ಪುನೀತ್‌ ನಿಧನ ಬಳಿಕ ಯುವಕರಲ್ಲಿ ಹೆಚ್ಚಿದ ಹೃದಯ ಕಾಳಜಿ, ಹೃದ್ರೋಗ ಆಸ್ಪತ್ರೆಗಳಿಗೆ ತಪಾಸಣೆಗೆ ಲಗ್ಗೆ

ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ಮರಣ ಯುವಕರಲ್ಲಿ ಹೃದಯದ ಬಗೆಗಿನ ಜಾಗೃತಿಯನ್ನು ಮೂಡಿಸಿದ್ದು, ನಿಯಮಿತವಾಗಿ ಜಿಮ್‌ ಮಾಡುವವರು, ವ್ಯಾಯಾಮ ಮಾಡುವ ಯುವಕರು ಹೃದಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜಯದೇವ ಆಸ್ಪತ್ರೆಯಲ್ಲಿ 3000ಕ್ಕೂ ಹೆಚ್ಚು ಜನರು ಹೃದಯ ತಪಾಸಣೆಗೆ ಒಳಗಾಗಿದ್ದಾರೆ.

ಪುನೀತ್‌ ನಿಧನ ಬಳಿಕ ಯುವಕರಲ್ಲಿ ಹೆಚ್ಚಿದ ಹೃದಯ ಕಾಳಜಿ, ಹೃದ್ರೋಗ ಆಸ್ಪತ್ರೆಗಳಿಗೆ ತಪಾಸಣೆಗೆ ಲಗ್ಗೆ
Linkup
ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಮರಣ ಯುವಕರಲ್ಲಿ ಹೃದಯದ ಬಗೆಗಿನ ಜಾಗೃತಿಯನ್ನು ಮೂಡಿಸಿದೆ. ನಿಯಮಿತವಾಗಿ ಜಿಮ್‌ ಮಾಡುವವರು, ವ್ಯಾಯಾಮ ಮಾಡುವ ಯುವಕರು ಹೃದಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸೆಗಾಗಿ ಜನರು ತುಂಬಿ ತುಳುಕುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಯುವಕರೇ ಎನ್ನುವುದು ಸೋಜಿಗದ ಸಂಗತಿ. ಸರಕಾರ, ಸಂಘ-ಸಂಸ್ಥೆಗಳು ಹೃದಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದ ಯುವಕರು, ಇದೀಗ ಸ್ವಯಂ ಪ್ರೇರಿತರಾಗಿ ಬಂದು ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಜಯದೇವ ಆಸ್ಪತ್ರೆಗೆ ಕಳೆದ ಮೂರು ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಹೃದಯ ತಪಾಸಣೆಗೆ ಬಂದಿದ್ದಾರೆ. ಸರಾಸರಿಗಿಂತ ಅಧಿಕ ಜನರು ಆಸ್ಪತ್ರೆಗೆ ಬಂದಿದ್ದಾರೆ. ಇದರಲ್ಲಿ ಶೇ. 20ಕ್ಕೂ ಹೆಚ್ಚಿನವರು ಯುವಕರೇ ಆಗಿದ್ದಾರೆ. ಕೇವಲ ಬೆಂಗಳೂರು ಜಯದೇವ ಮಾತ್ರವಲ್ಲದೆ, ಬೇರೆ ಬೇರೆ ಆಸ್ಪತ್ರೆಗಳಲ್ಲೂ ಹೃದಯ ತಪಾಸಣೆಗೆ ಬಹಳಷ್ಟು ಜನರು ಆಗಮಿಸುತ್ತಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಮರಣಕ್ಕೆ ಮುನ್ನ ಚಿಕಿತ್ಸೆಗೆ ಬರುವ ಯುವಕರ ಸಂಖ್ಯೆ ಶೇ.5ಕ್ಕಿಂತ ಕಡಿಮೆ ಇತ್ತು. ಇದೀಗ ಅವರ ಸಾವು ಬಹಳಷ್ಟು ಜನರಲ್ಲಿ ಎಚ್ಚರಿಕೆ ಮೂಡಿಸಿದೆ ಎನ್ನುತ್ತಾರೆ ವೈದ್ಯರೊಬ್ಬರು. ಉತ್ತಮ ಆರೋಗ್ಯ ಕಾಯ್ದುಕೊಂಡವರು, ಒಳ್ಳೆಯ ಆಹಾರ ಸೇವಿಸುತ್ತಿದ್ದವರೇ ಹೃದಯಾಘಾತಕ್ಕೊಳಗಾಗುತ್ತಿರುವುದರಿಂದ, ವ್ಯಾಯಮ ಮಾಡದೇ ಇರುವವರು ಸಮಯಕ್ಕೆ ಸರಿಯಾಗಿ ಆಹಾರವನ್ನೂ ಸೇವಿಸದೇ ಇರುವವರು ಇನ್ನಷ್ಟು ಭಯಭೀತರಾಗಿದ್ದಾರೆ. "ಭಾರತದಲ್ಲಿ ಶೇ. 