ಬೆಂಗಳೂರು: ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಲಾರಿಗಳನ್ನು ಕದ್ದು ಅವುಗಳಿಗೆ ಬೇರೆ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ನಿಹಾಲ್ ಅಲಿಯಾಸ್ ಇರ್ಫಾನ್ (53), ಭಾಸ್ಕರ್ (32), ಶಾಹಿದ್ (35), ಹಿದಾಯತ್ (34) ಬಂಧಿತರು. ಆರೋಪಿಗಳಿಂದ 1.5 ಕೋಟಿ ರೂ. ಬೆಲೆ ಬಾಳುವ 9 ಲಾರಿ, 1 ಹುಂಡೈ ಕ್ರೆಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ನಿಹಾಲ್ ಈ ದಂಧೆಯ ಕಿಂಗ್ಪಿನ್ ಆಗಿದ್ದು, ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಅಂತಾರಾಜ್ಯ ವಾಹನ ಕಳ್ಳನಾಗಿರುವ ನಿಹಾಲ್ ಕದ್ದ ವಾಹನ ಮಾರಾಟ ಮಾಡಲೆಂದೇ ದೇಶದ ನಾನಾ ಕಡೆ ಹಲವು ಗ್ಯಾಂಗ್ಗಳನ್ನು ಕಟ್ಟಿಕೊಂಡಿದ್ದ.
ರಸ್ತೆ ಅಪಘಾತವಾಗಿರುವ, ಗುಜರಿಗೆ ಬಂದಿರುವ ವಾಹನಗಳ ನಂಬರ್ ಹಾಗೂ ಚಾಸಿಸ್ ನಂಬರ್ ತೆಗೆದು ಕದ್ದ ವಾಹನಗಳಿಗೆ ಅಳವಡಿಸುತ್ತಿದ್ದ. ನಂತರ ಇನ್ಯೂರೆನ್ಸ್ ಕಂಪನಿ ಸಿಬ್ಬಂದಿ ಜತೆ ಸೇರಿ ಆ ವಾಹನಗಳಿಗೆ ನೈಜ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ. ಕದ್ದ ವಾಹನಗಳನ್ನು 6-8 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದ. ಕಡಿಮೆ ಬೆಲೆಗೆ ಸೂಕ್ತ ದಾಖಲೆ ಹೊಂದಿರುವ ವಾಹನಗಳು ಸಿಗುತ್ತಿದ್ದ ಹಿನ್ನೆಲೆಯಲ್ಲಿ ಹಲವಾರು ಮಂದಿ ನಿಹಾಲ್ನಿಂದ ವಾಹನ ಖರೀದಿಸಿದ್ದರು. ಈ ದಂಧೆಯಲ್ಲಿ ನಿಹಾಲ್ ಕೋಟ್ಯಂತರ ರೂ. ಅಕ್ರಮವಾಗಿ ಸಂಪಾದಿಸಿದ್ದ. ಶಿವಮೊಗ್ಗ, ಹುಬ್ಬಳ್ಳಿ, ಗೋವಾದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಮನೆ ಹೊಂದಿರುವ ಈತ ಕೆಲ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾನೆ.
15 ದಿನಗಳಿಗೊಮ್ಮೆ ಸಿಮ್ ಬದಲಾಯಿಸುತ್ತಿದ್ದ ಆರೋಪಿ2010ರಲ್ಲಿ ಈತನಿಂದ 40 ವಾಹನಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದರು. ಕೃತ್ಯಕ್ಕೆ ಈತನ ಸಹೋದರ ಅಕ್ರಮ್ ಅಲಿಯಾಸ್ ವಿಕ್ರಮ್ ಸಹ ಸಾಥ್ ಕೊಟ್ಟಿದ್ದ. ಸಹೋದರರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಯನ್ನು 2011ರಲ್ಲಿ ಅಕ್ರಮ್ ಶೂಟ್ ಮಾಡಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಅಕ್ರಮ್ನನ್ನು ಎನ್ಕೌಂಟರ್ ಮಾಡಿದ್ದರು. ಇದಾದ ಬಳಿಕ ನಿಹಾಲ್ ಯಾರ ಕೈಗೂ ಸಿಕ್ಕಿರಲಿಲ್ಲ. ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ 15 ದಿನಗಳಿಗೊಮ್ಮೆ ಮೊಬೈಲ್ ಸಿಮ್ ಕಾರ್ಡ್ ಬದಲಾಯಿಸುತ್ತಿದ್ದ. ಪೊಲೀಸರಿಗೆ ತನ್ನ ಬಗ್ಗೆ ಸಣ್ಣ ಸುಳಿವೂ ಸಿಗದಂತೆ ಎಚ್ಚರಿಕೆ ವಹಿಸಿದ್ದ. ಆತನ ವಿರುದ್ಧ ರಾಜ್ಯದ ನಾನಾ ಪೊಲೀಸ್ ಠಾಣೆಗಳಲ್ಲಿ 9 ವಾಹನ ಕಳವು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ತನ್ನ ಮಾಹಿತಿ ಸಿಗದಂತೆ ಎಚ್ಚರಿಕೆ ವಹಿಸಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಹೊಸ ಕ್ರೆಟಾ ಕಾರೊಂದನ್ನು ಕದ್ದು ರಾಜ್ಯದಲ್ಲಿ ಮಾರಾಟ ಮಾಡಿದ್ದ.
