ಲಾಕ್‌ಡೌನ್‌ ಭೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಜ್ಯಗಳಿಗೆ ಕೇಂದ್ರ ಸೂಚನೆ

ದಿನಸಿ ಪದಾರ್ಥಗಳು, ತರಕಾರಿ, ಹಣ್ಣುಗಳು, ಔಷಧಗಳ ಪೂರೈಕೆಗೆ ಅಡ್ಡಿಯಾಗದಂತೆ ರಾಜ್ಯ ಸರಕಾರಗಳು ಕೋವಿಡ್‌-19 ನಿರ್ಬಂಧಗಳನ್ನು ಜಾಗರೂಕತೆಯಿಂದ ಹೇರಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ.

ಲಾಕ್‌ಡೌನ್‌ ಭೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಜ್ಯಗಳಿಗೆ ಕೇಂದ್ರ ಸೂಚನೆ
Linkup
ಹೊಸದಿಲ್ಲಿ: ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಸಾರ್ವಜನಿಕರು ಮನೆಗಳಿಂದ ಹೊರಬರಲು ಹಿಂಜರಿಯುತ್ತಿದ್ದು , ಅಗತ್ಯ ದಿನಬಳಕೆ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಟ್ಟುಕೊಳ್ಳಲು ಆರಂಭಿಸುತ್ತಿದ್ದಾರೆ. ಇದರಿಂದಾಗಿ ಅಗತ್ಯ ವಸ್ತುಗಳ ಲಭ್ಯತೆ ಕಡಿಮೆಯಾಗಿ ಬಿಸಿ ಸಾಮಾನ್ಯರನ್ನು ತಟ್ಟುವ ಆತಂಕವಿದೆ. ಇದನ್ನು ತಡೆಗಟ್ಟಲು ರಾಜ್ಯ ಸರಕಾರಗಳು ಶೀಘ್ರವೇ ಮುಂದಾಗಬೇಕಿದೆ ಎಂದು ಕೇಂದ್ರ ಸರಕಾರವು ಗುರುವಾರ ರಾಜ್ಯಗಳಿಗೆ ಸೂಚನೆ ನೀಡಿದೆ. "ದಿನಸಿ ಪದಾರ್ಥಗಳು, ತರಕಾರಿ, ಹಣ್ಣುಗಳು, ಔಷಧಗಳ ಪೂರೈಕೆಗೆ ಅಡ್ಡಿಯಾಗದಂತೆ ರಾಜ್ಯ ಸರಕಾರಗಳು ನಿರ್ಬಂಧಗಳನ್ನು ಜಾಗರೂಕತೆಯಿಂದ ಹೇರಬೇಕು. ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳ ಲಭ್ಯತೆ ಕಾಪಾಡಿಕೊಂಡಲ್ಲಿ ಜನರಿಂದ ಆತಂಕದಲ್ಲಿ ಖರೀದಿ ನಡೆಯುವುದಿಲ್ಲ,'' ಎಂದು ಆಹಾರ ಸರಬರಾಜು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖಾರೆ ಅವರು ರಾಜ್ಯ ಸರಕಾರಗಳಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಅಗತ್ಯ ವಸ್ತುಗಳ ಕೊರತೆ ಎದುರಾದಲ್ಲಿ ಸಾರ್ವಜನಿಕರು ಕೂಡಲೇ ಸರಕಾರದ ಗಮನಕ್ಕೆ ತರಲು ಸಹಾಯವಾಗುವಂತೆ ಸಹಾಯವಾಣಿಯನ್ನು ಆರಂಭಿಸಬೇಕು ಎಂದೂ ಕೇಂದ್ರ ಸೂಚಿಸಿದೆ. ಬಹುತೇಕ ರಾಜ್ಯಗಳು ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್‌ನಂತಹ ಕ್ರಮಗಳನ್ನು ಜಾರಿಗೊಳಿಸಿವೆ. ಇದರಿಂದ ಜನರಲ್ಲಿ ಮತ್ತೊಂದು ಲಾಕ್‌ಡೌನ್‌ನ ಆತಂಕ ಎದುರಾಗಿದ್ದು, ದಿನಸಿ ಹಾಗೂ ಜೀವನಾವಶ್ಯಕ ಪದಾರ್ಥಗಳ ಖರೀದಿಗೆ ಮುಗಿಬಿದ್ದಿದ್ದಾರೆ.