ಗೌರಿ-ಗಣೇಶ ಹಬ್ಬಕ್ಕೆ ಎಲ್ಲೆಡೆ ಜೋರು ಖರೀದಿ; ಮಾರುಕಟ್ಟೆಗಳಲ್ಲಿ ಹೂ, ಹಣ್ಣು ದರದಲ್ಲಿ ಇಳಿಕೆ

ಬಾಗಿನ, ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ವಿಶೇಷವಾಗಿ ಖರೀದಿಸುತ್ತಿದ್ದರು. ಗ್ರಾಹಕರಿಗೆ ಹೂವು, ಹಣ್ಣಿನ ದರ ಏರಿಕೆಯ ಬಿಸಿಯಿರಲಿಲ್ಲ. ಏಕೆಂದರೆ ತಮಿಳುನಾಡಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಹೂ ಆಗಮಿಸಿದ್ದು, ಬೆಲೆಗಳಲ್ಲಿ ಇಳಿಕೆಯಾಗಿದೆ.

ಗೌರಿ-ಗಣೇಶ ಹಬ್ಬಕ್ಕೆ ಎಲ್ಲೆಡೆ ಜೋರು ಖರೀದಿ; ಮಾರುಕಟ್ಟೆಗಳಲ್ಲಿ ಹೂ, ಹಣ್ಣು ದರದಲ್ಲಿ ಇಳಿಕೆ
Linkup
ಬೆಂಗಳೂರು: ಗುರುವಾರ ಗೌರಿ ಹಬ್ಬ, ಶುಕ್ರವಾರ ಗಣೇಶ ಚತುರ್ಥಿಗೆ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿದ್ದು, ಬುಧವಾರ ಕೆ.ಆರ್‌. ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಕಂಡುಬಂದಿತ್ತು. ನಗರದ ಹಲವು ಬಡಾವಣೆ, ರಸ್ತೆ ಬದಿಗಳಲ್ಲಿ ಗೌರಿ-ಗಣೇಶನ ಮೂರ್ತಿಗಳು, ಹಬ್ಬಕ್ಕೆ ಬೇಕಾದ ಹೂವು, ಬಾಳೆಕಂದು, ಗರಿಕೆ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಗೌರಿಗೆ ಬೇಕಾದ ಬಾಗಿನ, ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ವಿಶೇಷವಾಗಿ ಖರೀದಿಸುತ್ತಿದ್ದರು. ಗ್ರಾಹಕರಿಗೆ ಹೂವು, ಹಣ್ಣಿನ ದರ ಏರಿಕೆಯ ಬಿಸಿಯಿರಲಿಲ್ಲ. ಏಕೆಂದರೆ ತಮಿಳುನಾಡಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಹೂ ಆಗಮಿಸಿದ್ದು, ಬೆಲೆಗಳಲ್ಲಿ ಇಳಿಕೆಯಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಮಾರು ಸೇವಂತಿಗೆ ಹೂವು 150 ರೂ. ವರೆಗೆ ಇದ್ದುದು ಇದೀಗ 80 ರೂ.ಗೆ ಸಿಗುತ್ತಿದೆ. ಒಂದು ಮೊಳ ಮಲ್ಲಿಗೆ, ಕನಕಾಂಬರ ಹೂವು 100 ರೂ. ಇದ್ದುದು ಇದೀಗ 50 ರೂ.