ಸಂಕಷ್ಟದ ಸಮಯದಲ್ಲಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬೇಡ: ಡಿಕೆಶಿ ಮನವಿ

'ಚುನಾವಣಾ ಆಯೋಗದಿಂದ ನಮಗೆ ಕಟ್ಟುನಿಟ್ಟಿನ ನಿರ್ದೇಶನ ಬಂದಿದೆ. ಉಲ್ಲಂಘನೆ ಆದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ನಿಮ್ಮ ಮೇಲೂ ಕೇಸು ದಾಖಲಿಸುತ್ತಾರೆ. ಮಸ್ಕಿಯಲ್ಲಾಗಲಿ ಅಥವಾ ರಾಜ್ಯದ ಬೇರೆ ಯಾವುದೇ ಭಾಗದಲ್ಲಾಗಲಿ ಸಂಭ್ರಮಾಚರಣೆ ಬೇಡ' - ಡಿಕೆಶಿ

ಸಂಕಷ್ಟದ ಸಮಯದಲ್ಲಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬೇಡ: ಡಿಕೆಶಿ ಮನವಿ
Linkup
: 'ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ಜನರ ಜೀವ ಉಳಿಸುವ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಫಲಿತಾಂಶ ಏನೇ ಬರಲಿ, ನಾವು ಮಾಡುವುದು ಬೇಡ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಹಿನ್ನೆಲೆಯಲ್ಲಿ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, 'ಇವತ್ತು ನಾವೆಲ್ಲ ಫಲಿತಾಂಶ ನೋಡುತ್ತಿದ್ದು, ಮತದಾರರ ತೀರ್ಪನ್ನು ಸ್ವಾಗತ ಮಾಡುತ್ತೇವೆ. ಸೋಲು, ಗೆಲುವು ಎರಡನ್ನೂ ಒಪ್ಪಿಕೊಳ್ಳಬೇಕು. ಇದು ಪ್ರಜಾಪ್ರಭುತ್ವದ ನಿಯಮ ಎಂದರು. ನಾನು ಈ ಸಂದರ್ಭದಲ್ಲಿ ಮೊದಲು ಮನವಿ ಮಾಡಿಕೊಳ್ಳುವುದು, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮುನ್ನಡೆಯಲ್ಲಿ ಗೆದ್ದಿದ್ದೇವೆ. ನಾವು ಗೆಲುವು ಸಾಧಿಸಿರುವುದು ಬೇರೆ ವಿಚಾರ. ಈಗ ಯಾರೂ ಸಂಭ್ರಮಾಚರಣೆ ಮಾಡಬಾರದು. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂಬುದು ನನ್ನ ವಿನಮ್ರ ಮನವಿ ಎಂದು ಹೇಳಿದ್ದಾರೆ. ಚುನಾವಣಾ ಆಯೋಗದಿಂದ ನಮಗೆ ಕಟ್ಟುನಿಟ್ಟಿನ ನಿರ್ದೇಶನ ಬಂದಿದೆ. ಉಲ್ಲಂಘನೆ ಆದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ನಿಮ್ಮ ಮೇಲೂ ಕೇಸು ದಾಖಲಿಸುತ್ತಾರೆ. ಮಸ್ಕಿಯಲ್ಲಾಗಲಿ ಅಥವಾ ರಾಜ್ಯದ ಬೇರೆ ಯಾವುದೇ ಭಾಗದಲ್ಲಾಗಲಿ ಸಂಭ್ರಮಾಚರಣೆ ಬೇಡ ಎಂದು ಡಿಕೆಶಿ ಹೇಳಿದರು. ಕಳೆದ ಬಾರಿ 4 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದೆವು. ಈ ಬಾರಿ ಬಹಳ ಸಮೀಪದಲ್ಲಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ದುಡಿದ ಕಾರ್ಯಕರ್ತರು, ನಾಯಕರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಗಿಂತ ಮೊದಲು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದರು. ವಿಶ್ಲೇಷಣೆ ಆಮೇಲೆ ಮಾಡೋಣ. ಆದರೆ ಈ ಸಮಯದಲ್ಲಿ ಬೇರೆ ರಾಜ್ಯಗಳ ಫಲಿತಾಂಶ ಇಟ್ಟುಕೊಂಡು ಸಂಭ್ರಮಿಸುವುದು ಬೇಡ. ಪಕ್ಷದ ಕಚೇರಿಗೂ ಯಾರೂ ಹೋಗಬಾರದು. ಈ ಕುರಿತು ಅಭ್ಯರ್ಥಿ, ಜಿಲ್ಲಾಧ್ಯಕ್ಷರುಗಳಿಗೆ ಸೂಚನೆ ನೀಡಿದ್ದೇನೆ. ನಾವು ಚುನಾವಣೆ ಮುಂದೂಡಿ ಅಂತಾ ಹೇಳಿದ್ದೆವು. ಆದರೆ ಕೇಳಲಿಲ್ಲ. ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ. ಫಲಿತಾಂಶ ಏನಾದರೂ ಬರಲಿ ಆ ಬಗ್ಗೆ ಆಮೇಲೆ ವಿಶ್ಲೇಷಣೆ ಮಾಡೋಣ. ಮೊದಲು ನಮ್ಮ ಜನರ ಜೀವ ಉಳಿಸೋಣ ಎಂದು ಕರೆ ನೀಡಿದ್ದಾರೆ. ಇಡೀ ದೇಶದ ಅಧಿಕಾರ, ಅಧಿಕಾರಿಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ಮಾಡಿ, ಆ ಹೆಣ್ಣು ಮಗಳಿಗೆ ಕೊಟ್ಟಿರುವ ಕಿರುಕುಳ ಕಂಡು ಸಿಟ್ಟಿಗೆದ್ದ ಜನ ಈ ಫಲಿತಾಂಶ ಕೊಟ್ಟಿದ್ದಾರೆ. ಅವರಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.