ಆರ್ಯನ್ ಖಾನ್‌ಗೆ ಆರ್ಥರ್ ಜೈಲೇ ಗತಿ: ಜಾಮೀನು ತಿರಸ್ಕಾರಕ್ಕೆ ಕಾರಣಗಳೇನು?

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿಗಳನ್ನು ಮುಂಬಯಿಯಲ್ಲಿನ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯದ ಈ ಆದೇಶಕ್ಕೆ ಕಾರಣಗಳೇನು?

ಆರ್ಯನ್ ಖಾನ್‌ಗೆ ಆರ್ಥರ್ ಜೈಲೇ ಗತಿ: ಜಾಮೀನು ತಿರಸ್ಕಾರಕ್ಕೆ ಕಾರಣಗಳೇನು?
Linkup
ಮುಂಬಯಿ: ಎಂಪ್ರೆಸ್ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಲ್ಲಿ ಸಿಕ್ಕಿಬಿದ್ದ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್‌ಗೆ ಮತ್ತೆ ನಿರಾಶೆಯಾಗಿದೆ. ಅಕ್ಟೋಬರ್ 3ರಿಂದಲೂ ಜೈಲಿನಲ್ಲಿರುವ ಆರ್ಯನ್ ಖಾನ್‌ಗೆ ಜಾಮೀನು ನೀಡಲು ವಿಶೇಷ ಮತ್ತೆ ನಿರಾಕರಿಸಿದೆ. ಇದರಿಂದ ಆರ್ಥರ್ ರಸ್ತೆ ಜೈಲಿನಲ್ಲಿ ಆರ್ಯನ್ ವಾಸ ಮುಂದುವರಿಯಲಿದೆ. ಎನ್‌ಡಿಪಿಎಸ್ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಅವರ ವಕೀಲರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಬಾಜ್ ಮರ್ಚೆಂಟ್ ವಕೀಲ ಅಲಿ ಕಾಸಿಫ್ ಕೂಡ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಪ್ರಕರಣದಲ್ಲಿ ಮುಗ್ಧ, ಅವರನ್ನು ಈ ಅಪರಾಧದಲ್ಲಿ ಬೇಕಂತಲೇ ಸಿಲುಕಿಸಲಾಗಿದೆ. ಅವರು ತನಿಖೆಯ ಹಾದಿ ತಪ್ಪಿಸುವ ಅಥವಾ ಪರಾರಿಯಾಗುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂಬ ವಕೀಲರ ವಾದಗಳನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿಲ್ಲ. ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ಅವರು ಜಾಮೀನು ನೀಡಲು ನಿರಾಕರಿಸಿದರು. ತನಿಖೆ ವೇಳೆ ಸಂಗ್ರಹಿಸಿದ ಮಾಹಿತಿಗಳು, ಆರೋಪಿ ನಂಬರ್ 1 (ಆರ್ಯನ್ ಖಾನ್) ನಿಷೇಧಿತ ವಸ್ತುವನ್ನು ಅಕ್ರಮವಾಗಿ ಹೊಂದಿರುವುದು ಹಾಗೂ ಹಂಚಿಕೆ ಮಾಡುವುದರಲ್ಲಿ ಪಾತ್ರ ಹೊಂದಿರುವುದು ಗೊತ್ತಾಗಿದೆ ಎಂದು ಹೇಳಿದೆ. ಆರ್ಯನ್ ಖಾನ್ ನಿಷೇಧಿತ ವಸ್ತುವನ್ನು ಎರಡನೇ ಆರೋಪಿ ಅರ್ಬಾಜ್ ಮರ್ಚೆಂಟ್‌ನಿಂದ ಖರೀದಿಸಿದ್ದಾರೆ. ಆರು ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ. ಅಂತರಾರಾಷ್ಟ್ರೀಯ ಮಾದಕವಸ್ತು ಜಾಲದೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳೊಂದಿಗೆ ಆರ್ಯನ್‌ ಖಾನ್‌ಗೆ ಸಂಪರ್ಕವಿತ್ತು ಎಂದು ಕೂಡ ಎನ್‌ಸಿಬಿ ವಾದಿಸಿತ್ತು. ಎನ್‌ಸಿಬಿ ಪರ ವಕೀಲ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಇವರೆಲ್ಲರೂ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ ಅಕ್ರಮ ಮಾದಕವಸ್ತು ಸಾಗಣೆ ಹಾಗೂ ಅಪರಾಧ ಸಂಚು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಆರ್ಯನ್ ಖಾನ್ ಮತ್ತು ಇತರೆ ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಕರಣದಲ್ಲಿನ ಎಲ್ಲ ಇತರೆ 17 ಆರೋಪಿಗಳಿಗಿಂತ ಆರ್ಯನ್ ಖಾನ್‌ರನ್ನು ವಿಭಿನ್ನವಾಗಿ ನಡೆಸಿಕೊಳ್ಳಲು ಸಾಧ್ಯವಿಲ್ಲ ಮತ್ತು ತನಿಖೆಯು ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಅವರನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದರು. ಆರ್ಯನ್ ಮತ್ತು ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಅವರನ್ನು ಒಳಗೊಂಡಂತೆ ಎಲ್ಲ ಆರೋಪಿಗಳೂ ಅಂತಾರಾಷ್ಟ್ರೀಯ ಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಇತರೆ ಸಾಕ್ಷಿದಾರರ ಮೇಲೆ ಯಾವುದೇ ರೀತಿಯ ಪ್ರಭಾವ ಉಂಟಾಗುವುದನ್ನು ತಪ್ಪಿಸಲು ಅವರನ್ನು ವಶದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದಿದ್ದರು. ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದೆ ಹೋದರೂ ಅವರ ಸ್ನೇಹಿತ ಅರ್ಬಾಜ್ ಮರ್ಚಂಟ್ ಬಳಿ ಸಿಕ್ಕಿದೆ. ಆರ್ಯನ್ ವಾಟ್ಸಾಪ್ ಚಾಟ್‌ಗಳಲ್ಲಿ ಒಂದಷ್ಟು ಪ್ರಮಾಣದ ಡ್ರಗ್ಸ್ ಖರೀದಿ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಎನ್‌ಸಿಬಿ ವಾದಿಸಿತ್ತು. ಈ ಅಂಶಗಳನ್ನು ನ್ಯಾಯಾಲಯ ಪರಿಗಣಿಸಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರ್ಯನ್ ಖಾನ್ ಪರ ಹಿರಿಯ ವಕೀಲ ಅಮಿತ್ ದೇಸಾಯಿ ಮತ್ತು ಸತೀಶ್ ಮಾನೆಶಿಂಧೆ ವಾದ ಮಂಡಿಸಿದ್ದರು. ಆರ್ಯನ್ ಬಳಿಯಿಂದ ಯಾವುದೇ ಹಣ ಅಥವಾ ನಿಷೇಧಿತ ಪದಾರ್ಥ ಪತ್ತೆಯಾಗಿಲ್ಲ. ಅಂದರೆ ಡ್ರಗ್ಸ್ ಖರೀದಿಸಲು ಅವರ ಹತ್ತಿರ ಹಣ ಇರಲಿಲ್ಲ. ವಾಟ್ಸಾಪ್ ಚಾಟ್‌ಗಳನ್ನು ನಾವು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಎನ್‌ಸಿಬಿ ವಶಪಡಿಸಿಕೊಂಡ ಯಾವ ವಸ್ತುವೂ ಆರ್ಯನ್ ಖಾನ್ ವಿರುದ್ಧದ ಸಾಕ್ಷ್ಯವಾಗಲಾರವು ಎಂದು ವಾದಿಸಿದ್ದರು. 692 ಅಡಿ ದೊಡ್ಡದಾದ ಬೃಹತ್ ಎಂಪ್ರೆಸ್ ಕ್ರೂಸ್ ಹಡಗಿನಲ್ಲಿ 11 ಡೆಕ್‌ಗಳು ಹಾಗೂ 796 ಕ್ಯಾಬಿನ್‌ಗಳಿವೆ. ಎನ್‌ಸಿಬಿ ತಂಡ ಡ್ರಗ್ಸ್ ಜಾಲದ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅದರೊಳಗೆ ಸುಮಾರು 1,800 ಮಂದಿ ಇದ್ದರು.