ಅಪ್ಪು ಮೇಲೆ ನಮಗೆ ಪ್ರೀತಿ ಇಲ್ವಾ? ನಾವು ಸಹಿಸ್ಕೊಂಡಿಲ್ವಾ? ಯಾರೂ ಆತ್ಮಹತ್ಯೆ ಮಾಡ್ಕೋಬೇಡಿ: ಶಿವರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಬಳಿಕ ಮಾಧ್ಯಮದ ಜೊತೆ ಡಾ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ, ಅಭಿಮಾನಿಗಳು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಅವರು ವಿನಂತಿ ಮಾಡಿದ್ದಾರೆ.

ಅಪ್ಪು ಮೇಲೆ ನಮಗೆ ಪ್ರೀತಿ ಇಲ್ವಾ? ನಾವು ಸಹಿಸ್ಕೊಂಡಿಲ್ವಾ? ಯಾರೂ ಆತ್ಮಹತ್ಯೆ ಮಾಡ್ಕೋಬೇಡಿ: ಶಿವರಾಜ್‌ಕುಮಾರ್
Linkup
ಮಣ್ಣಲ್ಲಿ ಮಣ್ಣಾಗಿ ಹೋದರು. ಕಿರಿಯ ತಮ್ಮನನ್ನು ಕಳೆದುಕೊಂಡು ಡಾ ಶಿವರಾಜ್‌ಕುಮಾರ್ ದುಃಖದಲ್ಲಿದ್ದಾರೆ, ಇಡೀ ದೊಡ್ಮನೆ ಕುಟುಂಬ, ಅಭಿಮಾನಿ ಬಳಗ, ಕನ್ನಡ ಸೇರಿದಂತೆ ಉಳಿದ ಚಿತ್ರರಂಗದಲ್ಲಿಯೂ ಸೂತಕದ ಛಾಯೆ ಆವರಿಸಿದೆ, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಪ್ಪು ನಿಧನದ ನಂತರದಲ್ಲಿ, ಅಂತ್ಯಕ್ರಿಯೆ ಕಾರ್ಯ ಮುಗಿಸಿ ಶಿವಣ್ಣ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ಪ್ರತಿಕ್ರಿಯೆ ನೀಡಿದ್ದಾರೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅಪ್ಪು ಇಲ್ಲ ಅಂತ ಹೇಳಲು ಕಷ್ಟ ಆಗತ್ತೆ, ಭಗವಂತನಿಗೆ ಅವನು ಬೇಗ ಇಷ್ಟ ಆದ. ಆದರೆ ಈ ಎಲ್ಲ ನೋವು ಮರೆತು ಜೀವನ ಸಾಗಿಸಿ ಎನ್ನುವ ಕಿವಿಮಾತನ್ನು ಶಿವಣ್ಣ ಹೇಳಿದ್ದಾರೆ. ಶಿವರಾಜ್‌ಕುಮಾರ್ ಹೇಳಿದ್ದೇನು? ಅಪ್ಪು ಇಲ್ಲ ಅಂತ ಹೇಳಲು ಕಷ್ಟ ಆಗತ್ತೆ, ತುಂಬ ಚಿಕ್ಕವನು. ಆದಷ್ಟು ಬೇಗ ಭಗವಂತನಿಗೆ ಇಷ್ಟ ಆಗಿಬಿಟ್ಟರೆ ನಮಗೆ, ಅಭಿಮಾನಿಗಳಿಗೆ ನೋವು ಆಗುತ್ತಿದೆ. ಜನರು ಅಳುವುದನ್ನು ನೋಡಿ ಇನ್ನಷ್ಟು ಬೇಸರ ಆಗುತ್ತದೆ. ಅವಸರವಾಗಿ ಕರೆದುಕೊಂಡು ಬಿಟ್ನಾ ಅಂತ ಅನಿಸುತ್ತಿದೆ. ಇಲ್ಲಿ ಎಲ್ಲಿಯೋ ಹೋಗಿದ್ದಾನಾ ಅಂತ ಅನಸ್ತಿದೆ. ನನಗಿಂತ 13 ವರ್ಷ ಚಿಕ್ಕವನು. ನಾನು ಅವನನ್ನು ಎತ್ತಿ ಆಡಿಸಿದವನು. ನನ್ನ ಮಗುವನ್ನು ಕಳೆದುಕೊಂಡಷ್ಟು ದುಃಖ ಆಗ್ತಿದೆ. ಕುಟುಂಬ ಇದೆ, ಜೀವನ ಸಾಗಬೇಕು, ನಾವು ಅವರ ಜೊತೆಗಿರುತ್ತೇವೆ, ಸುಲಭವಾಗಿ ನಾವು ಬಿಟ್ಟುಕೊಡೋದಿಲ್ಲ. ಪೊಲೀಸರು, ಸರ್ಕಾರ ಒಳ್ಳೆಯ ಸಹಕಾರ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಕುಟುಂಬದ ಮೇಲೆ ಅಭಿಮಾನ ಇಟ್ಟುಕೊಂಡು ಅಂತ್ಯಕ್ರಿಯೆವರೆಗೂ ಸಹಕರಿಸಿದ್ದಕ್ಕೆ ಧನ್ಯವಾದಗಳು. ಅಪ್ಪಾಜಿ ಅಂತ್ಯಕ್ರಿಯೆ ನಮಗೆ ತುಂಬ ಕಷ್ಟ ಆಯ್ತು. ಈ ಬಾರಿ ಎರಡು ದಿನ ಇಟ್ಟುಕೊಂಡೆವು, ಸಿಕ್ಕಾಪಟ್ಟೆ ಜನರು ಬಂದಿದ್ದರು. ಎಲ್ಲರೂ ಕೊನೆಯಲ್ಲಿ ಅಪ್ಪು ದರ್ಶನ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಲು ತುಪ್ಪ ಆಗುವವರೆಗೂ ಕೂಡ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡೋದಿಲ್ಲ. ಆನಂತರದಲ್ಲಿ ಸಿಎಂ ಜೊತೆ ಮಾತನಾಡಿ ಸಮಾಧಿ ಬಳಿ ಮಾತನಾಡುತ್ತೇವೆ, ಅಭಿಮಾನಿಗಳೇ, ನಿಮ್ಮ ಅಪ್ಪುವನ್ನು ನೀವು ನೋಡದೆ ಇನ್ನು ಯಾರು ನೋಡಬೇಕು ಹೇಳಿ. ಅಪ್ಪು ಇದ್ದಾನೆ. ನನ್ನಲ್ಲಿ, ರಾಘು, ಚಿತ್ರರಂಗ, ನಿರ್ಮಾಪಕರಲ್ಲಿ ಪುನೀತ್ ಇದ್ದಾನೆ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರೆ ಪುನೀತ್‌ಗೆ ಇಷ್ಟ ಆಗಲ್ಲ, ದಯವಿಟ್ಟು ಹೀಗೆಲ್ಲ ಮಾಡಬೇಡಿ, ಆ ರೀತಿ ಹೆಜ್ಜೆ ಇಡಬೇಡಿ. ಅಭಿಮಾನ ಇರಬೇಕು, ಆದರೆ ಕುಟುಂಬದ ಜೊತೆಗೆ ನೀವು ಇರಬೇಕು, ಅದು ನಿಮ್ಮ ಜವಾಬ್ದಾರಿ. ನಿಮ್ಮ ಅವಶ್ಯಕತೆ ನಿಮ್ಮ ಕುಟುಂಬಕ್ಕಿದೆ. ನಮಗೂ ಕೂಡ ಅಪ್ಪು ಕಂಡರೆ ಇಷ್ಟ, ಆದರೆ ನಾವು ಇಲ್ವಾ? ನಮ್ಮ ಕುಟುಂಬದ ಜೊತೆಗೆ ನಾವು ಇರಬೇಕು, ಅದು ನಮ್ಮ ಜವಾಬ್ದಾರಿ ಆಗತ್ತೆ. ನಿಮ್ಮ ಕೋಪ, ನೋವು ತೋರಿಸಬೇಡಿ, ಏನೇ ಆದರೂ ದುಃಖ ನುಂಗಿ ನಡೆಯುತ್ತಿರಬೇಕು, ಇದನ್ನೇ ಅಪ್ಪಾಜಿ ಕೂಡ ಹೇಳುತ್ತಿದ್ದರು. ಎಲ್ಲರೂ ಅವರವರ ಕೆಲಸ ಮಾಡಿಕೊಳ್ಳಿ. ಎಲ್ಲವನ್ನು ಮರೆತು ನಾವು ಹೇಳಿದ ಮಾತು ನೆನಪಿಟ್ಟುಕೊಳ್ಳಿ ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ವಿನಯ್ ರಾಜ್‌ಕುಮಾರ್ ಅವರು ಚಿಕ್ಕಪ್ಪನ ಅಂತ್ಯಕ್ರಿಯೆಯ ವಿಧಿ ವಿಧಾನ ನೆರವೇರಿಸಿದ್ದಾರೆ.