ಗೀತ ಸಾಹಿತಿ ಕವಿರಾಜ್‌ ತಂಡದಿಂದ ಶುರುವಾಯ್ತು ಉಚಿತ ಆಕ್ಸಿಜನ್‌ ಕೇರ್‌ ಸೆಂಟರ್‌

ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿರಾಜ್‌ ಕೊರೊನಾ ಕಾಲದಲ್ಲಿ ತಮ್ಮ ಸ್ನೇಹಿತರ ಜತೆ ಸೇರಿಕೊಂಡು 'ಉಸಿರು' ಎಂಬ ಯೋಜನೆಯಡಿ ಉಸಿರಾಟದ ತೊಂದರೆ ಇರುವವರಿಗೆ ಆ್ಯಕ್ಸಿಜನ್‌ ನೀಡುವ ಕೆಲಸ ಮಾಡುತ್ತಿದ್ದಾರೆ.

ಗೀತ ಸಾಹಿತಿ ಕವಿರಾಜ್‌ ತಂಡದಿಂದ ಶುರುವಾಯ್ತು ಉಚಿತ ಆಕ್ಸಿಜನ್‌ ಕೇರ್‌ ಸೆಂಟರ್‌
Linkup
ಕೋವಿಡ್‌ ಸೊಂಕಿಗೆ ತುತ್ತಾದವರಲ್ಲಿಕೆಲವರು ಉಸಿರಾಟದ ತೊಂದರೆಗೆ ಒಳಗಾಗುತ್ತಾರೆ. ಅಂಥವರಿಗೆ ಪ್ರಾಣವಾಯುವಿನ ಸೌಕರ್ಯ ಒದಗಿಸುವ ಕೆಲಸವನ್ನು ಗೀತರಚನೆಕಾರ ಕವಿರಾಜ್‌ ಮತ್ತವರ ತಂಡ ಮಾಡುತ್ತಿದೆ. 'ಉಸಿರಾಟದ ತೊಂದರೆ ಎದುರಾದ ಹಲವರಿಗೆ ತಕ್ಷಣ ಸುಲಭವಾಗಿ ಬೆಡ್‌ ಸಿಗುತ್ತಿಲ್ಲ. ಬೆಡ್‌ ಸಿಗುವವರೆಗೂ ನಾವು ಆ್ಯಕ್ಸಿಜನ್‌ ಕಾನ್‌ಸಂಟ್ರೇಟರ್‌ಗಳ ಮೂಲಕ ಆಮ್ಲಜನಕ ಸಪೋರ್ಟ್‌ ನೀಡುತ್ತಿದ್ದೇವೆ. ಅವರಿಗೆ ಬೆಡ್‌ ಸಿಕ್ಕ ನಂತರ ಅಥವಾ ಅವರ ಆ್ಯಕ್ಸಿಜನ್‌ ಲೆವೆಲ್‌ ಜಾಸ್ತಿಯಾದ ನಂತರ ಅದನ್ನು ತಂದು ಸ್ಯಾನಿಟೈಸ್‌ ಮಾಡಿ ಇನ್ನೊಬ್ಬರಿಗೆ ಹಾಕುತ್ತೇವೆ. ಈಗಾಗಲೇ ನಾನು ಮತ್ತು ನಮ್ಮ ಸ್ನೇಹಿತರ ತಂಡ ಇದಕ್ಕಾಗಿ ಹತ್ತು ಲಕ್ಷದಷ್ಟು ಇನ್ವೆಸ್ಟ್‌ ಮಾಡಿದ್ದೇವೆ. ನಮ್ಮ ಜತೆ ಒಬ್ಬ ವೈದ್ಯರು ಮತ್ತು ನರ್ಸ್‌ ಕೂಡ ಇದ್ದಾರೆ. ಉಸಿರಾಟದ ತೊಂದರೆ ಇರುವವರ ಮನೆಗೆ ನಮ್ಮ ತಂಡ ಹೋಗಿ ಅವರು ಆಸ್ಪತ್ರೆ ಮತ್ತು ಬೆಡ್‌ ಹುಡುಕಿಕೊಳ್ಳುವವರೆಗೂ ಈ ಕಾನ್‌ಸಂಟ್ರೇಟರ್‌ಗಳ ಮೂಲಕ ಆ್ಯಕ್ಸಿಜನ್‌ ಸಪೋರ್ಟ್‌ ಅಳವಡಿಸುತ್ತಾರೆ' ಎಂದು ಹೇಳುತ್ತಾರೆ ಕವಿರಾಜ್‌. ಈ ಟೀಮ್‌ ಚಿಕಿತ್ಸೆ ಕೊಡುವುದಿಲ್ಲ, ಆಸ್ಪತ್ರೆ ಬೆಡ್‌ ಹುಡುಕಿಕೊಡುವುದಿಲ್ಲ. ಅದನ್ನು ಸೋಂಕಿತರು ಮತ್ತು ಅವರ ಕಡೆಯವರೇ ಮಾಡಬೇಕು. ಆದರೆ ಅಲ್ಲಿಯವರೆಗೂ ಅವರು ಸಪೋರ್ಟ್‌ ಕೊಡುತ್ತಾರೆ. ಕವಿರಾಜ್‌ ಅವರ ಜತೆ ದಿನಕರ್‌ ತೂಗುದೀಪ, ಕವಿತಾ ಲಂಕೇಶ್‌, ಸುಂದರ್‌, ನೀತು ಶೆಟ್ಟಿ, ಸಾಧುಕೋಕಿಲಾ, ಸಂಚಾರಿ ವಿಜಯ್‌, ಚೈತನ್ಯ ಮತ್ತಿತರರು ಕೆಲಸ ಮಾಡುತ್ತಿದ್ದಾರೆ. 