'ಮಯೂರ'ದ ಆ ದೃಶ್ಯದ ಶೂಟಿಂಗ್ ವೇಳೆ ಅಪ್ಪು ಹುಟ್ಟಿದ, ಆಶೀರ್ವಾದವೂ ಸಿಗ್ತು: ರಾಘವೇಂದ್ರ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಬಳಿಕ ಮಾತನಾಡಿರುವ ರಾಘವೇಂದ್ರ ರಾಜ್‌ಕುಮಾರ್ ಅವರು ಹಾಲು ತುಪ್ಪ ಕಾರ್ಯಕ್ರಮ, ಸಮಾಧಿ ವೀಕ್ಷಣೆಗೆ ಅವಕಾಶದ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ 'ಮಯೂರ' ಸಿನಿಮಾ ಶೂಟಿಂಗ್ ವೇಳೆ ಅಪ್ಪು ಹುಟ್ಟಿದ್ದಾನೆ ಅಂತ ಕೂಡ ಹೇಳಿದ್ದಾರೆ.

'ಮಯೂರ'ದ ಆ ದೃಶ್ಯದ ಶೂಟಿಂಗ್ ವೇಳೆ ಅಪ್ಪು ಹುಟ್ಟಿದ, ಆಶೀರ್ವಾದವೂ ಸಿಗ್ತು: ರಾಘವೇಂದ್ರ ರಾಜ್‌ಕುಮಾರ್
Linkup
ನಿಧನದ ನಂತರದಲ್ಲಿ ಮಾಧ್ಯಮದ ಮುಂದೆ ಬಂದು ಧೈರ್ಯವಾಗಿ ಮಾತನಾಡಿ ಶಾಂತಿಯಿಂದ ಅಂತ್ಯಸಂಸ್ಕಾರ ಮಾಡಿ ಕಳಿಸಿಕೊಡೋಣ ಅಂತ ಹೇಳಿದ್ದ ರಾಘವೇಂದ್ರ ರಾಜ್‌ಕುಮಾರ್ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇಂತಹ ನೋವಿನ ಸಂದರ್ಭದಲ್ಲಿಯೂ ಸಂಯಮದಿಂದ ವರ್ತಿಸಿದ ರಾಘಣ್ಣನ ನಡೆಗೆ ಎಲ್ಲರೂ ಭೇಷ್ ಎಂದಿದ್ದರು. ಅಂತ್ಯಕ್ರಿಯೆ ಸಂಪೂರ್ಣಗೊಂಡ ಬಳಿಕ ಮಾಧ್ಯಮದ ಮುಂದೆ ಬಂದು, ರಾಘವೇಂದ್ರ ರಾಜ್‌ಕುಮಾರ್ ಅವರು ಅಪ್ಪು ಹುಟ್ಟಿದ ದಿನದ ಬಗ್ಗೆ ಮಾತನಾಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೇನು? ಈ ಮೂರು ದಿನದ ಪ್ರಯಾಣವನ್ನು ಶಾಂತಿಯಾಗಿ, ಯಾರಿಗೂ ಹಾನಿ ಆಗದಂತೆ ಮಾಡಿಕೊಟ್ಟಿದ್ದೀರಾ. ಜನಗಳಿಗೂ ತಲುಪಿಸಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದಗಳು. ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡೋಕೆ ಅಪ್ಪು ಇಲ್ಲಿ ಬರುತ್ತಿದ್ದರು. ಅವರನ್ನು ಪ್ರೀತಿಸಿ, ಅವರ ಜೊತೆ ಹೊರಟು ಹೋದ ಅಂದರೆ ನಂಬೋಕೆ ಆಗ್ತಿಲ್ಲ, ಸತ್ಯ ಅದು. ಇನ್ನು ನಾವು ಅಪ್ಪಾಜಿ-ಅಮ್ಮನಿಗೆ ನಮಸ್ಕಾರ ಮಾಡಿ ಅವನನ್ನು ನೋಡಿಕೊಂಡು ಹೋಗಬೇಕು. ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ, ಗಾಯನ, ಹೆಸರು ಅಂತ ಎಲ್ಲವನ್ನು ಬೇಗ ಪಡೆದುಕೊಂಡರು. ಹೆಚ್ಚು ಹೆಸರು ಮಾಡುವ ಟೈಮ್‌ನಲ್ಲಿ ಹೋದರು. ನನಗೂ ಅಪ್ಪುಗೆ 10 ವರ್ಷದ ವ್ಯತ್ಯಾಸ ಇದೆ. ನಾನು ಅವನಿಗೆ ಮಗನೇ ಮಗನೇ ಅಂತ ಕರೆಯುತ್ತಿದ್ದೆ. ಪುತ್ರ ಶೋಕ ನಿರಂತರಂ ಅಂತ ಹೇಳ್ತಾರೆ. ನಾವು ಇರುವವರೆಗೂ ಆ ದುಃಖ, ಶೋಕ ಇದ್ದೇ ಇರುತ್ತದೆ, ಅದರ ಜೊತೆ ನಾನು ಬೆಳೆಯಬೇಕು. ನನ್ನ ಜೊತೆ ಅಪ್ಪುರನ್ನು ಶೂಟಿಂಗ್ ಕರೆದುಕೊಂಡು ಹೋಗತ್ತೆ. 'ಮಯೂರ' ಸಿನಿಮಾ ಶೂಟಿಂಗ್ ಮಾರ್ಚ್ 17ರಂದು ನಡೆಯುತ್ತಿತ್ತು, ಪ್ರಭಾಕರ್, ಅಪ್ಪಾಜಿ ಶೂಟಿಂಗ್ ಸ್ಥಳದಲ್ಲಿದ್ದರು. ಫೈಟಿಂಗ್ ದೃಶ್ಯದ ವೇಳೆ ಅಪ್ಪು ಹುಟ್ಟಿದ್ದನು. ಅಂದು ಅವನಿಗೆ ಆಶೀರ್ವಾದ ಸಿಕ್ಕಿದ್ದಕ್ಕೆ ಆಕ್ಷನ್ ಹೀರೋ ಆದ ಅಂತ ಅನಿಸತ್ತೆ, ಫೈಟ್‌ನಲ್ಲಿ ಮುಂದೆ ಇದ್ದ. ಯಾವ ಮಗು ಆಯ್ತು ಅಂತ ಕೇಳಲು ಶೂಟಿಂಗ್‌ ಸ್ಥಳದಲ್ಲಿಯೇ ಅಪ್ಪಾಜಿ ಫೋನ್ ಬರತ್ತೆ ಅಂತ ಕಾಯುತ್ತಿದ್ರು, ಆಗ ಫೋನ್ ಮಾಡಿ ಗಂಡು ಮಗು ಅಂತ ಹೇಳಲಾಯ್ತು. ಶೂಟಿಂಗ್ ಸ್ಥಳದಿಂದ ಆಸ್ಪತ್ರೆಗೆ ಬಂದು ಅಪ್ಪಾಜಿ ಮಗುವನ್ನು ಎತ್ತಿಕೊಂಡರು. ಹಲ್ಲು ಬರದಿರುವಾಗಲೇ 'ಪ್ರೇಮದ ಕಾಣಿಕೆ' ಸಿನಿಮಾದ ಹಾಡೊಂದರಲ್ಲಿ ಅಪ್ಪು ಕಾಣಿಸಿಕೊಂಡ. ಬಿಡಲಾರೆ ಎಂದು ನಿನ್ನ..ಹಾಡು ಅದಾಗಿತ್ತು. ಯಾರೂ ಏನೂ ಹೇಳದಿದ್ದರೂ ಕೂಡ ಅಪ್ಪಾಜಿ ಅವನನ್ನು ಎತ್ತಿಕೊಂಡ ತಕ್ಷಣ ಅಪ್ಪಾಜಿಯನ್ನು ನೋಡಿ ಅಪ್ಪು ನಕ್ಕುಬಿಟ್ಟ, ಆಗ ನಿರ್ದೇಶಕರು ನೋಡಿ ಏನೂ ಹೇಳದೆ ನಕ್ಕಿದ್ದಾನೆ, ಕಲೆ ಈಗಲೇ ಅವನಿಗೆ ಬಂದುಬಿಟ್ಟದೆ ಎಂದು ಹೇಳಿದ್ರು. 60-70 ವರ್ಷದಲ್ಲಿ ಮಾಡಬೇಕಾದ ಹೆಸರನ್ನು ಅಪ್ಪು 46ನೇ ವಯಸ್ಸೊಳಗೆ ಮಾಡಿ, ನಮ್ಮನ್ನೆಲ್ಲ ಬಿಟ್ಟು ನೆನಪಾಗಿ ಉಳಿದುಬಿಟ್ಟ ಮೂರು ದಿನಕ್ಕೆ ಹಾಲು-ತುಪ್ಪ ಕಾರ್ಯಕ್ರಮ ಮಾಡಬೇಕಿತ್ತು, ಇವತ್ತು ಮಣ್ಣು ಮಾಡಿರೋದರಿಂದ ಐದನೇ ದಿನ ಮಂಗಳವಾರ ಹಾಲು-ತುಪ್ಪ ಕಾರ್ಯಕ್ರಮ ಮಾಡುತ್ತೇವೆ. ಸಿಎಂ ಜೊತೆ ಮಾತನಾಡಿ ಅಭಿಮಾನಿಗಳಿಗೆ ಸಮಾಧಿ ನೋಡಲು ಅವಕಾಶ ಮಾಡಿಕೊಡುತ್ತೇವೆ, ಸ್ವಲ್ಪ ಸ್ವಚ್ಛಗೊಳಿಸಿ ಸರ್ಕಾರ ಆ ಅವಕಾಶ ಕೊಡತ್ತೆ. ನಾವು ಬೇರೆ ಅಲ್ಲ, ನೀವು ಬೇರೆ ಅಲ್ಲ. ನಮಗೆ ಎಷ್ಟು ಹಕ್ಕಿದೆಯೋ ಅಷ್ಟು ಹಕ್ಕು ನಿಮಗೂ ಇದೆ