ಬೆಂಗಳೂರಿನಲ್ಲಿ ಆಮ್‌ ಆದ್ಮಿ ಪಾರ್ಟಿಗೆ 'ವಕೀಲ್‌ ಸಾಬ್‌' ಜಗದೀಶ್ ಸೇರ್ಪಡೆ

'ಕಾರ್ಮಿಕರು, ರೈತರು ಹಾಗೂ ಯುವ ಜನತೆಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ತೃಪ್ತಿಯಿದೆ. ನನ್ನಂತೆಯೇ ಎಎಪಿ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಪಕ್ಷ ಸೇರ್ಪಡೆಯಿಂದ ನನ್ನ ಹೋರಾಟದ ಶಕ್ತಿ ಹೆಚ್ಚಾಗಲಿದೆ' - ವಕೀಲ ಜಗದೀಶ್ ವಿಶ್ವಾಸ

ಬೆಂಗಳೂರಿನಲ್ಲಿ ಆಮ್‌ ಆದ್ಮಿ ಪಾರ್ಟಿಗೆ 'ವಕೀಲ್‌ ಸಾಬ್‌' ಜಗದೀಶ್ ಸೇರ್ಪಡೆ
Linkup
: ಅಭಿವೃದ್ಧಿ ಪರ ಆಡಳಿತ ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್‌ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ ಎಂದು ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ. ಎನ್‌. ಜಗದೀಶ್‌ ಮಹಾದೇವ್‌ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ. ಎನ್‌. ಜಗದೀಶ್‌, 'ಸುಮಾರು ಹತ್ತು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ. ಇದಕ್ಕಾಗಿ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಮುನ್ನಡೆಯುತ್ತಿದ್ದೇನೆ. ಅನೇಕ ಸಂದರ್ಭಗಳಲ್ಲಿ ಕಾರ್ಮಿಕರು, ರೈತರು ಹಾಗೂ ಯುವ ಜನತೆಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ತೃಪ್ತಿಯಿದೆ. ನನ್ನಂತೆಯೇ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಪಕ್ಷ ಸೇರ್ಪಡೆಯಿಂದ ನನ್ನ ಹೋರಾಟದ ಶಕ್ತಿ ಹೆಚ್ಚಾಗಲಿದೆ. ಪಕ್ಷಕ್ಕೂ ನನ್ನಿಂದ ಅನುಕೂಲವಾಗುವ ದೃಢ ವಿಶ್ವಾಸವಿದೆ' ಎಂದು ಹೇಳಿದರು. 'ದೆಹಲಿಯ ಕೇಜ್ರಿವಾಲ್‌ ಸರ್ಕಾರವು ಜನಪರ ಆಡಳಿತ ನೀಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಜನ ವಿರೋಧಿ ಆಡಳಿತ ನೀಡುತ್ತಿದೆ. ಕೇಜ್ರಿವಾಲ್‌ ಆಡಳಿತದಲ್ಲಿ ಕುಡಿಯುವ ನೀರು, ವಿದ್ಯುತ್‌, ವೈದ್ಯಕೀಯ ಸೌಲಭ್ಯ ಮುಂತಾದವುಗಳು ಒಂದು ಮಿತಿಯವರೆಗೆ ಉಚಿತವಾಗಿ ಸಿಗುತ್ತಿದೆ. ಆದರೆ ಮೋದಿ ಸರ್ಕಾರವು ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಬೆಲೆಯನ್ನು ಮನ ಬಂದಂತೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಹೈರಾಣಾಗಿಸುತ್ತಿದೆ. ಇದರ ವಿರುದ್ಧ ಹೋರಾಡಲು ಯುವ ಜನತೆ ಮುಂದಾಗಬೇಕು. ಭ್ರಷ್ಟ ಹಾಗೂ ಕೋಮುವಾದಿ ನಾಯಕರುಗಳೇ ತುಂಬಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರತಿಜ್ಞೆ ಮಾಡಬೇಕು' ಎಂದು ಕೆ. ಎನ್‌. ಜಗದೀಶ್‌ ಹೇಳಿದರು. ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಮಾತನಾಡಿ, 'ಒಳ್ಳೆಯ ಜನರು ಒಗ್ಗೂಡಿದರೆ ಸಾಮಾನ್ಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು ಎಂಬುದನ್ನು ದೆಹಲಿ ರಾಜಕೀಯವು ನಮಗೆ ತೋರಿಸಿದೆ. ದಶಕಗಳಿಂದ ನಮ್ಮ ರಾಜ್ಯದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ವಿವಿಧ ಸಮಸ್ಯೆಗಳು ಮತ್ತು ಅನ್ಯಾಯದ ವಿರುದ್ಧ ಪ್ರತ್ಯೇಕವಾಗಿ ಹೋರಾಡುತ್ತಿವೆ. ದೊಡ್ಡ ಪ್ರಮಾಣದ ಬದಲಾವಣೆ ತರಲು ಅಂಥವರೆಲ್ಲರೂ ಒಟ್ಟಾಗಿ ಸೇರುವ ಸಮಯ ಈಗ ಬಂದಿದೆ. 'ವಕೀಲ್ ಸಾಬ್‌' ಎಂದು ಪ್ರೀತಿಯಿಂದ ಕರೆಯಲ್ಪಡುವ ಕೆ. ಎನ್‌. ಜಗದೀಶ್‌ ಅವರು ಸಾಮಾನ್ಯ ಜನರಿಗಾಗಿ ಧೈರ್ಯದಿಂದ ಹೋರಾಡಿ ರಾಜ್ಯಾದ್ಯಂತ ಜನರ ಹೃದಯ ಗೆದ್ದಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಕೆ. ಎನ್. ಜಗದೀಶ್‌ ಅವರಿಗೆ ಅನೇಕ ಹಿತೈಷಿಗಳು ಮತ್ತು ಅಪಾರ ಅನುಯಾಯಿಗಳಿರುವುದು ನಮ್ಮ ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪಕ್ಷದ ಸಂದೇಶವನ್ನು ನಮ್ಮ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಸಹಾಯ ಮಾಡುತ್ತದೆ' ಎಂದು ಹೇಳಿದರು. ಆಮ್‌ ಆದ್ಮಿ ಪಾರ್ಟಿಯ ನಗರದ ಅಧ್ಯಕ್ಷ ಮೋಹನ್‌ ದಾಸರಿ, ಹಿರಿಯ ಮುಖಂಡರಾದ ಲಕ್ಷ್ಮೀಕಾಂತ ರಾವ್‌, ನಂಜಪ್ಪ ಕಾಳೇಗೌಡ, ಕುಶಲಸ್ವಾಮಿ, ಉಷಾ ಮೋಹನ್‌, ಬಿ. ಟಿ. ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್‌ ವಿ. ಸದಂ ಹಾಗೂ ಇತರೆ ಮುಖಂಡರು ಮತ್ತು ಕೆ. ಎನ್‌. ಜಗದೀಶ್‌ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.