ಬೆಂಗಳೂರಿನಲ್ಲಿ ಅನ್ಯ ಕೋಮಿನ ಯುವತಿಗೆ ಡ್ರಾಪ್‌ ನೀಡಿದ ಸಹೋದ್ಯೋಗಿ ಮೇಲೆ ಹಲ್ಲೆ!

ಬೆಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಿದೆ. ಸಹದ್ಯೋಗಿಗೆ ಡ್ರಾಪ್‌ ನೀಡಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಬೈಕ್‌ ಅಡ್ಡಗಟ್ಟಿ ಕಿರಿಕ್‌ ಮಾಡಿದ ಯುವಕರು ಸಹದ್ಯೋಗಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಯುವತಿಯನ್ನು ಆಟೋದಲ್ಲಿ ಹೋಗುವಂತೆ ಅವರು ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಅನ್ಯ ಕೋಮಿನ ಯುವತಿಗೆ ಡ್ರಾಪ್‌ ನೀಡಿದ ಸಹೋದ್ಯೋಗಿ ಮೇಲೆ ಹಲ್ಲೆ!
Linkup
ಬೆಂಗಳೂರು: ಅನ್ಯ ಧರ್ಮೀಯ ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಪ್‌ ಮಾಡುವ ವೇಳೆ ಬೈಕ್‌ ಅಡ್ಡಗಟ್ಟಿ ನಡು ರಸ್ತೆಯಲ್ಲಿ ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರನ್ವಯ ದೂರು ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಂಪನಿಯೊಂದರಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಯುವತಿ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಅವರನ್ನು ಹಿಂಬಾಲಿಸಿದ್ದ ಗುಂಪು, ಬೈಕ್‌ ಅಡ್ಡಗಟ್ಟಿ ಬೈಕ್‌ ಸವಾರ ಮಹೇಶ್‌ ಜತೆ ಗಲಾಟೆ ಮಾಡಿ ಆತನ ಮೇಲೆ ಹಲ್ಲೆ ನಡೆಸಿತ್ತು ಎಂದು ಪೊಲೀಸ್‌ ಮೂಲಗಳು ಹೇಳಿವೆ. ''ನಮ್ಮ ಧರ್ಮದ ಯುವತಿಯನ್ನು ಬೈಕ್‌ನಲ್ಲಿ ಏಕೆ ಕರೆದೊಯ್ಯುತ್ತಿದ್ದೀಯಾ? ಎಂದು ಅನ್ಯ ಕೋಮಿನ ಗುಂಪು ಮಹೇಶ್‌ನನ್ನು ಪ್ರಶ್ನಿಸಿತ್ತು. ಈ ವೇಳೆ ''ನಾವಿಬ್ಬರು ಸಹೋದ್ಯೋಗಿಗಳು''ಎಂದು ಯುವತಿ ಹಾಗೂ ಯುವಕ ಹೇಳಿದ್ದರು. ಆಗ ಯುವತಿ ಜತೆಯೂ ವಾದ ಮಾಡಿದ್ದ ಆರೋಪಿಗಳು, ''ಅಧಿನ್ಯ ಧರ್ಮದ ಯುವಕನ ಜತೆ ಹೋಗಲು ನಿನಗೆ ನಾಚಿಕೆ ಆಗೋದಿಲ್ಲವೇ? ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬ ಪರಿಜ್ಞಾನ ನಿನಗಿಲ್ಲವೇ?'' ಎಂದು ಏರುದನಿಯಲ್ಲಿ ಬೆದರಿಸಿದ್ದರು. ಅಲ್ಲದೆ, ಕುಟುಂಬದವರ ಮೊಬೈಲ್‌ ನಂಬರ್‌ ಪಡೆದು ಅವರ ಜತೆಯೂ ಕೆಟ್ಟದ್ದಾಗಿ ಮಾತನಾಡಿದ್ದರು. ಯುವಕನ ಮೇಲೆಯೂ ಹಲ್ಲೆ ಮಾಡಿದ್ದರು. ಯುವತಿಯನ್ನು ಬೈಕ್‌ನಿಂದ ಇಳಿಸಿ ಆಟೋದಲ್ಲಿ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವತಿ ಜತೆ ಇನ್ನೊಮ್ಮೆ ಬೈಕ್‌ನಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದರು ಎಂದೂ ಮೂಲಗಳು ತಿಳಿಸಿವೆ. ಹಲ್ಲೆ ಮಾಡಿರುವ ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಹೋದ್ಯೋಗಿ ಜತೆ ಬೈಕ್‌ ಮೇಲೆ ಹೋಗುವುದು ತಪ್ಪಾ? ಎಂದು ಹಲವರು ಪ್ರತಿಕ್ರಿಯಿಸಿದ್ದರು. ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಂತೆ ಆಗ್ರಹಿಸಿದ್ದರು. ಪ್ರಕರಣದ ಸಂಬಂಧ ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಹಿಳಾ ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದ ಯುವಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಂತಹ ತಪ್ಪೆಸಗುವವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹೇಶ್, ನಾವು ಇಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ಮನೆಗೆ ಹೋಗಬೇಕಾದರೆ ಯುವತಿ ಮನೆಯ ದಾರಿಯಿಂದಲೇ ಹೋಗಬೇಕು. ಹೀಗಾಗಿ ಹಲವು ಬಾರಿ ಡ್ರಾಪ್‌ ನೀಡಿದ್ದೇನೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಯೇ, ನಾವಿಬ್ಬರು ಕಚೇರಿಯಿಂದ ಒಟ್ಟಿಗೆ ಬರುತ್ತಿದ್ದೇವೆ. ಈ ವಿಚಾರ ಯುವತಿಯ ಗಂಡ ಹಾಗೂ ಅತ್ತೆಗೂ ಗೊತ್ತಿದೆ. ಹೀಗೆ ಬರುತ್ತಿರುವಾಗ ದುಷ್ಕರ್ಮಿಗಳು ವಾಹನ ತಡೆದು ಗಲಾಟೆ ಮಾಡಿದ್ದಾರೆ. ಹಲ್ಲೆ ಕೂಡ ನಡೆಸಿದ್ದಾರೆ ಎಂದು ಮಹೇಶ್‌ ಆರೋಪಿಸಿದ್ದಾರೆ.