'ಈಗಾಗಲೇ ಐದು ಕಾನ್‌ಸಂಟ್ರೇಟರ್‌ಗಳನ್ನು ತರಿಸಿದ್ದಾರೆ. ಇನ್ನೊಂದಿಷ್ಟು ಬರಬೇಕಿವೆ. ಮುಂದಿನ ದಿನಗಳಲ್ಲಿ ದಾನಿಗಳನ್ನು ಹುಡುಕಿ ಇನ್ನೂ ಹೆಚ್ಚಿನ ಜನರಿಗೆ ನೆರವಾಗುತ್ತೇವೆ. 'ಐ ಲವ್‌ ಯೂ' ಸಿನಿಮಾದ ಸಂಗೀತ ನಿರ್ದೇಶಕ ಕಿರಣ್‌ ತೋಟಂಬೈಲು ನಮ್ಮ ತಂಡದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲ ರೋಗಿಗಳಿಗೆ ನಮ್ಮ ಆಕ್ಸಿಜನ್‌ ಸಿಕ್ಕಿದೆ' ಎಂದು ಕವಿರಾಜ್‌ ಮಾಹಿತಿ ನೀಡಿದ್ದಾರೆ. 'ನಾವು ಆ್ಯಕ್ಸಿಜನ್‌ ಕಾನ್‌ಸಂಟ್ರೇಟರ್‌ಗಳ ಮೂಲಕ ಆ್ಯಕ್ಸಿಜನ್‌ ಮಾತ್ರ ನೀಡುತ್ತಿದ್ದೇವೆ. ಇದು ಚಿಕಿತ್ಸೆಯಲ್ಲ, ಬದಲಿಗೆ ಬೆಡ್‌ ಹುಡುಕಿಕೊಳ್ಳುವವರೆಗೂ ನೆರವಾಗುವ ವ್ಯವಸ್ಥೆ ಅಷ್ಟೇ. ಈಗಾಗಲೇ ಸಾಕಷ್ಟು ಕರೆಗಳು ಬರುತ್ತಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿಇದನ್ನು ಹೆಚ್ಚಿಸಬೇಕು ಎಂಬ ಆಸೆ ಇದೆ' ಎಂದು ಕವಿರಾಜ್‌ ಹೇಳುತ್ತಾರೆ. ಉಪ್ಪಿಗೆ ಕೈಜೋಡಿಸಿದ ಮಾನ್ಯ ದರ್ಶನ್‌ ನಟನೆಯ 'ಶಾಸ್ತ್ರಿ' ಸಿನಿಮಾದ ನಾಯಕಿಯಾಗಿ ನಟಿಸಿದ್ದ ನಟಿ ಮಾನ್ಯಾ, ಉಪೇಂದ್ರ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ದಿನಸಿ ಕಿಟ್‌ ವಿತರಣೆಗೆ ಕೈಜೋಡಿಸಿದ್ದಾರೆ. ಅಮೆರಿಕದಲ್ಲಿ ಪತಿ ಮತ್ತು ಮಗಳೊಂದಿಗೆ ವಾಸವಾಗಿರುವ ಅವರು ಉಪೇಂದ್ರ ಅವರಿಗೆ ಒಂದು ಲಕ್ಷ ರೂಪಾಯಿ ತಲುಪಿಸಿದ್ದು, ಅದರಿಂದ ಅವಶ್ಯಕತೆ ಇದ್ದವರಿಗೆ ದಿನಸಿ ಕಿಟ್‌ ವಿತರಿಸುವಂತೆ ಮನವಿ ಮಾಡಿದ್ದಾರೆ. ಇದಲ್ಲದೆ ಚಿತ್ರರಂಗದಲ್ಲಿ ಸ್ನೇಹಿತರಾಗಿರುವ ನಾಗೇಶ್‌ಕುಮಾರ್‌, ನಾಗೇಂದ್ರ ಅರಸ್‌, ಜೆ ಜೆ ಶ್ರೀನಿವಾಸ್‌ ಮತ್ತು ಕುಮಾರ್‌ ಸಂಕಷ್ಟದಲ್ಲಿರುವವರ ನೆರವಿಗೆ ಮುಂದೆ ಬಂದಿದ್ದಾರೆ. ಚಿತ್ರೋದ್ಯಮದ ಬಂಧುಗಳಿಗಾಗಿ ಅವರು ಒಂದು ಸಾವಿರ ದಿನಸಿ ಕಿಟ್‌ಗಳನ್ನು ಕೊಡುವ ಗುರಿ ಹಾಕಿಕೊಂಡಿದ್ದು, ಈಗಾಗಲೇ ವಿತರಣಾ ಕಾರ್ಯ ಆರಂಭವಾಗಿದೆ. ನೇರ ಸಂತ್ರಸ್ತರಿಗೆ ಕಿಟ್‌ ತಲುಪಿಸುವ ವ್ಯವಸ್ಥೆಯನ್ನು ಈ ಸ್ನೇಹಿತರು ಮಾಡಿದ್ದಾರೆ.