ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ; ಅಕ್ಟೋಬರ್‌ 2ನೇ ವಾರದಿಂದ ಜಾರಿ!

ನ.1ರಿಂದ 'ಮಧ್ಯಾಹ್ನದ ಬಿಸಿಯೂಟ ಮತ್ತು ಬಿಸಿ ಹಾಲು ವಿತರಣೆ' ಯೋಜನೆ ಪುನರಾರಂಭಗೊಳ್ಳಲಿದೆ. ಕೋವಿಡ್‌ ಲಾಕ್‌ಡೌನ್‌ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಈ ಯೋಜನೆಗೆ ಸುಮಾರು 20 ತಿಂಗಳ ನಂತರ ಮರು ಚಾಲನೆ ನೀಡಲಾಗುತ್ತಿದೆ.

ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ; ಅಕ್ಟೋಬರ್‌ 2ನೇ ವಾರದಿಂದ ಜಾರಿ!
Linkup
ಜಯಂತ್‌ ಗಂಗವಾಡಿ ಬೆಂಗಳೂರು ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ 'ಮಧ್ಯಾಹ್ನದ ಯೋಜನೆ'ಗೆ '' ಬಳಕೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ನ.1ರಿಂದ 'ಮಧ್ಯಾಹ್ನದ ಬಿಸಿಯೂಟ ಮತ್ತು ಬಿಸಿ ಹಾಲು ವಿತರಣೆ' ಯೋಜನೆ ಪುನರಾರಂಭಗೊಳ್ಳಲಿದೆ. ಕೋವಿಡ್‌ ಲಾಕ್‌ಡೌನ್‌ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಈ ಯೋಜನೆಗೆ ಸುಮಾರು 20 ತಿಂಗಳ ನಂತರ ಮರು ಚಾಲನೆ ನೀಡಲಾಗುತ್ತಿದೆ. ನಾನಾ ಕಾರಣಗಳಿಂದಾಗಿ ಸರಕಾರಿ ಶಾಲಾ ಮಕ್ಕಳಲ್ಲಿಅಪೌಷ್ಟಿಕತೆ ಸಾಮಾನ್ಯವಾಗಿದ್ದು, ಊಟದಲ್ಲಿ ಅಗತ್ಯ ಪೋಷಕಾಂಶಗಳು ಲಭ್ಯವಿಲ್ಲದೆ ಇರುವುದು ಕಂಡುಬಂದಿದೆ. ಕಬ್ಬಿಣ, ಫೋಲಿಕ್‌ ಆಮ್ಲ ಮತ್ತು ವಿಟಿಮಿನ್‌ ಬಿ-12 ರಸಾಯನಿಕ ಪೋಷಕಾಂಶಗಳನ್ನು ಸಂಯೋಜಿಸಿರುವ 'ಕರ್ನಲ್‌ ಅಕ್ಕಿ ಕಾಳು' ಮಿಶ್ರಿತ ಅಕ್ಕಿಯೇ ಸಾರವರ್ಧಿತ ಅಕ್ಕಿಯಾಗಿದೆ. ಈ ಅಕ್ಕಿಯಲ್ಲಿ ಮಕ್ಕಳ ದೈಹಿಕ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಅಡಕ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಪ್ಲಾಸ್ಟಿಕ್‌ ಅಕ್ಕಿ ಅಲ್ಲ ''ರಾಸಾಯನಿಕ ಪೋಷಕಾಂಶಗಳನ್ನು ಸಂಯೋಜಿಸಿ ತಯಾರಿಸಿರುವ ಸಾರವರ್ಧಿತ ಅಕ್ಕಿ 'ಪ್ಲಾಸ್ಟಿಕ್‌ ಅಕ್ಕಿ' ಅಲ್ಲ,'' ಎಂದು ಮಧ್ಯಾಹ್ನ ಉಪಾಹಾರ ಯೋಜನೆ ಜಂಟಿ ನಿರ್ದೇಶಕ ಟಿ. ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ. ಸಾರವರ್ಧಿತ ಅಕ್ಕಿ ಕುರಿತು ಪೋಷಕರು, ಅಡುಗೆ ಕಾರ್ಯಕರ್ತರು ಹಾಗೂ ಎಸ್‌ಡಿಎಂಸಿ ಸದಸ್ಯರಲ್ಲಿ ಉಂಟಾಗಬಹುದಾದ ಸಂಶಯದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ. ''ಸಾರವರ್ಧಿತ ಅಕ್ಕಿ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)' ಅಧಿಕಾರಿಗಳಿಂದ ಜಿಲ್ಲಾ ಹಂತದಲ್ಲಿ ಕೊಡಲಾಗುವುದು. ನಂತರ ತಾಲೂಕು ಹಂತದಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಕಾರ್ಯಕ್ಕೆ ಅಕ್ಟೋಬರ್‌ 2ನೇ ವಾರದಿಂದ ಚಾಲನೆ ನೀಡಲಾಗುವುದು,'' ಎಂದು ಅವರು ತಿಳಿಸಿದ್ದಾರೆ. ಅಗತ್ಯ ಸಿದ್ಧತೆಗೆ ಸೂಚನೆ 2021-22ನೇ ಸಾಲಿಗೆ 6ರಿಂದ 10ನೇ ತರಗತಿವರೆಗಿನ ಶಾಲೆಗಳು ಆರಂಭಗೊಂಡಿವೆ. ಅ.4ರಿಂದ ಈ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ. ಸದ್ಯ, ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ದಸರಾ ರಜೆ ನಂತರ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ನ.1ರಿಂದ ಬಿಸಿಯೂಟ ಯೋಜನೆ ಜಾರಿಗಾಗಿ ಎಲ್‌ಪಿಜಿ ಸಿಲಿಂಡರ್‌, ಪಾತ್ರೆ, ಪರಿಕರ, ಅಡುಗೆ ಮನೆ ಮತ್ತು ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿ ಸ್ವಚ್ಛತೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಈ ಯೋಜನೆ ಜಾರಿ ವೇಳೆಗೆ ಎಲ್ಲಾ ಶಿಕ್ಷಕರು ಮತ್ತು ಬಿಸಿಯೂಟದ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು, ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.