಡ್ಡ ಭದ್ರತಾ ಬೆದರಿಕೆಯಾಗಿ ಪರಿಣಮಿಸಿದೆ ಮತ್ತು ಕಳೆದ ಒಂದು ವರ್ಷದಿಂದ ಸಾವಿರಾರು ಪಡೆಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಹಿಮಾಲಯದ ಭಾಗಕ್ಕೆ ರವಾನಿಸಲಾಗಿದ್ದು, ಅವು ಈವರೆಗೂ ಮೂಲ ನೆಲೆಗೆ ಮರಳಲು ಸಾಧ್ಯವಾಗಿಲ್ಲ ಎಂದು ಗಡಿಯಲ್ಲಿನ ಭಾರತದ ಸೇನೆಯ ಪರಿಸ್ಥಿತಿಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ತೆರೆದಿಟ್ಟಿದ್ದಾರೆ. ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ಪ್ರಯತ್ನಗಳ ನಡುವೆ ವಿಶ್ವಾಸದ ಕೊರತೆ ಮತ್ತು ಹೆಚ್ಚುತ್ತಿರುವ ಅನುಮಾನ ಬರುತ್ತಿವೆ ಎಂದು ರಾವತ್ ತಿಳಿಸಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಚೀನಾ ಸೇನಾ ಕಮಾಂಡರ್‌ಗಳ ಮಟ್ಟದ 13ನೇ ಸುತ್ತಿನ ಮಾತುಕತೆಯು, ಗಡಿಗಳಿಂದ ಎರಡೂ ಕಡೆಯ ಸೇನೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಚಾರವಾಗಿ ಒಪ್ಪಂದಕ್ಕೆ ಬರಲು ಸಾಧ್ಯವಾಗದೆ ಮುರಿದು ಬಿದ್ದಿತ್ತು. ತನ್ನ ಸುದೀರ್ಘ ವೈರಿ ಪಾಕಿಸ್ತಾನದಿಂದ ಚೀನಾದೆಡೆಗೆ ಯುದ್ಧ ತಂತ್ರ ಗಮನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವರ್ಗಾಯಿಸಿತ್ತು. ಕಳೆದ ವರ್ಷ ಭಾರತ ಮತ್ತು ಚೀನಾ ನಡುವೆ ನಾಲ್ಕು ದಶಕಗಳಲ್ಲಿಯೇ ಅತಿ ಮಾರಕ ಕದನದ ಬಳಿಕ ಚೀನಾ ಮತ್ತು ಭಾರತ ಸಂಘರ್ಷ ತೀವ್ರಗೊಂಡಿದೆ. ಅಲ್ಲಿಂದಲೂ, ಭಾರತ ಮತ್ತು ಚೀನಾ ಹಿಮಾಲಯದ ಗಡಿ ಭಾಗದ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿ, ಸೇನೆಗಳ ನಿಯೋಜನೆ ಮತ್ತು ಸೇನಾ ಉಪಕರಣಗಳ ಸ್ಥಾಪನೆಗೆ ಆದ್ಯತೆ ನೀಡುತ್ತಿವೆ. 'ಗಡಿಯಲ್ಲಿ ಹಾಗೂ ಸಮುದ್ರ ಭಾಗದಲ್ಲಿ ಯಾವುದೇ ದುಸ್ಸಾಹಸಗಳಿಗೆ ಪ್ರತಿಕ್ರಿಯೆ ನೀಡಲು ಭಾರತ ಸಿದ್ಧವಾಗಿದೆ' ಎಂದು ಜನರಲ್ ರಾವತ್ ಹೇಳಿದ್ದಾರೆ. 'ಚೀನೀಯರು ಎಲ್‌ಎಸಿಯ ಸಮೀಪದಲ್ಲಿ ಹಳ್ಳಿಗಳನ್ನು ನಿರ್ಮಿಸುತ್ತಿದ್ದಾರೆ. ತಮ್ಮ ನಾಗರಿಕರು ಅಥವಾ ಸೇನೆಯನ್ನು ಭವಿಷ್ಯದಲ್ಲಿ ಇಲ್ಲಿ ನೆಲೆಗೊಳಿಸಲು ಬಯಸಿರಬಹುದು. ಇದು ಇತ್ತೀಚಿನ ಮುಖಾಮುಖಿ ಬಳಿಕ ತ್ವರಿತವಾಗಿ ನಡೆಯುತ್ತಿದೆ' ಎಂದು ರಾವತ್ ತಿಳಿಸಿದ್ದಾರೆ. ಭಾರತದ ಗಡಿಯ ಒಳಗೆ ಚೀನಾ ದೊಡ್ಡ ಹಳ್ಳಿ ನಿರ್ಮಿಸುತ್ತಿದೆ ಎಂಬ ಅಮೆರಿಕ ರಕ್ಷಣಾ ಇಲಾಖೆಯ ವರದಿಗೆ ಬಿಪಿನ್ ರಾವತ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಆಡಳಿತವು ಭಾರತದ ಭದ್ರತೆಗೆ ಕಳವಳಕಾರಿಯಾಗಿದೆ ಎಂಬುದನ್ನು ವಿವರಿಸಿರುವ ರಾವತ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರು ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ನೆರವು ಪಡೆಯುವುದು ಹೆಚ್ಚುವ ಅಪಾಯವಿದೆ. ತಾಲಿಬಾನ್ ಉಗ್ರ ಸಂಘಟನೆಯು ಅಧಿಕಾರವನ್ನು ಮರಳಿ ಹಿಡಿದಿರುವುದು ಈ ಭಾಗದಲ್ಲಿರುವ ಉಗ್ರರ ಗುಂಪುಗಳಿಗೆ ಸಹಾಯ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಚೀನಾದೊಂದಿಗಿನ ಹಗೆತನ, ತಾಲಿಬಾನ್‌ ಜತೆಗಿನ ಭದ್ರತಾ ಕಳವಳ ಹಾಗೂ ಪಾಕಿಸ್ತಾನದೊಂದಿಗಿನ ಗುದ್ದಾಟಗಳ ಹಿನ್ನೆಲೆಯಲ್ಲಿ ಉತ್ತರ ಹಾಗೂ ಪಶ್ಚಿಮ ಗಡಿಯಲ್ಲಿನ ಭಾರತದ ಸೇನೆಯ ಕಮಾಂಡೋ ಪಡೆಗಳ ಮರು ಸಂಘಟನೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.