ಲ್ಯಾಬ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡ: ಕೋವಿಡ್ ಪರೀಕ್ಷೆಗೆ ಹೊಸ ನಿಯಮ ಜಾರಿ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್‌ಟಿ-ಪಿಆರ್ ಪರೀಕ್ಷೆ ನಡೆಸಲು ಪರೀಕ್ಷಾ ಲ್ಯಾಬೊರೇಟರಿಗಳ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಇದನ್ನು ತಗ್ಗಿಸಲು ಕೇಂದ್ರ ಸರ್ಕಾರ ಕೋವಿಡ್ ಪರೀಕ್ಷೆಯ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

ಲ್ಯಾಬ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡ: ಕೋವಿಡ್ ಪರೀಕ್ಷೆಗೆ ಹೊಸ ನಿಯಮ ಜಾರಿ
Linkup
ಹೊಸದಿಲ್ಲಿ: ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಯಾಗ್ನೊಸ್ಟಿಕ್ ಲ್ಯಾಬ್‌ಗಳ ಮೇಲಿನ ಒತ್ತಡ ತಗ್ಗಿಸುವ ಸಲುವಾಗಿ ದೇಶದ ಕೊರೊನಾ ವೈರಸ್ ಪರೀಕ್ಷಾ ನಿಯಮಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಕೇಂದ್ರದ ಹೊಸ ನೀತಿಯಂತೆ ಇನ್ನು ಮುಂದೆ 'ಆರೋಗ್ಯವಂತ' ಅಂತಾರಾಜ್ಯ ಪ್ರಯಾಣಿಕರು ಹಾಗೂ ಕೋವಿಡ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿರುವ ರೋಗಿಗಳು ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ 2,500ಕ್ಕೂ ಅಧಿಕ ಲ್ಯಾಬ್‌ಗಳು ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಎಂದು ಕೇಂದ್ರ ತಿಳಿಸಿದೆ. 'ಲ್ಯಾಬೊರೇಟರಿಗಳ ಮೇಲಿನ ಹೊರೆಯನ್ನು ತಗ್ಗಿಸುವುದಕ್ಕಾಗಿ ಇನ್ನು ಮುಂದೆ ಅಂತಾರಾಜ್ಯ ಆಂತರಿಕ ಪ್ರಯಾಣ ಬೆಳೆಸುವ ಆರೋಗ್ಯವಂತ ಜನರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವಿರುವುದಿಲ್ಲ' ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹಾಗೆಯೇ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಕೋವಿಡ್‌ನಿಂದ ಗುಣಮುಖರಾದ ರೋಗಿಗಳಿಗೂ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದೆ. ರಾಪಿಡ್ ಪರೀಕ್ಷೆ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಒಮ್ಮೆ ಕೋವಿಡ್ ಪಾಸಿಟಿವ್ ದೃಢಪಟ್ಟ ಜನರು ಮತ್ತೆ ಪರೀಕ್ಷೆಗೆ ಒಳಪಡಬಾರದು. ಕೋವಿಡ್ ಲಕ್ಷಣವುಳ್ಳ ಜನರು ಕೋವಿಡ್ ಹರಡುವಿಕೆಯ ಅಪಾಯವನ್ನು ತಗ್ಗಿಸುವ ಸಲುವಾಗಿ ಅನಗತ್ಯ ಪ್ರಯಾಣಗಳನ್ನು ನಿಯಂತ್ರಿಸಬೇಕು ಎಂದು ಹೇಳಿದೆ. ಸೋಂಕಿನ ಲಕ್ಷಣಗಳಿಲ್ಲದ ಮತ್ತು ಅಗತ್ಯ ಸೇವೆಯ ಓಡಾಟಗಾರರು ಸೂಕ್ತ ಕೋವಿಡ್ ನಿಯಾಮವಳಿಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಭಾರತದಲ್ಲಿ ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಬುಧವಾರ 3.82 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 3,780 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಹೆಚ್ಚಾಗಿರುವ ರಾಜ್ಯಗಳಲ್ಲಿ ಆರ್‌ಟಿ-ಪಿಸಿಆರ್ ವರದಿ ಲಭ್ಯವಾಗುವುದು ತಡವಾಗುತ್ತಿದೆ. ಕೆಲವರು ಭಯದಿಂದ ಅನಗತ್ಯವಾಗಿ ಪದೇ ಪದೇ ಕೋವಿಡ್ ಪರೀಕ್ಷೆಗಳಿಗೆ ಒಳಪಡುತ್ತಿದ್ದಾರೆ. ಹೀಗಾಗಿ ತೀವ್ರ ಸಮಸ್ಯೆ ಕಂಡುಬಂದ ರೋಗಿಗಳ ಪರೀಕ್ಷೆ ನಡೆಸುವುದು ತಡವಾಗುತ್ತಿದೆ.