ಮಳೆಗೆ ಹತ್ತಿ ಬರ್ಬಾದ್‌: ಚಿನ್ನದ ಬೆಲೆಯಿದ್ದರೂ ಗುಣಮಟ್ಟ ನಷ್ಟ; ರೈತರಿಗೆ ಸಂಕಷ್ಟ!

ಮಳೆಯಿಂದಾಗಿ ಒಂದೆಡೆ ಹತ್ತಿ ಗಿಡ ಹೊಲದಲ್ಲಿ ಕೊಳೆಯುವಂತಾಗಿದ್ದರೆ, ಇತ್ತ ಮಾರುಕಟ್ಟೆಗೆ ತಂದ ಹತ್ತಿ ಮಾರಾಟಕ್ಕೆ ರೈತರು ಹರಸಾಹಸ ಪಡುವಂತಾಗಿದೆ. ರೈತರು ಮತ್ತು ವರ್ತಕರ ಮಧ್ಯೆ ದಿನವೂ ಹತ್ತಿ ಮಾರಾಟಕ್ಕೆ ವಾಗ್ವಾದಕ್ಕೆ ದಾರಿ ಮಾಡುತ್ತಿದೆ.

ಮಳೆಗೆ ಹತ್ತಿ ಬರ್ಬಾದ್‌: ಚಿನ್ನದ ಬೆಲೆಯಿದ್ದರೂ ಗುಣಮಟ್ಟ ನಷ್ಟ; ರೈತರಿಗೆ ಸಂಕಷ್ಟ!
Linkup
ರಾಯಚೂರು: ಕೆಲವೇ ಕೆಲ ದಿನಗಳ ಹಿಂದೆ ಹತ್ತಿಗೆ ಚಿನ್ನದ ಬೆಲೆ ಬಂದಿದ್ದರಿಂದ ಸಂತಸದಿಂದ ಬೀಗಿದ್ದ ರೈತರಿಗೆ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ. ಚಿನ್ನದಂಥ ಬೆಲೆ ಮತ್ತು ಬೆಳೆದಿದ್ದ ರೈತರೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಳೆಯಿಂದ ಹತ್ತಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ ಎಂದು ಖರೀದಿದಾರರು ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರಾಯಚೂರು ಜಿಲ್ಲೆಗೆ ಅಕಾಲಿಕ ಮಳೆಯಿಂದ ಹತ್ತಿ ಬೆಳೆ ಹಾಳಾಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ. ಒಳ್ಳೆಯ ಫಸಲು ಹಾಗೂ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂಥ ಚಿನ್ನದ ಬೆಲೆ ಹತ್ತಿಗೆ ದೊರೆಯುತ್ತಿರುವುದು ರೈತರಿಗೆ ಆರ್ಥಿಕ ಸ್ಥಿತಿ ಸುಧಾರಣೆಯ ಆಸೆ ಚಿಗುರಿತ್ತು. ಆದರೆ ಅಕಾಲಿಕ ಮಳೆ ರೈತರಿಗೆ ಕಣ್ಣೀರು ತರಿಸಿದೆ. ಮಳೆ ತಂದ ಸಂಕಷ್ಟ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಮಳೆ ಮತ್ತು ಮೋಡಕವಿದ ವಾತಾವರಣ ಹಾಗೂ ಹತ್ತಿ ಬೆಳೆದ ರೈತರನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಉತ್ತಮ ರೀತಿಯಲ್ಲಿ ಹತ್ತಿ ಬೆಳೆದಿದ್ದರು. ರೈತರ ಮೊಗದಲ್ಲಿ ಖುಷಿಯಿತ್ತು. ಆದರೆ ಮೂರು ದಿನ ಸುರಿದ ಮಳೆ ಹತ್ತಿಯನ್ನು ಮಣ್ಣು ಪಾಲಾಗಿಸಿದೆ. ಮಳೆಯಿಂದಾಗಿ ಒಂದೆಡೆ ಹತ್ತಿ ಗಿಡ ಹೊಲದಲ್ಲಿ ಕೊಳೆಯುವಂತಾಗಿದ್ದರೆ. ಇತ್ತ ಮಾರುಕಟ್ಟೆಗೆ ತಂದ ಹತ್ತಿ ಮಾರಾಟಕ್ಕೆ ರೈತರು ಹರಸಾಹಸ ಪಡುವಂತಾಗಿದೆ. ರೈತರು ಮತ್ತು ವರ್ತಕರ ಮಧ್ಯೆ ದಿನವೂ ಹತ್ತಿ ಮಾರಾಟಕ್ಕೆ ವಾಗ್ವಾದಕ್ಕೆ ದಾರಿ ಮಾಡುತ್ತಿದೆ. ಬೆಲೆ ಕುಸಿತ ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ಹತ್ತಿಗೆ ಚಿನ್ನದ ಬೆಲೆ ಸಿಕ್ಕಿತ್ತು. ಕನಿಷ್ಠ 7 ರಿಂದ ಗರಿಷ್ಠ 8500 ಸಾವಿರ ರೂ. ವರೆಗೆ ಪ್ರತಿ ಕ್ವಿಂಟಲ್‌ ದರವಿತ್ತು. ಆದರೆ ಅಕಾಲಿಕ ಮಳೆಯಾಗುತ್ತಿದ್ದಂತೆಯೇ ಅದರ ಗುಣಮಟ್ಟಕ್ಕೆ ಪೆಟ್ಟು ಕೊಟ್ಟಿದೆ. ಪರಿಣಾಮ ಈಗ ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳು ನಿಗದಿ ಮಾಡುವ ದರವೇ ಅಂತಿಮ ಮತ್ತು ಅದರಲ್ಲಿಯೂ ಅನೇಕ ರೀತಿಯಲ್ಲಿ ಬೇರೆ ಬೇರೆ ಕಾರಣವನ್ನೊಡ್ಡಿ ನಿಗದಿ ಮಾಡಿದ ದರವನ್ನು ಕಡಿತ ಮಾಡಲಾಗುತ್ತಿದೆ. ಕೇಂದ್ರ ಸರಕಾರವು ನಿಗದಿ ಮಾಡಿದ ಬೆಂಬಲ ಬೆಲೆಗೆ ಮಾರುಕಟ್ಟೆಯಲ್ಲಿ ಈಗ ಕೇಳುವವರೇ ಇಲ್ಲ. ಮಳೆಯಿಂದ ಹತ್ತಿಯಲ್ಲಿ ತೇವಾಂಶವಿದೆ. ಹೀಗಾಗಿ ಇಂತಿಷ್ಟೇ ಬೆಲೆ ಎಂದು ಮಧ್ಯವರ್ತಿಗಳು ನಿಗದಿ ಮಾಡುವ ದರಕ್ಕೆ ರೈತರು ಮಾರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿನ್ನದಂಥ ಬೆಲೆ ಕಂಡಿದ್ದ ಹತ್ತಿ ಬೆಳೆಗಾರರಿಗೆ ಮಳೆರಾಯ ತಂದ ಸಂಕಷ್ಟ ಅಷ್ಟಿಷ್ಟಲ್ಲ. 391 ಹೆಕ್ಟೇರ್‌ ಪ್ರದೇಶ ಹತ್ತಿ ಹಾಳು ರಾಯಚೂರು ಜಿಲ್ಲೆಯಲ್ಲಿ ಅಂದಾಜು 154718 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದು, ರಾಯಚೂರು ತಾಲೂಕಿನಲ್ಲಿ 58,441 ಎಕರೆ ಮಾನ್ವಿ 25000 ಎಕರೆ, ಸಿರವಾರ 9315 ಎಕರೆ, ದೇವದುರ್ಗ 55776 ಎಕರೆ, ಲಿಂಗಸುಗೂರು 1661ಎಕರೆ, ಮಸ್ಕಿ 6373 ಎಕರೆ, ಸಿಂಧನೂರು ತಾಲೂಕಿನಲ್ಲಿ 3888 ಎಕರೆಯಲ್ಲಿ ಹತ್ತಿ ಬೆಳೆದಿದ್ದಾರೆ. ಆದರೆ ಜಿಲ್ಲೆಯಲ್ಲಿ ಇತ್ತೀಚೆಗೆ ದೇವದುರ್ಗ ಹೊರತುಪಡಿಸಿ ಇನ್ನುಳಿದ ಎಲ್ಲ ಕಡೆ ಮಳೆಯಾಗಿದೆ. ಅದರಿಂದ 391 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆ ಹಾಳಾಗಿದೆ ಎಂದು ಜಿಲ್ಲಾಡಳಿತ ಪ್ರಾಥಮಿಕ ಅಂದಾಜಿನಲ್ಲಿ ತಿಳಿಸಿದೆ. ಅಕಾಲಿಕ ಮಳೆಯಿಂದ ಹತ್ತಿ ಬೆಳೆಯಲ್ಲಿ ತೇವಾಂಶ ಹೆಚ್ಚಾಗಿದೆ ಎಂದು ಹೇಳಿ ಮಾರುಕಟ್ಟೆಯಲ್ಲಿ ಖರೀದಿದಾರರು ಉತ್ತಮ ದರ ನಿಗದಿ ಮಾಡುತ್ತಿಲ್ಲ. ಹತ್ತಿ ಬೆಳೆಗಾರರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು. ಸರಕಾರ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ ರೈತರನ್ನು ಕಾಪಾಡಬೇಕು. ಶರಣಪ್ಪ ಮರಳಿ, ಜಿಲ್ಲಾಧ್ಯಕ್ಷ, ಕರ್ನಾಟಕ ರೈತ ಸಂಘ, ರಾಯಚೂರು, ಅಕಾಲಿಕ ಮಳೆಯಿಂದ ಹತ್ತಿ ಬೆಳೆಗೆ ನಷ್ಟವಾಗಿದ್ದು ನಿಜ. ಸದ್ಯ ಸಮೀಕ್ಷೆ ನಡೆಯುತ್ತಿದ್ದು, ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಪರಿಹಾರ ದೊರಕಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ನಯೀಮ್‌ ಹುಸೇನ್‌, ಪ್ರಭಾರಿ ಜೆಡಿ, ಕೃಷಿ ಇಲಾಖೆ ರಾಯಚೂರು