ಗೆ ಮಾರಾಟವಾಗುತ್ತಿದೆ. ಹಣ್ಣುಗಳ ದರವೂ ಗ್ರಾಹಕರ ಕೈಗೆಟಕುವಂತಿದ್ದು, ಸೇಬು 80 ರೂ., ಸೀಬೆ 50-60 ರೂ., ಏಲಕ್ಕಿ ಬಾಳೆ 50 ರೂ., ಸೀತಾಫಲ 40 ರೂ. ದರವಿದೆ. ಬಗೆ ಬಗೆಯ ಗೌರಿ-ಗಣೇಶನ ಮೂರ್ತಿಗಳು:ಜತೆಗೆ ತಾಂಡವ ನೃತ್ಯದ ಕಾಲಭೈರವ ಗಣಪ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ 'ಲಾಲ್‌ಬಾಗ್‌ ರಾಜ', ಪೂನಾಡಿನ 'ದಗಡು ಸೇಟ್‌' ಹೀಗೆ ಬಗೆ ಬಗೆಯ ಗಣಪಗಳು ಮಾರುಕಟ್ಟೆಗೆ ಬಂದಿವೆ. ಗಣೇಶನನ್ನು ಕೂರಿಸುವರು ತಮಗಿಷ್ಟದ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿಯರು ತಮ್ಮದೇ ಶೈಲಿಯಲ್ಲಿ ರಾರಾಜಿಸುತ್ತಿದ್ದಾರೆ. ಗೌರಿ ಮೂರ್ತಿಗಳ ದರ 50-100 ರೂ.ನಿಂದ ಆರಂಭವಾಗಿ 2 ಸಾವಿರ ರೂ.ವರೆಗೆ ಇದೆ. ಗಣೇಶನ ಮಣ್ಣಿನ ಮೂರ್ತಿಗಳು ಎತ್ತರ ಮತ್ತು ವಿನ್ಯಾಸಕ್ಕೆ ತಕ್ಕಂತೆ 100 ರೂ.ನಿಂದ 20 ಸಾವಿರ ರೂ.ವರೆಗಿವೆ. ಹೂವು, ತರಕಾರಿ ಬೀಜ ಹಾಕಿ ಸಿದ್ಧಪಡಿಸಿದ ಹಾಗೂ ಗೋಮಯ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆಯಿತ್ತು. ಇವು 100 ರೂ.ನಿಂದ ಆರಂಭಗೊಂಡು 2000 ರೂ.ವರೆಗೆ ಮಾರಾಟವಾಗುತ್ತಿವೆ. ತೆಂಗಿನ ಹಬ್ಬಕ್ಕೆ ಕಾಯಿಗಳ ಅಬ್ಬರ:ಗಣೇಶ ಚತುರ್ಥಿಯನ್ನು ಕೆಲವೆಡೆ ತೆಂಗಿನ ಹಬ್ಬವೆಂದೇ ಕರೆಯುತ್ತಾರೆ. ಈ ಹಬ್ಬದಲ್ಲಿ ಪೂಜೆಗೆ ತೆಂಗಿನಕಾಯಿಗಳ ಬಳಕೆಯೂ ಹೆಚ್ಚು. ಏರಿಕೆಯಾಗಿದ್ದ ತೆಂಗಿನಕಾಯಿ ಬೆಲೆ ಸುಮಾರು ಎರಡು ತಿಂಗಳಿಂದ ಕೊಂಚ ಇಳಿಕೆಯಾಗಿದೆ. ಹೀಗಾಗಿ, ಸಗಟು ದರದಲ್ಲಿ ಗಾತ್ರದ ಆಧಾರದ ಮೇಲೆ ಪ್ರತಿ ಕಾಯಿಗೆ 8-10 ರೂ. ಹಾಗೂ ಅದಕ್ಕೂ ಮೇಲ್ಪಟ್ಟಿದೆ. ಚಿಲ್ಲರೆ ದರದಲ್ಲಿ 15 ರೂ.20 ರೂ.ವರೆಗಿದೆ. ಹಾಪ್‌ಕಾಮ್ಸ್‌ನಲ್ಲಿ 25-30 ರೂ. ಇದೆ. ಜೆ.ಪಿ. ವೆಲ್‌ಫೇರ್‌ ಅಸೋಸಿಯೇಷನ್‌ ಸೇರಿದಂತೆ ನಾನಾ ಸಂಸ್ಥೆಗಳು ಸಾರ್ವಜನಿಕರಿಗೆ ಪರಿಸರ ಸ್ನೇಹಿ ಗೌರಿ-ಗಣೇಶನ ಮೂರ್ತಿಗಳನ್ನು ಬುಧವಾರ ಉಚಿತವಾಗಿ ವಿತರಿಸಿದವು.
ಗೌರಿ ಮೂರ್ತಿಗಳು 100 ರೂ.ನಿಂದ 2 ಸಾವಿರ
ಗಣೇಶ ಮೂರ್ತಿಗಳು 100 ರೂ.ನಿಂದ 20 ಸಾವಿರ
ತೋರಣದ ಮಾವಿನ ಸೊಪ್ಪು ಕಟ್ಟಿಗೆ 20 ರೂ
ಸೇವಂತಿಗೆ ಹೂವು ಮಾರು 80-100
ಬಾಳೆಕಂದು ಜೋಡಿಗೆ 30-200 ರೂ.
ಸುಗಂಧರಾಜ ಹಾರ 120-200 ರೂ
ಮಲ್ಲಿಗೆ ಹೂವು ಮೊಳ 50 ರೂ.
ಏಲಕ್ಕಿ ಬಾಳೆ ಕೆ.ಜಿ.ಗೆ 50 ರೂ.
ಪಚ್ಚ ಬಾಳೆ 25 ರೂ.
ವೀಳ್ಯದೆಲೆ ಕಟ್ಟು 80-100 ರೂ.
ಗರಿಕೆ 10-20 ರೂ.
ಬೇಲದ ಹಣ್ಣು ಜೋಡಿಗೆ 20-30 ರೂ.