ಬೆಂಗಳೂರಿನಲ್ಲಿ ಭಾರೀ ಶಬ್ಧದಿಂದ ಆತಂಕ; ಯಾರೂ ಭಯಪಡಬೇಡಿ ಎಂದ ಆರ್. ಅಶೋಕ್!

ಶುಕ್ರವಾರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಿಗೆ ದೊಡ್ಡ ಶಬ್ದ ಹಾಗೂ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿದೆ. ಇದಕ್ಕೆ ಯಾರೂ ಭಯಪಡಬೇಕಾಗಿಲ್ಲ ಎಂದು‌ ಕಂದಾಯ ಸಚಿವ ಆರ್. ‌ಅಶೋಕ್ ಧೈರ್ಯ ತುಂಬಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಶಬ್ಧದಿಂದ ಆತಂಕ; ಯಾರೂ ಭಯಪಡಬೇಡಿ ಎಂದ ಆರ್. ಅಶೋಕ್!
Linkup
ಬೆಂಗಳೂರು: ಶುಕ್ರವಾರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಜ್ಞಾನಭಾರತಿ, ಆರ್. ಆರ್. ನಗರ ಮುಂತಾದ ಕಡೆಗಳಲ್ಲಿ ದೊಡ್ಡ ಶಬ್ದ ಹಾಗೂ ಸಣ್ಣ ಪ್ರಮಾಣದ ಕಂಪನ ಕಂಡುಬಂದಿದ್ದು ಯಾರೂ ಭಯಪಡಬೇಕಾಗಿಲ್ಲ ಎಂದು‌ ಕಂದಾಯ ಸಚಿವ ಆರ್. ‌ಅಶೋಕ್ ಹೇಳಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಜ್ಞರಿಂದ ವರದಿ ಪಡೆದಿದ್ದು, ಇದು ಭೂಕಂಪದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. ನಾನು ಸಹ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಜನರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಶುಕ್ರವಾರ ನಗರದ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದ ಶಬ್ಧ ಕೇಳಿ ಬಂದಿತ್ತು. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಜನರೂ ಭಯಕ್ಕೆ ಒಳಗಾಗಿದ್ದಾರೆ. ಆದರೆ ಶಬ್ದಕ್ಕೆ ಕಾರಣ ಏ‌ನು ಎಂಬುದು ಇನ್ನೂ ನಿಗೂಢವಾಗಿದೆ. ಭೂಕಂಪ ಅಲ್ಲ ಎಂದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನವೆಂಬರ್‌ 26 ಶುಕ್ರವಾರ ಮಧ್ಯಾಹ್ನ 11.50 ರಿಂದ 12.15ರ ನಡುವಿನ ಅವಧಿಯಲ್ಲಿ ಸಾರ್ವಜನಿಕರಿಗೆ ಭಾರಿ ಶಬ್ದದ ಜತೆಗೆ ಸಣ್ಣ ಪ್ರಮಾಣದಲ್ಲಿ ಭೂ ಕಂಪಿಸಿದ ಅನುಭವವಾಗಿರುವ ವರದಿಗಳು ಹೆಮ್ಮಿಗೆಪುರ, ಕಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದಿಂದ ಬಂದಿದೆ. ಈ ಅವಧಿಯಲ್ಲಿ ಸಿಸ್ಮಿಕ್‌ ಅಬ್ಸರ್ವೇಟರ್‌ (ಭೂಕಂಪ ಮಾಪನಗಳು) ಗಳಿಂದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ಯಾವುದೇ ಭೂಕಂಪನದ ಅಂಶಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಮನಗರದಲ್ಲೂ ಕಂಪನದ ಅನುಭವರಾಮನಗರ ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದಲ್ಲಿ ಭೂ ಕಂಪಿಸಿದ ಅನುಭವ ಉಂಟಾಗಿದೆ. ಕನಕಪುರ, ಮಾಗಡಿ, ಚನ್ನಪಟ್ಟಣದಲ್ಲಿ ಜನರಿಗೆ ಸ್ವಲ್ಪ ಮಟ್ಟಿಗೆ ಭೂ ಕಂಪಿಸಿದ ಅನುಭವವಾಗಿದೆ. 12.30ರ ಸಮಯದಲ್ಲಿ ಚನ್ನಪಟ್ಟಣದ ಮೆಣಸಿಗನಹಳ್ಳಿ ಗ್ರಾಮದಲ್ಲಿ ಭೂ ಕಂಪನವಾದ ಅನುಭವವಾಗಿ ಈ ಭಾಗದ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನು ಮಾಗಡಿಯಲ್ಲೂ ಕೂಡ ಕೆಲವೆಡೆ ಭೂ ಕಂಪಿಸಿರುವ ಅನುಭವವಾಗಿದೆ. ಉಳಿದಂತೆ 1.15 ಗಂಟೆ ಸಮಯದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಭಾಗದಲ್ಲೂ 2ನೇ ಭಾರಿ ಕಂಪನದ ಅನುಭವವಾಗಿದ್ದು, ಇದಲ್ಲದೆ ನಿಂಗೇಗೌಡನದೊಡ್ಡಿ, ಕಾರೆಕೊಪ್ಪ ಭಾಗದಲ್ಲೂ ಕೂಡ ಭೂ ಕಂಪನದ ಅನುಭವವಾಗಿದೆ. ಭೂ ಕಂಪನದ ಜತೆಗೆ ದೊಡ್ಡ ಶಬ್ದವೂ ಕೇಳಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಶಬ್ಧದ ಮೂಲ ಇನ್ನೂ ನಿಗೂಢವಾಗಿದ್ದು, ಸೂಪರ್‌ ಸಾನಿಕ್ ವಿಮಾನದ್ದೋ ಅಥವಾ ಭೂಕಂಪನವೋ ಎನ್ನುವುದು ಬಹಿರಂಗಗೊಳ್ಳಬೇಕಿದೆ.