ಈ ವರ್ಷದ ಚಾರ್‌ಧಾಮ್‌ ಯಾತ್ರೆಗೆ ತೆರೆ: ಹಿಮಪಾತದಿಂದಾಗಿ ನಾಲ್ಕು ದೇಗುಲಗಳ ಬಾಗಿಲು ಬಂದ್‌

ಇನ್ನು ಮುಂದಿನ ವರ್ಷ ಮೇ ಬಳಿಕ ಒಂದೊಂದಾಗಿ ದೇಗುಲಗಳ ಬಾಗಿಲು ತೆರೆಯಲಾಗುತ್ತದೆ. ಬಾಗಿಲು ಹಾಕುವ ಮತ್ತು ತೆರೆಯುವ ಸಂದರ್ಭದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.

ಈ ವರ್ಷದ ಚಾರ್‌ಧಾಮ್‌ ಯಾತ್ರೆಗೆ ತೆರೆ: ಹಿಮಪಾತದಿಂದಾಗಿ ನಾಲ್ಕು ದೇಗುಲಗಳ ಬಾಗಿಲು ಬಂದ್‌
Linkup
ರುದ್ರ ಪ್ರಯಾಗ: ಹಿಮಾಲಯದ ತಪ್ಪಲಿನ ಪ್ರಮುಖ ನಾಲ್ಕು ತೀರ್ಥ ಕ್ಷೇತ್ರಗಳಾದ, 'ಚಾರ್‌ ಧಾಮ್‌' ಗಳೆಂದೇ ಜನಪ್ರಿಯವಾಗಿರುವ ಗಂಗೋತ್ರಿ, ಯಮುನೋತ್ರಿ, ಕೇದರ ನಾಥ ಮತ್ತು ಬದ್ರಿ ನಾಥ ದೇಗುಲಗಳಿಗೆ ವಾಡಿಕೆಯಂತೆ ಬಾಗಿಲು ಹಾಕಲಾಗುತ್ತಿದೆ. ಚಳಿಗಾಲ ಆಗಮಿಸುತ್ತಿದ್ದಂತೆಯೇ ಹಿಮಾಲಯ ಹಿಮದ ಹೊದಿಕೆ ಹೊದ್ದುಕೊಳ್ಳುವುದರಿಂದ ಈ ಯಾತ್ರಾ ಕ್ಷೇತ್ರಗಳು ಕೂಡ ಹಿಮ ಮಯವಾಗಲಿವೆ. ಹೀಗಾಗಿ ದೇಗುಲದ ಬಾಗಿಲನ್ನು ಹಾಕಲಾಗುತ್ತದೆ. ಭಕ್ತರಿಗೂ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ. ಇನ್ನು ಮುಂದಿನ ವರ್ಷ ಮೇ ಬಳಿಕ ಒಂದೊಂದಾಗಿ ದೇಗುಲಗಳ ಬಾಗಿಲು ತೆರೆಯಲಾಗುತ್ತದೆ. ಬಾಗಿಲು ಹಾಕುವ ಮತ್ತು ತೆರೆಯುವ ಸಂದರ್ಭದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಗಂಗೋತ್ರಿ ದೇಗುಲಕ್ಕೆ ದೀಪಾವಳಿಯ ಮಾರನೆಯ ದಿನ (ನವೆಂಬರ್‌ 5) ಗೋವರ್ಧನ ಪೂಜೆಯ ಬಳಿಕ ಬಾಗಿಲು ಹಾಕಲಾಗಿದೆ. ಯಮುನೋತ್ರಿ ಮತ್ತು ಕೇದರನಾಥ ದೇಗುಲಗಳಿಗೆ ನವೆಂಬರ್‌ 6 ರಂದು ಬಾಗಿಲು ಹಾಕಲಾಗುತ್ತದೆ. ಬದ್ರಿ ನಾಥ ದೇಗುಲಕ್ಕೆ ನವೆಂಬರ್‌ 20 ರಂದು ಬಾಗಿಲು ಹಾಕಲಾಗುತ್ತದೆ. ಈ ಮೂಲಕ ಈ ಋುತುವಿನ 'ಚಾರ್‌ ಧಾಮ್‌' ಯಾತ್ರೆಯು ಕೊನೆಗೊಳ್ಳಲಿದೆ. ಈ ಋುತುವಿನಲ್ಲಿ ದೇಗುಲಗಳ ಬಾಗಿಲು ತೆರೆದ ಬಳಿಕ ಚಾರ್‌ ಧಾಮ ದೇಗುಲಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಭೇಟಿ ನೀಡಿದ್ದಾರೆ ಎಂದು ಉತ್ತರಾಖಂಡ ಚಾರ್‌ ಧಾಮ ದೇವಸ್ಥಾನಂ ಆಡಳಿತ ಮಂಡಳಿಯ ಸದಸ್ಯರಾದ ಡಾ. ಹರೀಶ್‌ ಗೌರ್‌ ಮಾಹಿತಿ ನೀಡಿದ್ದಾರೆ. ಈ ವರ್ಷ ಸೆಪ್ಟೆಂಬರ್‌ 18 ರಂದು ಚಾರ್‌ ಧಾಮ ಆರಂಭಗೊಂಡಿತ್ತು. ಅನೇಕ ಗಣ್ಯರು ಈ ಭಾರಿ ಯಾತ್ರೆ ಕೈಗೊಂಡಿದ್ದು ವಿಶೇಷವಾಗಿತ್ತು. ಪ್ರತಿ ವರ್ಷ ದೇಶ ವಿದೇಶದ ಲಕ್ಷಾಂತರ ಭಕ್ತರು ಚಾರ್‌ ಧಾಮಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷದಿಂದ ಸಾಂಕ್ರಾಮಿಕದಿಂದಾಗಿ ಭಕ್ತರ ಭೇಟಿಗೆ ಮಿತಿ ಹಾಕಲಾಗಿತ್ತು. ಈ ಋುತುವಿನಲ್ಲಿ ಕೇದಾರನಾಥದಲ್ಲಿನ ಅರ್ಚಕರು ಪ್ರತಿಭಟನೆ ನಡೆಸುತ್ತಲೇ ಇದ್ದರು. 'ಚಾರ್‌ ಧಾಮ್‌ ದೇವಸ್ಥಾನಂ ಮಂಡಳಿ'ಯು ತಮ್ಮ ಪೂಜಾ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದು, ಇದನ್ನು ವಿಸರ್ಜಿಸಬೇಕು ಎಂಬುದು ಅರ್ಚಕರ ಬೇಡಿಕೆಯಾಗಿತ್ತು. ಶಂಕರರ ಮೂರ್ತಿಯ ಆಕರ್ಷಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸಕ್ತಿಯಿಂದಾಗಿ ಚಾರ್‌ ಧಾಮ್‌ ಯಾತ್ರೆ ನಡೆಯುವ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಆಂತೆಯೇ ಕೇದಾರ ನಾಥದಲ್ಲಿ ಕೂಡ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದಿ ಗುರು ಶ್ರೀ ಶಂಕರಾಚಾರ್ಯರು ಐಕ್ಯವಾದ ಸ್ಥಳದಲ್ಲಿ ಶ್ರೀ ಶಂಕರರ ಬೃಹತ್‌ ಪ್ರತಿಮೆಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಮುಂದಿನ ಯಾತ್ರೆಯ ಸಂದರ್ಭದಲ್ಲಿ 12 ಅಡಿ ಎತ್ತರದ ಈ ಪ್ರತಿಮೆ ಮತ್ತು ಶ್ರೀ ಶಂಕರರ ಸಮಾಧಿಯ ಸ್ಥಳ ಆಕರ್ಷಣೀಯ ಜಾಗಗಳಾಗಿರಲಿವೆ ಎಂದು ಟ್ರಸ್ಟ್‌ನ ಅಧಿಕಾರಿಗಳು ಹೇಳಿದ್ದಾರೆ. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ್ದಾರೆ.