ತಮ್ಮ ಮನೆ ಸುತ್ತಮುತ್ತಲಿನ ನೂರಾರು ಜನರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ ಶಿವಣ್ಣ

ಕೊರೊನಾ ಲಾಕ್‌ಡೌನ್‌ ಇರುವುದರಿಂದ ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ತೀವ್ರ ಕಷ್ಟ ಉಂಟಾಗಿದೆ. ಒಂದು ಹೊತ್ತಿನ ಊಟಕ್ಕೂ ಅನೇಕರು ಕಷ್ಟಪಡುತ್ತಿದ್ದಾರೆ. ಇಂಥ ಸಮಯದಲ್ಲಿ ಹಸಿದವರಿಗೆ ಅನ್ನ ದಾಸೋಹ ನಡೆಸುತ್ತಿದ್ದಾರೆ 'ಸೆಂಚುರಿ ಸ್ಟಾರ್' ಶಿವರಾಜ್‌ಕುಮಾರ್.

ತಮ್ಮ ಮನೆ ಸುತ್ತಮುತ್ತಲಿನ ನೂರಾರು ಜನರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ ಶಿವಣ್ಣ
Linkup
ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಲಾಕ್‌ಡೌನ್‌ ಜಾರಿ ಮಾಡಿದ್ದು, ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಿದೆ. ಅಗತ್ಯ ಸೇವೆಯನ್ನು ಹೊರತುಪಡಿಸಿ, ಮಿಕ್ಕೆಲ್ಲ ಸೇವೆಗಳನ್ನು ನಿಲ್ಲಿಸಲಾಗಿದೆ. ಹೀಗಿದ್ದರೂ, ಕೊರೊನಾ ಕಂಟ್ರೋಲ್‌ಗೆ ಸಿಗುತ್ತಿಲ್ಲ. ಈ ನಡುವೆ ಲಾಕ್‌ಡೌನ್‌ನಿಂದಾಗಿ ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇದನ್ನು ಮನಗಂಡು ನಟ , ಅಂತಹವರಿಗೆ ಊಟ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ನಾಗವಾರದಲ್ಲಿರುವ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸವನ್ನು ಶಿವರಾಜ್‌ಕುಮಾರ್-ಗೀತಾ ದಂಪತಿ ಮಾಡುತ್ತಿದ್ದಾರೆ. ಹಸಿದವರಿಗೆ ಆಸರೆಯಾದ 'ಆಸರೆ' ಶಿವರಾಜ್‌ಕುಮಾರ್ ಅವರು 'ಆಸರೆ' ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಶಿವರಾಜ್‌ಕುಮಾರ್ ಅವರಿಗೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಊಟವನ್ನು ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಶಿವರಾಜ್‌ಕುಮಾರ್ ಅವರು ವಾಸವಿರುವುದು ಮಾನ್ಯತಾ ಟೆಕ್‌ಪಾರ್ಕ್ ಬಳಿ ನಾಗವಾರದಲ್ಲಿ. ಆ ಏರಿಯಾದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಲಾಕ್‌ಡೌನ್‌ ಜಾರಿಯಾದ ದಿನದಿಂದಲೂ ಪ್ರತಿನಿತ್ಯ ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೆಲಸಕ್ಕಾಗಿಯೇ ಬೊಲೇರೋ ಕ್ಯಾಂಟ್ರೋವೊಂದನ್ನು ಶಿವಣ್ಣ ವ್ಯವಸ್ಥೆ ಮಾಡಿದ್ದು, ಆ ವಾಹನದ ಮೂಲಕವೇ ಅಗತ್ಯವಿರುವ ಜನರ ಬಳಿ ಹೋಗಿ ಊಟ ತಿಂಡಿ‌ ಸರಬರಾಜು ಮಾಡಲಾಗುತ್ತಿದೆ. 'ಆಸರೆ'- 'ಹಸಿದ ಹೊಟ್ಟೆಗೆ ಕೈ ತುತ್ತು' ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮವು 10ದಿನದವರೆಗೂ ಮುಂದುವರೆಯಲಿದೆ. ಸರ್ಕಾರ ಲಾಕ್‌ಡೌನ್ ಅನ್ನು ಹೀಗೆ ಮುಂದುವರಿಸಿದರೆ,‌ ಸುಮಾರು 1000 ಜನಕ್ಕೆ ಪ್ರತಿದಿನವೂ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವರಾಜ್‌ಕುಮಾರ್ ಹಾಗೂ 'ಶಿವಣ್ಣ ಬಾಯ್ಸ್' ತಂಡದ ಸದಸ್ಯರು ಯೋಜನೆ ರೂಪಿಸಿಕೊಂಡಿದ್ದಾರೆ. ನಟ ಶಿವರಾಜ್‌ಕುಮಾರ್ ಅವರು ಸದ್ಯ ಸದ್ದಿಲ್ಲದೇ ಮಾಡುತ್ತಿರುವ ಈ ಜನಸೇವೆಗೆ ಅನೇಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.