ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗುದ್ದುಗೆಗೆ ಏರಲಿದೆ: ಸಚಿವ ನಿರಾಣಿ ವಿಶ್ವಾಸ

'ಈಗಾಗಲೇ ನಾಲ್ವರು ಪಕ್ಷೇತರ ಸದಸ್ಯರು ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸಂಸದರು, ವಿಧಾನಪರಿಷತ್ ಸದಸ್ಯರು, ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ. ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ ಜಿಲ್ಲೆಯ ಜನತೆಗೆ ಕೃತಜ್ಞತೆ' - ಸಚಿವ ನಿರಾಣಿ

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗುದ್ದುಗೆಗೆ ಏರಲಿದೆ: ಸಚಿವ ನಿರಾಣಿ ವಿಶ್ವಾಸ
Linkup
: ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಂಖ್ಯಾ ಬಲದೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ನಿಯೋಜಿತ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತದಾರರು ನಮಗೆ ಸಂಪೂರ್ಣವಾಗಿ ಬಹಮತ ನೀಡಿಲ್ಲ. ಶಾಸಕರು, ವಿಧಾನ ಪರಿಷತ್ ಸದಸ್ಯರು ಜೊತೆಗೆ ಪಕ್ಷೇತರರೂ ಕೂಡ ನಮಗೆ ಬೆಂಬಲ ‌ನೀಡಲು ಮುಂದೆ ಬಂದಿದ್ದಾರೆ. ಹೀಗಾಗಿ ಈ ಬಾರಿ ಪಾಲಿಕೆಯಲ್ಲಿ ನಾವೇ ಅಧಿಕಾರ ಹಿಡಿಯುತ್ತವೆ ಎಂಬ ವಿಶ್ವಾಸವನ್ನು ನಿರಾಣಿ ವ್ಯಕ್ತಪಡಿಸಿದರು. ಈಗಾಗಲೇ ನಾಲ್ವರು ಪಕ್ಷೇತರ ಸದಸ್ಯರು ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸಂಸದರು, ವಿಧಾನಪರಿಷತ್ ಸದಸ್ಯರು, ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ. ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ ಜಿಲ್ಲೆಯ ಜನತೆಗೆ ನಿರಾಣಿ ಕೃತಜ್ಞತೆ ಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಹಗಲು - ರಾತ್ರಿ ಎನ್ನದೆ ನಾವು ಕೆಲಸ ಮಾಡಿದ್ದೆವು. ಸ್ಯಾನಿಟೈಸರ್ ಬಳಕೆ, ಮಾಸ್ಕ್ ವಿತರಣೆ, ಆಸ್ಪತ್ರೆಗಳಿಗೆ ಬೆಡ್ ಸೇರಿದಂತೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಿದ್ದೆವು. ಇದಕ್ಕಾಗಿ ಜಿಲ್ಲೆಯ ಜನತೆಗೆ ಆಭಾರಿಯಾಗಿದ್ದೇನೆ ಎಂದರು. ಈ ಚುನಾವಣೆಯನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೆ. ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದರು. ಅದೇ ರೀತಿ ನಾನು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭೆ ಸದಸ್ಯರು, ಮುಖಂಡರು ಸೇರಿದಂತೆ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದೆವು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗಬಹುದಾದ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಮತದಾರರು ಇದನ್ನು ಒಪ್ಪಿ ನಮಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ ಎಂದು ಕಲಬುರಗಿ ಮಹಾನಗರ ಚುನಾವಣಾ ಉಸ್ತುವಾರಿಯೂ ಆಗಿರುವ ನಿರಾಣಿ ಸಂತಸ ವ್ಯಕ್ತಪಡಿಸಿದರು. ದಿಕ್ಸೂಚಿ: ಬೆಳಗಾವಿ, ಹುಬ್ಬಳ್ಳಿ - ಧಾರವಾಡ, ಕಲಬುರಗಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ. ಇದು ಮುಂಬರುವ ಎಲ್ಲಾ ಚುನಾವಣೆಗೂ ದಿಕ್ಸೂಚಿ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಹಾನಗಲ್, ಸಿಂಧಗಿ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗೂ ಇದು ದಿಕ್ಸೂಚಿಯಾಗಲಿದೆ. ಫಲಿತಾಂಶವು ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿರುವುದರಿಂದ ನಾವು ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ ಎಂದು ಅವರು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ನಾಯಕರು. ಅವರು ಪ್ರಚಾರ ಮಾಡದಿದ್ದರೂ ಪಕ್ಷಕ್ಕೆ ಯಾವಾಗಲೂ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಪಕ್ಷದ ಹಿರಿಯರಾದ ದಿ. ಅಟಲ್‍ ಬಿಹಾರಿ ವಾಜಪೇಯಿ, ಲಾಲ್‍ ಕೃಷ್ಣ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಕಾಂಗ್ರೆಸ್ ಎಲ್ಲಾ ಹಂತದ ನಾಯಕರು ಪ್ರಚಾರ ನಡೆಸಿದ್ದರೂ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪನವರು ಪ್ರಚಾರ ಮಾಡದಿದ್ದರೂ ಎರಡನೆ ಹಂತ ನಾಯಕರು ಪ್ರಚಾರ ನಡೆಸಿದ್ದರು. ಮತದಾರರು ನಮ್ಮನ್ನೇ ಕೈ ಹಿಡಿದಿರುವುದರಿಂದ ನಮ್ಮ ಶಕ್ತಿ ಎಷ್ಟು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ನಿರಾಣಿ ಸಂತಸ ವ್ಯಕ್ತಪಡಿಸಿದರು. ತೀರ್ಮಾನಕ್ಕೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ ಅವರು, ಪಕ್ಷದ ವರಿಷ್ಠರು ಏನೇ ತೀರ್ಮನ ತೆಗೆದುಕೊಂಡರೂ ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಾನ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ವರಿಷ್ಠರ ತೀರ್ಮಾನವೇ ಅಂತಿಮ ಎಂದರು. ಎಂತಹ ಸಂದರ್ಭದಲ್ಲೂ ಬಿಜೆಪಿ ಯಡಿಯೂರಪ್ಪನಂತಹ ಮೇರು ವ್ಯಕ್ತಿತ್ವದ ನಾಯಕರನ್ನು ಕಡೆಗಣನೆ ಮಾಡುವುದಿಲ್ಲ. ಇದೆಲ್ಲವೂ ಊಹಾಪೋಹ ಎಂದು ನಿರಾಣಿ ಹೇಳಿದರು. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಏನೇ ತೀರ್ಮಾನ ಕೈಗೊಂಡರೂ ಅದು ಪಕ್ಷದ ಹಿತದೃಷ್ಟಿಯಿಂದಲೇ ತೆಗೆದುಕೊಂಡಿರುತ್ತಾರೆ. ವರಿಷ್ಠರ ತೀರ್ಮಾನಕ್ಕೆ ಯಾರೂ ಅಪಸ್ವರ ತೆಗೆಯುವುದಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.