ಮುಂದಿನ 9 ವರ್ಷಗಳಲ್ಲಿ ದೇಶದಲ್ಲಿ 50% ಸೌರ ವಿದ್ಯುತ್‌ ಬಳಕೆ; ಇಂಧನ ಸಚಿವ ಆರ್‌ಕೆ ಸಿಂಗ್‌

ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಮೇಲಿನ ಅವಲಂಬನೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ. ‘ವಿದ್ಯುತ್‌ ಪೂರೈಕೆ ಕಂಪನಿಗಳು, ನಿಗಮಗಳು 2022 ರವರೆಗೆ ನಿಗದಿತ ಪ್ರಮಾಣದ ಸ್ವಚ್ಛ ಇಂಧನ (ಸೌರ, ಪವನ) ಖರೀದಿಸಬೇಕು ಎಂಬ ಒಪ್ಪಂದವಿದೆ. ಇದನ್ನು 2030ರವರೆಗೆ ವಿಸ್ತರಿಸಲಾಗುವುದು ಎಂದು ಆರ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಮುಂದಿನ 9 ವರ್ಷಗಳಲ್ಲಿ ದೇಶದಲ್ಲಿ 50% ಸೌರ ವಿದ್ಯುತ್‌ ಬಳಕೆ; ಇಂಧನ ಸಚಿವ ಆರ್‌ಕೆ ಸಿಂಗ್‌
Linkup
ಹೊಸದಿಲ್ಲಿ: ಮುಂದಿನ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಶೇ. 50ರಷ್ಟು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್‌ ಬಳಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ಹೇಳಿದ್ದಾರೆ. ಗ್ಲಾಸ್ಗೊ ಜಾಗತಿಕ ಹವಾಮಾನ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2070ರೊಳಗೆ ಭಾರತ ಇಂಗಾಲ ಹೊರಸೂಸುವಿಕೆಯಿಂದ ಮುಕ್ತಗೊಳ್ಳಲಿದೆ ಎಂಬ ಮಹತ್ತರ ಘೋಷಣೆ ಮಾಡಿದ ಬೆನ್ನಲ್ಲಿಯೇ ಇಂಧನ ಸಚಿವರು ಈ ಮಾಹಿತಿ ನೀಡಿದ್ದಾರೆ. 2030ರೊಳಗೆ ದೇಶಾದ್ಯಂತ ನವೀಕರಿಸಬಹುದಾದ ಮೂಲಗಳಿಂದ 500 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು. ಈಗಾಗಲೇ 450 ಗಿಗಾ ವ್ಯಾಟ್‌ ವಿದ್ಯುತ್‌ ಅನ್ನು ಸೌರ, ಪವನ ಮೊದಲಾದ ಇಂತಹ ಅಸಂಪ್ರದಾಯಿಕ ಮೂಲಗಳಿಂದಲೇ ಉತ್ಪಾದಿಸಲಾಗುತ್ತಿದೆ. ಪಳೆಯುಳಿಕೆ ಉಳಿಸದ ವಿದ್ಯುತ್‌ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಸಿಂಗ್‌ ತಿಳಿಸಿದ್ದಾರೆ. ಮೋದಿ ಅವರ ಆಶಯವನ್ನು ಅವರ ನಿರೀಕ್ಷೆಗೂ ಮುನ್ನವೇ ಈಡೇರಿಸಲಿದ್ದೇವೆ. ಇದಕ್ಕೆ ಪೂರಕವಾಗಿ ಜಲ ವಿದ್ಯುದಾಗಾರಗಳ ಇಂಧನ ಉತ್ಪಾದನೆ ಸಾಮರ್ಥ್ಯವನ್ನು 63 ಗಿಗಾ ವ್ಯಾಟ್‌ನಷ್ಟು ಹೆಚ್ಚಿಸಲು ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಮೇಲಿನ ಅವಲಂಬನೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ. ‘ವಿದ್ಯುತ್‌ ಪೂರೈಕೆ ಕಂಪನಿಗಳು, ನಿಗಮಗಳು 2022 ರವರೆಗೆ ನಿಗದಿತ ಪ್ರಮಾಣದ ಸ್ವಚ್ಛ ಇಂಧನ (ಸೌರ, ಪವನ) ಖರೀದಿಸಬೇಕು ಎಂಬ ಒಪ್ಪಂದವಿದೆ. ಇದನ್ನು 2030ರವರೆಗೆ ವಿಸ್ತರಿಸಲಾಗುವುದು ಎಂದು ಸಿಂಗ್‌ ತಿಳಿಸಿದ್ದಾರೆ. ಜವಾಬ್ದಾರಿ ಹೊರದ ದೇಶಗಳು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪಣತೊಟ್ಟು ಸೂಕ್ತ ಸಮಯಕ್ಕೆ ಅಗತ್ಯ ಹಣಕಾಸು ನೆರವನ್ನು ನೀಡಿದಲ್ಲಿ ಮಾತ್ರವೇ ಹವಾಮಾನ ವೈಪರೀತ್ಯ ತಡೆಗೆ ಜಾಗತಿಕವಾಗಿ ಪರಿಣಾಮಕಾರಿ ಕ್ರಮ ಸಾಧ್ಯವಾಗುತ್ತದೆ. ಐತಿಹಾಸಿಕ ಜವಾಬ್ದಾರಿ ಹೊರಲು ಮತ್ತು ಜಾಗತಿಕ ತಾಪಮಾನ ಇಳಿಕೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದುವರಿದ ರಾಷ್ಟ್ರಗಳೇ ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಎಂದು ಸಿಒಪಿ26 ಹವಾಮಾನ ಶೃಂಗದಲ್ಲಿ ಭಾರತ ಹೇಳಿದೆ. 26ನೇ ಹವಾಮಾನ ಸಮ್ಮೇಳನದ ಉನ್ನತ ಮಟ್ಟದ ಸಚಿವಾಲಯ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ್ತಿ ಚಾಂದಿನಿ ರೈನಾ ಅವರು, 2009ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾಡಿದ ಸಂಕಲ್ಪದಂತೆ ಹವಾಮಾನ ವೈಪರೀತ್ಯ ನಿಯಂತ್ರಣದ ಪರಿಣಾಮಕಾರಿ ಕ್ರಮಗಳಿಗಾಗಿ ವಾರ್ಷಿಕ 7.41 ಲಕ್ಷ ಕೋಟಿ ರೂ. ಸಂಗ್ರಹಿಸಬೇಕಿತ್ತು. ಇದು ಸಾಧ್ಯವಾಗಿಲ್ಲ. ಇದರಿಂದಾಗಿ ವಿವಿಧ ದೇಶಗಳ ಹವಾಮಾನ ನಿಯಂತ್ರಣ ಕಾರ್ಯಕ್ರಮಗಳು ನನೆಗುದಿಗೆ ಬೀಳಲಿವೆ. ಪರಿಣಾಮ ಜಾಗತಿಕವಾಗಿ ತಾಪಮಾನ ಹೆಚ್ಚಳಕ್ಕೆ ಅಂಕುಶ ಹಾಕುವ ಶೃಂಗದ ನಿರ್ಣಯ ವಿಫಲವಾಗಲಿದೆ. ಹೀಗಾಗಿ 2023ರ ಒಳಗಾಗಿ ನಿಧಿ ಸಂಗ್ರಹದ ಗುರಿ ತಲುಪಲು ನೀಲನಕ್ಷೆಯ ಅಗತ್ಯ ಎದುರಾಗಿದೆ ಎಂದಿದ್ದಾರೆ. ಅಭಿವೃದ್ಧಿ ಶೀಲ ರಾಷ್ಟ್ರಗಳು ಇಂಗಾಲ ಹೊರ ಸೂಸುವಿಕೆ ಪ್ರಮಾಣ ತಗ್ಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಈ ಮುಂಚೆಯೇ ನಿರ್ಧಾರವಾದಂತೆ ಅಗತ್ಯ ಅನುದಾನ ಬಿಡುಗಡೆ ಆಗುವುದು ಮುಖ್ಯ ಎಂದು ಜಾಗತಿಕ ತಾಪಮಾನ ಕುರಿತು ವಿಶ್ವಸಂಸ್ಥೆಯ ಐಪಿಸಿಸಿ ವಿಭಾಗವು ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಈ ಹಿಂದಿನ ನಿರ್ಣಯದ ಪ್ರಕಾರ, 2025ರೊಳಗೆ ಪ್ರತಿ ವರ್ಷ 100 ಬಿಲಿಯನ್‌ ಡಾಲರ್‌ ಸಂಗ್ರಹ ಗುರಿ ನಿರ್ಧರಿಸಲಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಕೊಡುಗೆ ನೀಡಲು ನಿರಾಕರಿಸುತ್ತಿರುವುದು ವಿಶ್ವಸಂಸ್ಥೆಗೂ ಸಮಸ್ಯೆಯಾಗಿ ಪರಿಣಮಿಸಿದೆ.