ಎಚ್‌ಡಿಕೆ, ಶ್ರೀಕಂಠಯ್ಯ ವಿರುದ್ಧ ಸಿಡಿದ ಅಂಬರೀಷ್ ಅಭಿಮಾನಿಗಳು: ಸ್ವಾಭಿಮಾನಿ ಪಕ್ಷ ಕಟ್ಟಲು ಸುಮಲತಾಗೆ ಮನವಿ

ನಟ, ದಿವಂಗತ ಅಂಬರೀಷ್ ಅವರ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಅಂಬರೀಷ್ ಅಭಿಮಾನಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಎಚ್‌ಡಿಕೆ, ಶ್ರೀಕಂಠಯ್ಯ ವಿರುದ್ಧ ಸಿಡಿದ ಅಂಬರೀಷ್ ಅಭಿಮಾನಿಗಳು: ಸ್ವಾಭಿಮಾನಿ ಪಕ್ಷ ಕಟ್ಟಲು ಸುಮಲತಾಗೆ ಮನವಿ
Linkup
ಬೆಂಗಳೂರು: ನಟ, ದಿ. ಅಂಬರೀಷ್‌ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಅಂಬರೀಷ್‌ ಭಾನುವಾರ ನಗರದ ಬಳಿ ಪ್ರತಿಭಟನೆ ನಡೆಸಿದರು. ಮಂಡ್ಯ, ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ್ದ ಅಭಿಮಾನಿಗಳು ಅಂಬಿ ಸಮಾಧಿ ಇರುವ ನಗರದ ಕಂಠೀರವ ಸ್ಟುಡಿಯೋ ಆವರಣ ಪ್ರವೇಶಿಸಲು ಮುಂದಾದಾಗ ಪೊಲೀಸರು ಗೇಟ್‌ ಬಳಿಯೇ ತಡೆದರು. ಅಂಬರೀಶ್‌ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌, ''ಕುಮಾರಸ್ವಾಮಿ ಮನೆ ಮುಂದೆ ಪ್ರತಿಭಟಿಸುವ ಸಾಮರ್ಥ್ಯ ನಮಗೂ ಇದೆ. ರಾಜ್ಯದಲ್ಲಿ ಹಲವು ಮಹಿಳಾ ರಾಜಕಾರಣಿಗಳಿದ್ದಾರೆ. ಸಂಸದೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರೂ ಯಾವ ಮಹಿಳಾ ರಾಜಕಾರಣಿಗಳು ಬಾಯಿ ಬಿಡುತ್ತಿಲ್ಲ" ಎಂದು ಆಕ್ಷೇಪಿಸಿದರು. "ಅಂಬರೀಶ್‌ ಬದುಕಿದ್ದಾಗ ಏನೂ ಚಕಾರವೆತ್ತದವರು ಈಗ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅಂಬಿ ವಿರುದ್ಧ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು. ಸಮಾಧಿ ಬಳಿ ಸುಮಲತಾ ಬಂದಾಗ ಭಾವೋದ್ವೇಗಕ್ಕೆ ಒಳಗಾದ ಅಭಿಮಾನಿಗಳು "ನೀವು ಯಾರ ಬಳಿಯೂ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ. ನಿಮ್ಮನ್ನು ಮಂಡ್ಯದಿಂದ ಹೊರಗೆ ಕಳಿಸಲು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಪ್ರಾಣ ಹೋದರೂ ಪರವಾಗಿಲ್ಲ. ನಿಮ್ಮ ಜೊತೆ ಇದ್ದೇವೆ. ನೀವೇ ಸ್ವಾಭಿಮಾನಿ ಪಕ್ಷ ಕಟ್ಟಿ. ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿ ಹಾಕಿ. ನಾವು ಗೆಲ್ಲಿಸುತ್ತೇವೆ" ಎಂದು ಒತ್ತಾಯಿಸಿದರು. ಎಲ್ಲರಲ್ಲೂ ಕಣ್ಣೀರು ಅಭಿಮಾನಿಗಳು ಅಂಬರೀಶ್‌ ನೆನೆದು ಕಣ್ಣೀರಿಟ್ಟಾಗ "ನೀವು ಅತ್ತರೆ ನನಗೂ ಅಳು ಬರುತ್ತದೆ. ಯಾರೂ ಕಣ್ಣೀರು ಹಾಕಬೇಡಿ. ಅಂಬಿ ಸತ್ತ ಬಳಿಕ ಅವರ ಹೆಸರು ಬಳಸಿ ಕೀಳುಮಟ್ಟದಲ್ಲಿ ಮಾತನಾಡುತ್ತಿರುವುದು ನನಗೂ ನೂರುಪಟ್ಟು ನೋವಿದೆ. ಅಂಬಿ ಹೆಸರಿಗೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸುವೆ" ಎಂದು ಸುಮಲತಾ ಅವರು ಅಭಿಮಾನಿಗಳನ್ನು ಸಂತೈಸಿದರು. ಮಂಡ್ಯದಲ್ಲಿಯೂ ಅಖಿಲ ಕರ್ನಾಟಕ ಅಭಿಮಾನಿಗಳ ಸಂಘದ ಅಧ್ಯಕ್ಷ ಶಂಕರೇಗೌಡ ನೇತೃತ್ವದಲ್ಲಿ ಸಭೆ ಸೇರಿ, ಎಚ್‌ ಡಿ ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ವಿರುದ್ಧ ನಿರ್ಣಯಗಳನ್ನು ಮಂಡಿಸಲಾಯಿತು.