ಬೆಂಗಳೂರು: ಸಾರ್ವಜನಿಕರ ಧರ್ಮದೇಟಿಗೆ ಹೆದರಿ ಚಿನ್ನದ ಸರ ನುಂಗಿದ ಕಳ್ಳ! ಸ್ಕ್ಯಾನಿಂಗ್ ವೇಳೆ ಪತ್ತೆ

ಸಾರ್ವಜನಿಕರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬಂಧಿತ ಕಳ್ಳರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರಿಗೂ ಸ್ಕ್ಯಾನಿಂಗ್‌ ಮತ್ತು ಎಕ್ಸ್‌ರೇ ಮಾಡಿದಾಗ ವಿಜಿ ಹೊಟ್ಟೆಯೊಳಗೆ ಚಿನ್ನದ ಸರ ಇರುವುದು ಪತ್ತೆಯಾಗಿತ್ತು. ಆತನನ್ನು ಈ ಬಗ್ಗೆ ಪ್ರಶ್ನಿಸಿದಾಗ ತಾನು ಸಿಕ್ಕಿ ಬೀಳುವ ಭೀತಿಯಿಂದ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ನುಂಗಿರುವುದಾಗಿ ಹೇಳಿದ್ದ.

ಬೆಂಗಳೂರು: ಸಾರ್ವಜನಿಕರ ಧರ್ಮದೇಟಿಗೆ ಹೆದರಿ ಚಿನ್ನದ ಸರ ನುಂಗಿದ ಕಳ್ಳ! ಸ್ಕ್ಯಾನಿಂಗ್ ವೇಳೆ ಪತ್ತೆ
Linkup
ಬೆಂಗಳೂರು: ಸಾರ್ವಜನಿಕರ ಧರ್ಮದೇಟಿಗೆ ಅಂಜಿದ ಖದೀಮನೊಬ್ಬ ಕದ್ದ ಚಿನ್ನದ ಸರ ನುಂಗಿರುವ ಘಟನೆ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಖದೀಮರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದರು. ಆಸ್ಪತ್ರೆಯಲ್ಲಿ ಸ್ಕ್ಯಾ‌ನಿಂಗ್‌ಗೆ ಒಳಪಡಿಸಿದಾಗ ಆರೋಪಿಯೊಬ್ಬನ ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆಯಾಗಿದೆ. ಕೆ.ಆರ್‌.ಮಾರುಕಟ್ಟೆಯ ವಿಜಿ(25), ಸಂಜಯ್‌(25) ಬಂಧಿತರು. ಎಂ.ಟಿ.ಸ್ಟ್ರೀಟ್‌ನ ನಿವಾಸಿ ಹೇಮಾ(32) ಸರಗಳ್ಳತನಕ್ಕೆ ಒಳಗಾದವರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಹೇಮಾ ಶನಿವಾರ ರಾತ್ರಿ 9 ಗಂಟೆಗೆ ಚಿಕ್ಕಪೇಟೆಯ ಎಂ.ಟಿ.ಸ್ಟ್ರೀಟ್‌ನ ಅಂಗಡಿಯಿಂದ ರಕ್ಷಾ ಬಂಧನ ಖರೀದಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ಆ ವೇಳೆ ಮೂವರು ಆರೋಪಿಗಳು ಇವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಮೂವರ ಪೈಕಿ ವಿಜಿ, ಹೇಮಾ ಕತ್ತಿನಲ್ಲಿದ್ದ 80 ಗ್ರಾಂ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಹೇಮಾ ತನ್ನ ಕತ್ತಿನಲ್ಲಿದ್ದ ಸರವನ್ನು ಗಟ್ಟಿಯಾಗಿ ಹಿಡಿದು ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಇವರ ಚೀರಾಟ ಕೇಳಿ ಸ್ಥಳಕ್ಕೆ ಸಾರ್ವಜನಿಕರು ಬರುತ್ತಿರುವುದನ್ನು ಗಮನಿಸಿದ ಕಳ್ಳರು ಅಲ್ಲಿಂದ ಓಡಿ ಹೋಗಿದ್ದರು. ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಹಿಗ್ಗಾ-ಮುಗ್ಗಾ ಥಳಿಸಿ ಕೆ.ಆರ್‌.ಮಾರುಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದರು. ಶೇ.95ರಷ್ಟು ಚಿನ್ನದ ಸರ ಹೇಮಾ ಕೈಯಲ್ಲಿದ್ದರೆ, ಶೇ.5ರಷ್ಟನ್ನು ಆರೋಪಿಗಳು ಲಪಟಾಯಿಸಿದ್ದರು. ಸಾರ್ವಜನಿಕರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬಂಧಿತ ಕಳ್ಳರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರಿಗೂ ಸ್ಕ್ಯಾನಿಂಗ್‌ ಮತ್ತು ಎಕ್ಸ್‌ರೇ ಮಾಡಿದಾಗ ವಿಜಿ ಹೊಟ್ಟೆಯೊಳಗೆ ಚಿನ್ನದ ಸರ ಇರುವುದು ಪತ್ತೆಯಾಗಿತ್ತು. ಆತನನ್ನು ಈ ಬಗ್ಗೆ ಪ್ರಶ್ನಿಸಿದಾಗ ತಾನು ಸಿಕ್ಕಿ ಬೀಳುವ ಭೀತಿಯಿಂದ ಕೈಯಲ್ಲಿದ್ದ ಚಿನ್ನದ ಸರದ ತುಂಡನ್ನು ನುಂಗಿರುವುದಾಗಿ ಹೇಳಿದ್ದ. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಆರೋಪಿ ವಿಜಿ ಹೊಟ್ಟೆಯೊಳಗಿರುವ ಸರದ ತುಂಡು ಹೊರ ತೆಗೆದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.