
ಹೊಸದಿಲ್ಲಿ: ಕೋವಿಡ್ ನಿರ್ವಹಣೆ ಹಾಗೂ ಲಸಿಕೆಗಳ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಅವರನ್ನು ಟೀಕಿಸಿ ದೆಹಲಿ ನಗರದ ಅನೇಕ ಕಡೆಗಳಲ್ಲಿ ಬಿತ್ತಿಪತ್ರಗಳನ್ನು ಅಂಟಿಸಿದ್ದಕ್ಕಾಗಿ ಸುಮಾರು 17 ಜನರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ನಾಯಕ ಹಾಗೂ ಇತರೆ ಮುಖಂಡರು ಕಿಡಿಕಾರಿದ್ದಾರೆ.
'ನನ್ನನ್ನೂ ಬಂಧಿಸಿ' ಎಂದು ರಾಹುಲ್ ಗಾಂಧಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಅವರು ಕಪ್ಪು ಹಿನ್ನೆಲೆಯಲ್ಲಿ ಪ್ರತಿಭಟನಾತ್ಮಕವಾಗಿ 'ಮೋದಿ ಜಿ, ನಮ್ಮ ಮಕ್ಕಳಿಗಾಗಿ ಮೀಸಲಿರಿಸಿದ್ದ ಲಸಿಕೆಗಳನ್ನು ಏಕೆ ವಿದೇಶಕ್ಕೆ ಕಳುಹಿಸಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ದೆಹಲಿಯ ಅನೇಕ ಭಾಗಗಳಲ್ಲಿ ಇದೇ ಬರಹವುಳ್ಳ ಬಿತ್ತಿಪತ್ರಗಳು ಪತ್ತೆಯಾಗಿದ್ದು, ಈ ಕಾರಣಕ್ಕೆ 17 ಮಂದಿಯನ್ನು ಬಂಧಿಸಲಾಗಿದೆ.
ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಸತತ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು 'ನನ್ನನ್ನೂ ಬಂಧಿಸುತ್ತೀರಾ?' ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ನ ಅನೇಕ ನಾಯಕರು ಈ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನನಗೆ ಆಘಾತ ಮತ್ತು ದಿಗಿಲಾಗಿದೆ. ಇದು ಭಾವೋದ್ವೇಗದ ಅಸಮ್ಮತಿ ಇರಬಹುದು. ಆದರೆ ಆಟೊ ಚಾಲಕ, ಮುದ್ರಣಕಾರ, ದಿನಗೂಲಿ ಕಾರ್ಮಿಕ ಇತ್ಯಾದಿ, ಅಂಟಿಸಿದವರನ್ನೆಲ್ಲ ಯಾವ ಅಧಿಕಾರ, ಯಾವ ಕಾನೂನು, ಯಾವ ಶಕ್ತಿಯಡಿ ನೀವು ಬಂಧಿಸಿದ್ದೀರಿ? ಇದು ತನ್ನ ತಂದೆಯನ್ನು ಕಳೆದುಕೊಂಡಿದ್ದಕ್ಕೆ ದೂರು ನೀಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದಂತೆ, ಕಾನೂನು ಇಲ್ಲದ ರಾಜ್ಯವು ರಕ್ತದಾಹಿಯಾಗುತ್ತಿದೆ' ಎಂದು ಅಭಿಷೇಕ್ ಸಿಂಘ್ವಿ ಟೀಕಿಸಿದ್ದಾರೆ.
'ಭಾರತವು ಸ್ವತಂತ್ರ ದೇಶ ಎಂಬುದನ್ನು ಸಂಭ್ರಮಿಸಿ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ, ನೀವು ಗೌರವಾನ್ವಿತ ಪ್ರಧಾನಿಯನ್ನು ಪ್ರಶ್ನಿಸಿದ ಸಂದರ್ಭವನ್ನು ಹೊರತುಪಡಿಸಿ. ಹೀಗಾಗಿಯೇ ದೆಹಲಿ ಪೊಲೀಸರು ದೆಹಲಿಯಲ್ಲಿ ಪೋಸ್ಟರ್ ಅಂಟಿಸಿದ ಆರೋಪದಲ್ಲಿ 24 ಜನರನ್ನು ಬಂಧಿಸಿದ್ದಾರೆ' ಎಂದು ಪಿ ಚಿದಂಬರಂ ವ್ಯಂಗ್ಯವಾಗಿ ಹೇಳಿದ್ದಾರೆ.
ಈ ಪೋಸ್ಟರ್ಗಳನ್ನು ಹಂಚಿಕೊಂಡಿರುವ ಜೈರಾಂ ರಮೇಶ್, 'ಪ್ರಧಾನಿ ವಿರುದ್ಧ ಟೀಕಾತ್ಮಕ ಪೋಸ್ಟರ್ಗಳನ್ನು ಅಂಟಿಸುವುದು ಅಪರಾಧವೇ? ಭಾರತವು ಮೋದಿ ಪೀನಲ್ ಕೋಡ್ನಿಂದ ನಡೆಯುತ್ತಿದೆಯೇ? ಹೆಚ್ಚುತ್ತಿರುವ ಸಾಂಕ್ರಾಮಿಕದ ನಡುವೆ ದೆಹಲಿ ಪೊಲೀಸರು ಇಷ್ಟು ನಿರುದ್ಯೋಗಿಗಳಾಗಿದ್ದಾರೆಯೇ? ನಾಳೆ ನಾನು ಈ ಪೋಸ್ಟರ್ಗಳನ್ನು ನನ್ನ ಮನೆಯ ಕಾಂಪೌಂಡ್ಗೆ ಅಂಟಿಸುತ್ತೇನೆ. ಬನ್ನಿ ನನ್ನನ್ನು ಬಂಧಿಸಿ' ಎಂದು ಸವಾಲು ಹಾಕಿದ್ದಾರೆ.