ಅಂತಿಮ ಮೆರವಣಿಗೆಯ ಜೊತೆ ಬೆಂಗಳೂರಿನಲ್ಲಿ ಕೋವಿಡ್ ರುದ್ರ ನರ್ತನ..!

ಕೋವಿಡ್ ನಿಯಮ ಉಲ್ಲಂಘಿಸಿ ಸಾವಿನ ಮೆರವಣಿಗೆಗಳು ಬೆಂಗಳೂರಿನಲ್ಲಿ ದಿನನಿತ್ಯ ನೂರಾರು ನಡೆಯುತ್ತಿವೆ. ಮೃತರ ಬಗ್ಗೆ ಅನುಕಂಪ, ಸಹಾನುಭೂತಿ ಇದೆ. ಆದ್ರೆ, ಅವರ ಅಂತಿಮ ಯಾತ್ರೆಯ ಹೆಸರಿನಲ್ಲಿ ಮಿಕ್ಕವರೂ ತಮ್ಮ ಅಂತ್ಯವನ್ನು ತಂದುಕೊಳ್ಳಬಾರದು ಅಲ್ಲವೇ..?

ಅಂತಿಮ ಮೆರವಣಿಗೆಯ ಜೊತೆ ಬೆಂಗಳೂರಿನಲ್ಲಿ ಕೋವಿಡ್ ರುದ್ರ ನರ್ತನ..!
Linkup
: ಖಾಸಗಿ ಟಿವಿ ಚಾನಲ್ಲಿಗೆ ನೀಡಿದ ಸಂದರ್ಶನವೊಂದರಲ್ಲಿ ಖ್ಯಾತ ಹೃದಯ ತಜ್ಞರಾಗಿರುವ ಡಾ. ದೇವಿ ಶೆಟ್ಟಿ ಅವರು, ಭಾರತದಲ್ಲಿ ಸೋಂಕು ಯಾವ ರೀತಿ ವ್ಯಾಪಿಸಿದೆಯೆಂದರೆ, ಭಾರತದ ಸರಕಾರವಿರಲಿ, ಅಮೆರಿಕ ಹಾಗೂ ಯುಕೆಯಂಥ ಬೃಹತ್ ರಾಷ್ಟ್ರಗಳ ಸರಕಾರಗಳೂ ಏನೂ ಮಾಡಲಾರವು. ಆ ಮಟ್ಟಕ್ಕೆ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ನೋವಿನಿಂದ ಹೇಳಿದ್ದರು. ಅವರ ಮಾತುಗಳಲ್ಲಿ ಕೋವಿಡ್ ರುದ್ರ ನರ್ತನದ ಸತ್ಯ ದರ್ಶನ ಮಾತ್ರವಲ್ಲ, ಹತಾಶ ಭಾವನೆಯೂ ವ್ಯಕ್ತವಾಗುತ್ತಿತ್ತು. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರಗಳಾಗಲಿ ಮಾಡಬೇಕಾದ್ದನ್ನೆಲ್ಲ ಮಾಡುತ್ತಿವೆ. ಆದರೆ, ಇಡೀ ದೇಶದಲ್ಲಿ ಸ್ವಾತಂತ್ರ್ಯಾನಂತರ ವೈದ್ಯಕೀಯ ಕ್ಷೇತ್ರವನ್ನು ನಿರ್ಲಕ್ಷಿಸಿದ್ದರಿಂದ ಇಂಥ ಪರಿಸ್ಥಿತಿ ಬಂದೊದಗಿದೆ ಎಂಬುದು ಅವರ ಸ್ಪಷ್ಟೋಕ್ತಿ. ಕೋವಿಡ್ ಸೋಂಕು ಪಸರಿಸುವುದರಲ್ಲಿ ನಾಗರಿಕರ ದಿವ್ಯ ನಿರ್ಲಕ್ಷ್ಯ ಇದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ, ಗುಂಪುಗೂಡಬೇಡಿ, ಕಡ್ಡಾಯವಾಗಿ ಮುಖಗವಸು (ಫೇಸ್ ಮಾಸ್ಕ್) ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಸರಕಾರ ರೂಪಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂಬುದನ್ನು ಸರಕಾರ ಬೊಂಬಡಾ ಹೊಡಕೊಂಡರೂ ಪಾಲಿಸುವುದಿಲ್ಲ ಎಂದರೆ ಸರಕಾರವಾದರೂ ಏನು ಮಾಡುತ್ತದೆ? ಬೆಂಗಳೂರಿನ ಬಳಿಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮೇಲು ಸೇತುವೆ ಕೆಳಗಿರುವ ಬಡಾವಣೆಯಲ್ಲಿ ಬುಧವಾರ ಕಂಡುಬಂದ ದೃಶ್ಯ ನಿಜಕ್ಕೂ ದಿಗಿಲು ಹುಟ್ಟಿಸುವಂತಿತ್ತು. ಇಹಲೋಕ ತ್ಯಜಿಸಿದ ವ್ಯಕ್ತಿಯೊಬ್ಬನ ಅಂತಿಮ ಮೆರವಣಿಗೆಯ ಮುಂದೆ ಬ್ಯಾಂಡ್ ಬಾಜಾ, ಅವರ ಜೊತೆ ಕುಣಿಯುವವರು ಒಂದಿಷ್ಟಾದರೆ ಕಂಬನಿ ಮಿಡಿಯುತ್ತ ಬರುತ್ತಿರುವವರು ಒಂದಿಷ್ಟು. ಇದರ ಜೊತೆಗೆ ಟ್ರಾಫಿಕ್ ನಲ್ಲಿ ಸಿಲುಕುವ ವಾಹನ ಸವಾರರ ಪರದಾಟ ಕೇಳತೀರದು. ಹಜರತ್ ಖ್ವಾಜಾ ನಜರ್ ದರ್ಗಾದಿಂದ ಆರಂಭವಾಗುವ ಆ ಬಡಾವಣೆಯಿಂದ ಸತ್ತವರನ್ನು ನೋಡಲು ಬಂದವರೋ ಅಥವಾ ಮತ್ತಾವುದಕ್ಕೋ ರಸ್ತೆಗುಂಟ ನೆರೆದಿದ್ದ ನಿವಾಸಿಗರಲ್ಲಿ ಫೇಸ್ ಮಾಸ್ಕ್ ಹಾಕಿದವರನ್ನು ದುರ್ಬೀನು ಹಾಕಿ ಹುಡುಕಬೇಕಾಗಿತ್ತು. ಏನೂ ಅರಿಯದ ಮಕ್ಕಳು ಮರಿಗಳು ಸತ್ತವರ ಮೆರವಣಿಗೆಯಲ್ಲಿ ಬಾರಿಸುತ್ತಿದ್ದ ಸಂಗೀತ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಿದ್ದರೆ, ಉಳಿದವರಿಗೆ ಅದೊಂದು ದಿನನಿತ್ಯದ ಸಾಮಾನ್ಯ ದೃಶ್ಯ. ಒಂದಕ್ಕೊಂದು ಅಂಟಿರುವ ಅಂಗಡಿ ಸಾಲುಗಳ ಹಿಂದಿರುವ ಕಿಕ್ಕಿರಿದ ಮನೆಮನೆಗಳಲ್ಲಿ ಸೋಂಕು ಹೊಕ್ಕಿದರೆ, ನರೇಂದ್ರ ಮೋದಿ ಅಥವಾ ಯಡಿಯೂರಪ್ಪನವರಿರಲಿ, ಆ ಭಗವಂತ ಬಂದರೂ ಏನೂ ಮಾಡಲಾರ. ಸಂದರ್ಶನಕ್ಕೆಂದು ಕ್ಯಾಮೆರಾ ಹಿಡಿದು ಬಂದ ಪತ್ರಕರ್ತರ ಮುಂದೆ ತಮ್ಮ ಕಷ್ಟಕಾರ್ಪಣ್ಯಗಳನ್ನು, ಕಟ್ಟುನಿಟ್ಟಿನ ಕರ್ಫ್ಯೂ ಹೇರಿರುವ ಸರಕಾರದ ವಿರುದ್ಧ ದೂರು ಸಲ್ಲಿಸುವ ಬದಲು ಜನರು ತಮ್ಮ ಜವಾಬ್ದಾರಿಯನ್ನು ಮೆರೆಯಬೇಕಲ್ಲವೆ? ದಿನಗೂಲಿಯನ್ನೇ ನಂಬಿರುವ ಬಡಜನರಿರಲಿ, ಧನವಂತರಿಗೇ ಆಸ್ಪತ್ರೆಯಲ್ಲಿ ಬೆಡ್ ಗಳು ಸಿಗದಂತಾಗಿವೆ. ಇನ್ನು ಸಂಜೀವಿನಿಯಂತಾಗಿರುವ ಆಕ್ಸಿಜನ್ ಸಿಗುವುದು ದೂರದ ಮಾತು. ಅದರ ಬಗ್ಗೆ ಬಡ ಜನರು ಮಾತನಾಡುವುದೇ ಬೇಡ. ಹಲವಾರು ಆಸ್ಪತ್ರೆಗಳು ಐದು ದಿನ ಬೆಡ್‌ಗೆ ಇಷ್ಟು, ಐಸಿಯುಗೆ ಮತ್ತಿಷ್ಟು ಎಂದು ಶ್ರೀಮಂತರೊಂದಿಗೆ ಡೀಲ್‌ಗಿಳಿದಿವೆ. ದುಡ್ಡಿದ್ದರೆ ನಿಮ್ಮದೃಷ್ಟ, ಇಲ್ಲದಿದ್ದರೆ ಗೋವಿಂದ ಗೋವಿಂದ..! ಬಿಬಿಎಂಪಿ ವೆಬ್ ಸೈಟ್ ನಲ್ಲಿ ಎಲೆಕ್ಟ್ರಿಕಲ್ ಶವಾಗಾರ ಬುಕ್ಕಿಂಗ್ ಕೋಮಾದಲ್ಲಿದೆ ಎಂಬುದು ಕೂಡ ಜನತೆಗೆ ಗೊತ್ತಿರಲಿ. ಕರ್ಫ್ಯೂ, ಲಾಕ್ಡೌನ್ ಹೇರುವ ಸರಕಾರಗಳು ಜನರಿಗೆ ಒಂದಿಷ್ಟು ಹಣ ಸಹಾಯ ಮಾಡಬಹುದು, ಪುಗಸಟ್ಟೆಯಾಗಿ ಒಂದಿಷ್ಟು ಆಸ್ಪತ್ರೆಗಳಲ್ಲಿ ಅದೃಷ್ಟವಂತರಿಗೆ ಹಾಸಿಗೆ ದಕ್ಕಿಸಿಕೊಡಬಹುದು, ಏನೂ ಆಗದಿದ್ದರೆ ಸಾಂತ್ವನದ ಕಂಬನಿ ಮಿಡಿಯಬಹುದು. ಆದರೆ, ಬದುಕು ಕಟ್ಟಿಕೊಳ್ಳಬೇಕಾದವರು, ಜೀವವನ್ನು ಕಾಪಾಡಿಕೊಳ್ಳಬೇಕಾದವರು ಜನರೇ. ಸರಕಾರ ಹೇರಿದ ಕೋವಿಡ್ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ರಾಮನೂ ಏನೂ ಮಾಡಲು ಸಾಧ್ಯವಿಲ್ಲ, ರಹೀಮನೂ ಏನೂ ಮಾಡಲು ಸಾಧ್ಯವಿಲ್ಲ. ಇಂಥ ಸಾವಿನ ಮೆರವಣಿಗೆಗಳು ಬೆಂಗಳೂರಿನಲ್ಲಿ ದಿನನಿತ್ಯ ನೂರಾರು ನಡೆಯುತ್ತಿವೆ. ಅಂಥ ಕೆಟ್ಟ ಪರಿಸ್ಥಿತಿಯನ್ನು ನಮಗೆ ನಾವೇ ತಂದುಕೊಂಡಿದ್ದೇವೆ. ಸಂಬಂಧಿಕರದ್ದು ಮಾತ್ರವಲ್ಲ, ನೋಡುಗರ ಕರುಳು ಕೂಡ ಹಿಂಡಿ ಹಿಪ್ಪೆಯಾಗುತ್ತದೆ. ಕೋವಿಡ್ ಸೋಂಕು ಇಲ್ಲದಿದ್ದರೂ ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಪರಲೋಕಕ್ಕೆ ಪಯಣ ಬೆಳೆಸುವವರ ಸಂಖ್ಯೆ ಎಣಿಕೆಗೆ ಸಿಗುವಂಥದ್ದಲ್ಲ. ಕೆಲ ಆಸ್ಪತ್ರೆಗಳ ಕೊಳಕು ವ್ಯಾಪಾರದ ನಡುವೆ ಸರಕಾರ ಕೈಚೆಲ್ಲಿ ಕೂತಿರುವುದು ಸುಸ್ಪಷ್ಟ. ಕೋವಿಡ್ ಸೋಂಕಿತರ ಟ್ರ್ಯಾಕಿಂಗ್ ಸರಿಯಾಗಿ ಆಗುತ್ತಿಲ್ಲ, ಟೆಸ್ಟಿಂಗ್ ಅಂತೂ ದಿಕ್ಕುತಪ್ಪಿದಂತಾಗಿದೆ. ಇನ್ನು ಟ್ರೀಟ್ಮೆಂಟ್ ಬಗ್ಗೆ ಮಾತನಾಡದಿದ್ದರೇ ಒಳಿತು. ಕಳೆದ ವರ್ಷ ಪಾದರಾಯನಪುರದಲ್ಲಿ ನಡೆದ ಘಟನೆ ಇನ್ನೂ ಹಸಿರಾಗಿದೆ. ಆದರೆ, ಈಗಿನ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ರೌದ್ರಾವತಾರ ತಾಳಿದೆ. ಜಮೀರ್ ಅಹ್ಮದ್ ಖಾನ್ ಸಾಹೇಬರೇ, ಬಾಲಗಂಗಾಂಧರನಾಥ ಸ್ವಾಮೀಜಿ ಮೇಲ್ಸೇತುವೆ ಕೆಳಗಿರುವ ಈ ಬಡಾವಣೆ ನಿಮ್ಮ ಕ್ಷೇತ್ರದ ಅಧೀನದಲ್ಲೇ ಬರುತ್ತದೆ ಅಲ್ಲವೆ?