ಉತ್ತರಪ್ರದೇಶ: 36 ವರ್ಷಗಳ ಬಳಿಕ ಸಿಖ್‌ ದಂಗೆ ಪ್ರಕರಣದ ತನಿಖೆಗೆ ಆಸಕ್ತಿ ತೋರಿದ ಎಸ್‌ಐಟಿ!

ದಂಗೆಯಲ್ಲಿ ತೇಜ್‌ ಪ್ರತಾಪ್‌ ಸಿಂಗ್‌ ಮತ್ತು ಅವರ ಮಗ ಹತ್ಯೆಯಾದ ನಂತರ ಸಂಬಂಧಿಕರು ರಾಜ್ಯ ತೊರೆದು ದಿಲ್ಲಿಗೆ ಹೋಗಿದ್ದರು. ಈ ನಡುವೆ ಆ ಮನೆಯನ್ನು ಬೇರೆಯವರು ಖರೀದಿ ಮಾಡಿದ್ದರು. ಆದರೆ ಮನೆಯ ಹೊಸ ಮಾಲೀಕರು ಆ ಎರಡು ಕೋಣೆಗಳಿಗೆ ಹೋಗುವ ಧೈರ್ಯ ಮಾಡಿರಲಿಲ್ಲ. ಸುಟ್ಟ ಅಸ್ಥಿಪಂಜರಗಳು ಇದ್ದದ್ದರಿಂದ ಕೊಠಡಿಗಳಿಗೆ ಬೀಗ ಹಾಕಿ ಇರಿಸಲಾಗಿತ್ತು. ಈಗ ರಾಜ್ಯದ ಎಸ್‌ಐಟಿ ತಂಡ ಕೊಠಡಿಗಳ ಬೀಗ ತೆಗೆದು ತನಿಖೆ ನಡೆಸಿದೆ.

ಉತ್ತರಪ್ರದೇಶ: 36 ವರ್ಷಗಳ ಬಳಿಕ ಸಿಖ್‌ ದಂಗೆ ಪ್ರಕರಣದ ತನಿಖೆಗೆ ಆಸಕ್ತಿ ತೋರಿದ ಎಸ್‌ಐಟಿ!
Linkup
ಹೊಸದಿಲ್ಲಿ: ಉತ್ತರಪ್ರದೇಶದ ಕಾನ್ಪುರದಲ್ಲಿ 1984ರ ಸಿಖ್‌ ವಿರೋಧಿ ದಂಗೆ ವೇಳೆ ತಂದೆ-ಮಗ ಸಜೀವ ದಹನಗೊಂಡ ಪ್ರಕರಣದ ತನಿಖೆ ನಡೆಸಲು 36 ವರ್ಷಗಳ ಬಳಿಕ ವಿಶೇಷ ತನಿಖಾ ತಂಡ () ಆಸಕ್ತಿ ತೋರಿಸಿದೆ. ಇಂದಿರಾ ಗಾಂಧಿ ಹತ್ಯೆಯ ಬಳಿಕ ದೇಶಾದ್ಯಂತ ಸಿಖ್‌ ವಿರೋಧಿ ಆಕ್ರೋಶ ಸ್ಫೋಟಿಸಿತ್ತು. ಉತ್ತರಪ್ರದೇಶದ ಕಾನ್ಪುರದಲ್ಲಿಯೂ ದಂಗೆ ಭುಗಿಲೆದ್ದಿತ್ತು. ನಗರದಲ್ಲಿ 127 ಮಂದಿ ಹತ್ಯೆ ನಡೆದಿತ್ತು. ಈ ಪೈಕಿ ಉದ್ಯಮಿ ತೇಜ್‌ ಪ್ರತಾಪ್‌ ಸಿಂಗ್‌ ಮತ್ತು ಅವರ ಮಗನನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಅವರು ಹತ್ಯೆಗೀಡಾದ ಮನೆಯ ಎರಡು ಕೊಠಡಿಗಳನ್ನು ಕಳೆದ 36 ವರ್ಷಗಳಿಂದ ಬೀಗ ಹಾಕಿ ಭದ್ರಪಡಿಸಲಾಗಿತ್ತು. ಈಗ ಆ ಕೊಠಡಿಗಳಲ್ಲಿ ಬಂದಿಯಾಗಿರುವ ಪುರಾವೆಗಳ ಪರಿಶೀಲನೆಗೆ ಎಸ್‌ಐಟಿ ತಂಡ ಧಾವಿಸಿದೆ. ದಂಗೆಯಲ್ಲಿ ತೇಜ್‌ ಪ್ರತಾಪ್‌ ಸಿಂಗ್‌ ಮತ್ತು ಅವರ ಮಗ ಹತ್ಯೆಯಾದ ನಂತರ ಸಂಬಂಧಿಕರು ರಾಜ್ಯ ತೊರೆದು ದಿಲ್ಲಿಗೆ ಹೋಗಿದ್ದರು. ಈ ನಡುವೆ ಆ ಮನೆಯನ್ನು ಬೇರೆಯವರು ಖರೀದಿ ಮಾಡಿದ್ದರು. ಆದರೆ ಮನೆಯ ಹೊಸ ಮಾಲೀಕರು ಆ ಎರಡು ಕೋಣೆಗಳಿಗೆ ಹೋಗುವ ಧೈರ್ಯ ಮಾಡಿರಲಿಲ್ಲ. ಸುಟ್ಟ ಅಸ್ಥಿಪಂಜರಗಳು ಇದ್ದದ್ದರಿಂದ ಕೊಠಡಿಗಳಿಗೆ ಬೀಗ ಹಾಕಿ ಇರಿಸಲಾಗಿತ್ತು. ಈಗ ರಾಜ್ಯದ ಎಸ್‌ಐಟಿ ತಂಡ ಕೊಠಡಿಗಳ ಬೀಗ ತೆಗೆದು ತನಿಖೆ ನಡೆಸಿದೆ. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಸಿಖ್‌ ವಿರೋಧಿ ಗಲಭೆಯ ತನಿಖೆಗಾಗಿ ರಂಗನಾಥ್‌ ಮಿಶ್ರಾ ಆಯೋಗ ರಚಿಸಿದ್ದರು. ಈ ಆಯೋಗದ ಮುಂದೆ ಕಾನ್ಪುರದ ಆ ಮನೆಯ ಸಂತ್ರಸ್ತರು ಅಫಿಡವಿಟ್‌ ಸಲ್ಲಿಸಿದ್ದರು. ಈ ಅಫಿಡವಿಟ್‌ ಬಗ್ಗೆ ಕುತೂಹಲಗೊಂಡ ಎಸ್‌ಐಟಿ ಈಗ ಕಾನ್ಪುರದ ದುರಂತದ ಮನೆ ತಲುಪಿ ತನಿಖೆ ನಡೆಸಿದೆ.