ನಾಲ್ವರು ಅಂಧರಿಗೆ ಹೊಸಬೆಳಕು ನೀಡಿದ ‘ದೊಡ್ಮನೆ ದೀಪ’: ಪುನೀತ್ ಅವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಭಾಗ್ಯ

ಪುನೀತ್ ರಾಜ್‌ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧರಿಗೆ ದೃಷ್ಟಿ ಭಾಗ್ಯ ಸಿಕ್ಕಿದೆ. ಈ ಬಗ್ಗೆ ಇಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ನಾಲ್ವರು ಅಂಧರಿಗೆ ಹೊಸಬೆಳಕು ನೀಡಿದ ‘ದೊಡ್ಮನೆ ದೀಪ’: ಪುನೀತ್ ಅವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಭಾಗ್ಯ
Linkup
ತಂದೆ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಹಾಗೂ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರಂತೆಯೇ ಪುತ್ರ ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಪುನೀತ್ ರಾಜ್‌ಕುಮಾರ್ ಅವರ ಎರಡು ಕಣ್ಣುಗಳಿಂದ ಇದೀಗ ನಾಲ್ವರು ಅಂಧರಿಗೆ ಹೊಸಬೆಳಕು ಲಭಿಸಿದಂತಾಗಿದೆ. ಹೌದು, ಪುನೀತ್ ರಾಜ್‌ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧರಿಗೆ ದೃಷ್ಟಿ ಭಾಗ್ಯ ಸಿಕ್ಕಿದೆ. ಈ ಬಗ್ಗೆ ಇಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ನಾಲ್ವರಿಗೆ ದೃಷ್ಟಿ ಭಾಗ್ಯ ‘’ದಾನ ಪಡೆದ ಕಣ್ಣುಗಳು ಆರೋಗ್ಯವಾಗಿದ್ದರೆ, ಕಾರ್ನಿಯಾವನ್ನು ಭಾಗ (ಸ್ಲೈಸ್) ಮಾಡಬಹುದು. ಕೆಲವರಿಗೆ ಕಾರ್ನಿಯಾದ ಮುಂಭಾಗ ತೊಂದರೆಯಿರುತ್ತದೆ. ಕೆಲವರಿಗೆ ಕಾರ್ನಿಯಾದ ಹಿಂಭಾಗ ತೊಂದರೆಯಿರುತ್ತದೆ. ಹಿಂದೆಲ್ಲಾ ನಾವು ಪೂರ್ತಿ ಕಾರ್ನಿಯಾವನ್ನು ಬದಲಾಯಿಸುತ್ತಿದ್ದೆವು. ಆದ್ರೀಗ ತಂತ್ರಜ್ಞಾನ ಮುಂದುವರೆದಿದೆ. ಕಣ್ಣುಗಳನ್ನು ಪದರದ ರೀತಿ ಭಾಗ (ಸ್ಲೈಸ್) ಮಾಡಲು ಸಾಧ್ಯವಿದ್ದು, ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ಜೋಡಿಸಿದ್ದೇವೆ. ಆಧುನಿಕ ತಂತ್ರಜ್ಞಾನದ ಮೂಲಕ ಅಪ್ಪು ಅವರ ಎರಡು ಕಣ್ಣುಗಳನ್ನು ನಾಲ್ಕು ಮಂದಿಗೆ ಜೋಡಿಸಿದ್ದೇವೆ. ಒಂದೇ ದಿನದಲ್ಲಿ ಒಬ್ಬರ ಕಣ್ಣುಗಳನ್ನು ನಾಲ್ಕು ಮಂದಿಗೆ ಜೋಡಿಸಿದ್ದು ನಮ್ಮ ರಾಜ್ಯದಲ್ಲಿ ಇದೇ ಮೊದಲು’’ ಎಂದು ಡಾ.ಭುಜಂಗ ಶೆಟ್ಟಿ ಹೇಳಿದ್ದಾರೆ. ಓರ್ವ ಯುವತಿ, ಮೂವರು ಯುವಕರಿಗೆ ಅಪ್ಪು ಕಣ್ಣು ಜೋಡಣೆ ‘’ನಾಲ್ಕು ಜನರಿಗೆ ಶಸ್ತ್ರಚಿಕಿತ್ಸೆ ಆಗಿದೆ. ನಾಲ್ವರೂ ಚೆನ್ನಾಗಿದ್ದಾರೆ. ಶನಿವಾರ ಶಸ್ತ್ರಚಿಕಿತ್ಸೆ ಆಯ್ತು. ಓರ್ವ ಯುವತಿ ಮತ್ತು ಮೂವರು ಯುವಕರಿಗೆ ಅಪ್ಪು ಅವರ ಕಣ್ಣುಗಳನ್ನು ಜೋಡಿಸಲಾಗಿದೆ. ಯುವ ಪೀಳಿಗೆಯವರಿಗೆ ಕಣ್ಣುಗಳನ್ನು ಜೋಡಿಸಲಾಗಿದೆ’’ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ. ಅಪ್ಪು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಆದರೆ, ನಾಲ್ವರು ಅಂಧರ ಬಾಳಿಗೆ ಬೆಳಕಾಗುವ ಮೂಲಕ ಪುನೀತ್ ರಾಜ್‌ಕುಮಾರ್ ಜೀವಂತವಾಗಿದ್ದಾರೆ. ನೇತ್ರದಾನ ಮಹಾದಾನ ನೇತ್ರದಾನ ಮಹಾದಾನ ಎಂಬುದನ್ನು ನಂಬಿದ್ದ ಡಾ.ರಾಜ್‌ಕುಮಾರ್ ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದು 1994ರಲ್ಲಿ. ನೇತ್ರ ಬ್ಯಾಂಕ್ ಸ್ಥಾಪನೆಗೊಂಡಿದ್ದು ಅದೇ ಸಮಯದಲ್ಲಿ. ನೇತ್ರ ಬ್ಯಾಂಕ್‌ಅನ್ನು ಉದ್ಘಾಟನೆ ಮಾಡಿದ ಡಾ.ರಾಜ್‌ಕುಮಾರ್ ತಮ್ಮ ಕಣ್ಣುಗಳನ್ನು ಮರಣಾನಂತರ ದಾನವಾಗಿ ಕೊಡಲು ಒಪ್ಪಿಗೆ ನೀಡಿದ್ದರು. ಅದರಂತೆ ಡಾ.ರಾಜ್‌ಕುಮಾರ್ ಇಹಲೋಕ ತ್ಯಜಿಸಿದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಡಾ.ರಾಜ್‌ಕುಮಾರ್‌ರವರ ಈ ನಡೆಯನ್ನು ಹಲವು ಜನ ಅನುಸರಿಸಿ, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಅಪ್ಪು ಅವರಿಂದ ಪ್ರೇರಣೆ ಪುನೀತ್ ರಾಜ್‌ಕುಮಾರ್ ಅವರ ದೇಹಾಂತ್ಯದ ಬಳಿಕವೂ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದರಿಂದ ಪ್ರೇರಣೆ ಪಡೆದ 165 ಮಂದಿ ನೇತ್ರದಾನ ಸಂಕಲ್ಪ ಮಾಡಿದ್ದಾರೆ. ಯಲ್ಲಮ್ಮ ದೇವಿ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸೇರಿದಂತೆ 165 ಮಂದಿ ನೇತ್ರದಾನ ಮಾಡಲು ಸಹಿ ಹಾಕಿದ್ದಾರೆ.