25ರಷ್ಟು ಜನರು ಹೃದಯಾಘಾತದಿಂದ ಮೃತರಾಗುತ್ತಿದ್ದಾರೆ. ವಿಶ್ವದಲ್ಲಿಯೇ ಈ ಪ್ರಮಾಣ ಹೆಚ್ಚು. ಮೇಲ್ನೋಟಕ್ಕೆ ಇವರೆಲ್ಲ ಚೆನ್ನಾಗಿದ್ದರೆ ಆಂತರಿಕವಾಗಿ ಆರೋಗ್ಯ ಹದಗೆಟ್ಟಿರುತ್ತದೆ. ಅದರ ಬಗ್ಗೆ ಗಮನಹರಿಸುವುದೇ ಇಲ್ಲ," ಎನ್ನುತ್ತಾರೆ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್‌. "ಹೃದಯದ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ, ಅದನ್ನು ಪ್ರತಿಯೊಬ್ಬರೂ ಮಾಡಬೇಕು. ಜಿಮ್‌ ಕೂಡ ಕೆಟ್ಟದ್ದಲ್ಲ. ಅದನ್ನು ನಿಮ್ಮ ಶರೀರಕ್ಕೆ ಎಷ್ಟು ಬೇಕು ಅಷ್ಟು ಮಾಡಬೇಕು. ಜಿಮ್‌ನಲ್ಲಿ ಸ್ಪರ್ಧೆ ಇರಬಾರದು," ಎನ್ನುತ್ತಾರೆ ಡಾ. ಮಂಜುನಾಥ್‌. ''ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಸೇವಿಸುವ ಆಹಾರದಲ್ಲಿ ಕಾಳುಗಳು ಹೆಚ್ಚಿರಬೇಕು. ಮೊಟ್ಟೆ ಕೂಡ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 40 ನಿಮಿಷ ವ್ಯಾಯಾಮ ಮಾಡಬೇಕು," ಎಂದು ಅವರು ಸಲಹೆ ನೀಡಿದ್ದಾರೆ. ಜಿಮ್‌ಗೆ ಹೋಗುವವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಸರಕಾರ ದೇಶ - ವಿದೇಶಗಳ ವೈದ್ಯರು, ಜಿಮ್‌ ಕೋಚರ್‌ಗಳ ಬಳಿ ಚರ್ಚಿಸಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಇದು ಇನ್ನಷ್ಟು ಜನರ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈಗಾಗಲೇ ಕೇರಳ ಸರಕಾರ ಜಿಮ್‌ಗಳಲ್ಲಿ ಅಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ (ಎಇಡಿ) ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ. ಕಳೆದ ಎರಡು ಮೂರು ದಿನದಿಂದ ಹೆಚ್ಚು ಯುವಕರು ಹೃದಯ ತಪಾಸಣೆಗೆ ಬರುತ್ತಿದ್ದಾರೆ. ಯಾವುದೇ ಘಟನೆಯಿಂದ ಎಚ್ಚೆತ್ತುಕೊಳ್ಳುವ ಬದಲು 35 ವರ್ಷ ದಾಟಿದ ಪುರುಷರು, 45 ವರ್ಷ ದಾಟಿದ ಮಹಿಳೆಯರು ಪ್ರತಿ ವರ್ಷ ಹೃದಯ ಚಿಕಿತ್ಸೆ ಮಾಡಿಕೊಳ್ಳಬೇಕು. ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಬೇಕು. ಆದಷ್ಟು ಒತ್ತಡ ಕಡಿಮೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಡಾ. ಮಂಜುನಾಥ್‌.