'ಪ್ರೀತಿಯ ಗೆಳತಿ ಮಾಲಾಶ್ರೀ…'- ನೋವಿನಲ್ಲಿರುವ ಸ್ನೇಹಿತೆಗೆ ಧೈರ್ಯ ತುಂಬಿದ ನಟಿ ಶ್ರುತಿ

ನಟಿ ಮಾಲಾಶ್ರೀ ಅವರೀಗ ತುಂಬ ನೋವಿನಲ್ಲಿದ್ದಾರೆ. ಪತಿಯ ಅಕಾಲಿಕ ನಿಧನ ಅವರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ದುಃಖದಲ್ಲಿರುವ ಮಾಲಾಶ್ರೀ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ನಟಿ ಶ್ರುತಿ ಮಾಡಿದ್ದಾರೆ.

'ಪ್ರೀತಿಯ ಗೆಳತಿ ಮಾಲಾಶ್ರೀ…'- ನೋವಿನಲ್ಲಿರುವ ಸ್ನೇಹಿತೆಗೆ ಧೈರ್ಯ ತುಂಬಿದ ನಟಿ ಶ್ರುತಿ
Linkup
ನಟಿ ಅವರ ಪತಿ, ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕ 'ಕೋಟಿ' ರಾಮು ಅವರನ್ನು ಕಳೆದುಕೊಂಡು ಸ್ಯಾಂಡಲ್‌ವುಡ್‌ ಬಡವಾಗಿದೆ. ಪತಿಯ ಅಕಾಲಿಕ ನಿಧನದಿಂದ ನಟಿ ಮಾಲಾಶ್ರೀ ಅವರು ಕೂಡ ತೀವ್ರ ದುಃಖದಲ್ಲಿದ್ದಾರೆ. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ಒಬ್ಬರಿಗೊಬ್ಬರು ಸಂತೈಸಿ, ಸಾಂತ್ವನ ಹೇಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಮಾಲಾಶ್ರೀ ಅವರ ಸಮಕಾಲೀನರು, ಅವರ ಸ್ನೇಹಿತೆಯಾದ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನು ಬರೆದಿದ್ದಾರೆ. 'ಪ್ರೀತಿಯ ಗೆಳತಿ ಮಾಲಾಶ್ರೀ... ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನದೊಂದು ಧಿಕ್ಕಾರ...' ಎಂದು ಬೇಸರ ತೋಡಿಕೊಂಡಿದ್ದಾರೆ ಶ್ರುತಿ. 'ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ, ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟುಹೋರಾಟಗಾರ್ತಿ.. ಅದನ್ನು ನನ್ನ ಕಣ್ಣಾರೆ ನೋಡಿದ್ದೇನೆ..' ಎಂದಿದ್ದಾರೆ ಶ್ರುತಿ. 'ಚಿತ್ರರಂಗದಲ್ಲಿ 'ಸೂಪರ್ ಸ್ಟಾರ್' ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ, ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು ಕೇವಲ ದೇವರ ವರದಿಂದ, ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ.. ಒಳ್ಳೆಯ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.... ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ, ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ... ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ i'm just one phone call away..' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಶ್ರುತಿ ಹೇಳಿದ ಕಿವಿಮಾತು.. 'ಎಲ್ಲರಲ್ಲೂ ಒಂದು ಕಳಕಳಿಯ ಮನವಿ.. ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಮೆಂಟ್ ಮಾಡುವುದರ ಬದಲು, ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ. ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ..' ಎಂದು ಶ್ರುತಿ ಮನವಿ ಮಾಡಿದ್ದಾರೆ.