ಪ್ರಕರಣದ ಪತ್ತೆ ಹೇಗೆ?ದೊಡ್ಡಯ್ಯ ಗಾರ್ಡನ್ನ ಟೆಕ್ನೋ ಸೆಟ್ಟಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜು ಜು.10ರಂದು ಸಂಜೆ 6 ಗಂಟೆಗೆ ಕಂಪನಿಯ ಆವರಣದಲ್ಲಿ ಮಿನಿ ಲಾರಿ ಪಾರ್ಕ್ ಮಾಡಿದ್ದರು. ಜು.11ರಂದು ವಾಹನ ಕಳ್ಳತನವಾಗಿರುವುದು ಗೊತ್ತಾಗಿತ್ತು. ಕೂಡಲೇ ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಭಾಸ್ಕರ್ನನ್ನು ಬಂಧಿಸಿದ್ದರು. ಆತ ಕೊಟ್ಟ ಮಾಹಿತಿ ಮೇರೆಗೆ ಶಾಹಿದ್, ಹಿದಾಯತ್ನನ್ನು ಬಂಧಿಸಿದ್ದರು. ಇವರ ವಿಚಾರಣೆ ನಡೆಸಿದಾಗ ರಾಜ್ಯದ ವಿವಿಧೆಡೆ 9 ಮಿನಿ ಲಾರಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಜತೆಗೆ ಕದ್ದ ವಾಹನಗಳನ್ನು ನಿಹಾಲ್ಗೆ ಮಾರಾಟ ಮಾಡಿರುವುದಾಗಿ ಆತನ ಬಗ್ಗೆ ಮಾಹಿತಿ ಕೊಟ್ಟಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆತ ಗೋವಾದಲ್ಲಿ ಮನೆ ಹೊಂದಿರುವುದು ಗೊತ್ತಾಗಿತ್ತು. ಅಲ್ಲಿಗೆ ತೆರಳಿದಾಗ ಆತ ಹುಬ್ಬಳ್ಳಿಯಲ್ಲಿರುವ ಸುಳಿವು ಸಿಕ್ಕಿತ್ತು. ಕೂಡಲೇ ಹುಬ್ಬಳ್ಳಿಗೆ ತೆರಳಿದ ಕಾಮಾಕ್ಷಿಪಾಳ್ಯ ಪೊಲೀಸರ ತಂಡ ಆರೋಪಿ ನಿಹಾಲ್ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದೆ. ಇತ್ತೀಚೆಗೆ ಶಾಹೀದ್ನನ್ನು ಕೇಸ್ನಲ್ಲಿ ಹಳೆಬೀಡು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ನಿಹಾಲ್ ಗೋವಾಕ್ಕೆ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ಬೀಗವಿಲ್ಲದೆ ವಾಹನ ಸ್ಟಾರ್ಟ್ ಮಾಡುತ್ತಿದ್ದ ಚಾಲಾಕಿ ಖದೀಮರುಮಿನಿ ಲಾರಿಯ ಗ್ಲಾಸ್ ಪಕ್ಕದಲ್ಲಿರುವ ಬೀಡಿಂಗ್ ಎತ್ತಿ ಬಾಗಿಲು ತೆಗೆಯುತ್ತಿದ್ದರು. ನಂತರ ಲಾರಿಯೊಳಗೆ ಸೇರಿಕೊಂಡು ಸ್ಟೇರಿಂಗ್ ಕೆಳಗಡೆ ಇರುವ ವಯರ್ಗಳನ್ನು ಕಿತ್ತು ಡೈರೆಕ್ಟ್ ಮಾಡಿಕೊಂಡು ವಾಹನ ಸ್ಟಾರ್ಟ್ ಮಾಡಿ ಪರಾರಿಯಾಗುತ್ತಿದ್ದರು. ಕದ್ದ ತಕ್ಷಣ ಗುಜರಿಗೆ ಬಿದ್ದಿರುವ ವಾಹನಗಳ ನಂಬರ್ ಪ್ಲೇಟ್, ಚಾಸಿಸ್ ನಂಬರ್ ಅಳವಡಿಸಿ ವಿಲೇವಾರಿ ಮಾಡುತ್ತಿದ್ದರು.