ಹಾಲು ಬೇಕಾ, ನಾಣ್ಯ ತರಬೇಡಿ! ನಂದಿನಿ ಬೂತ್‌ಗಳಲ್ಲಿ ಹೊಸ ವರಸೆ! ಕಾಯಿನ್‌ ನಿರಾಕರಣೆಗೆ ಗ್ರಾಹಕರ ಆಕ್ರೋಶ

ನಿತ್ಯ ಜೀವನದ ಅಗತ್ಯ ವಸ್ತುಗಳಲ್ಲೊಂದಾಗಿರುವ ಹಾಲು ಖರೀದಿಸಲು ಹೋದರೆ, ನಾಣ್ಯಗಳನ್ನು ನಿರಾಕರಿಸುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಣ್ಯ ಬೇಡ, ನೋಟು ಕೊಡಿ ಎಂಬ ಹೊಸ ವರಸೆಯನ್ನು ಹಾಲು ವಿತರಕರು ಆರಂಭಿಸಿದ್ದಾರೆ.

ಹಾಲು ಬೇಕಾ, ನಾಣ್ಯ ತರಬೇಡಿ! ನಂದಿನಿ ಬೂತ್‌ಗಳಲ್ಲಿ ಹೊಸ ವರಸೆ! ಕಾಯಿನ್‌ ನಿರಾಕರಣೆಗೆ ಗ್ರಾಹಕರ ಆಕ್ರೋಶ
Linkup
ಮುಹಮ್ಮದ್‌ ಆರಿಫ್‌ ನಿತ್ಯ ಜೀವನದ ಅಗತ್ಯ ವಸ್ತುಗಳಲ್ಲೊಂದಾಗಿರುವ ಹಾಲು ಖರೀದಿಸಲು ಹೋದರೆ, ನಾಣ್ಯದ ರೂಪದಲ್ಲಿ ನೀಡುವ ಹಣ ನಿರಾಕರಿಸುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಲಿನ ಬೂತ್‌ಗೆ ಜನಸಾಮಾನ್ಯರಿಂದ ಹಿಡಿದು ಎಲ್ಲ ವರ್ಗದ ಜನರು ಹೋಗುತ್ತಾರೆ. ಕೆಲವರು ಚಿಲ್ಲರೆ ನಾಣ್ಯ ಕೊಂಡೊಯ್ದರೆ, ಇನ್ನು ಕೆಲವರು ನೋಟಿನ ಜತೆಗೆ ಸರಿಯಾದ ಚಿಲ್ಲರೆಯನ್ನೂ ಕೊಂಡೊಯ್ಯುತ್ತಾರೆ. ಎರಡು ದಿನಗಳಿಂದ ನಾಣ್ಯ ಬೇಡ, ನೋಟು ಕೊಡಿ ಎಂಬ ಹೊಸ ವರಸೆಯನ್ನು ಹಾಲು ವಿತರಕರು ಆರಂಭಿಸಿದ್ದಾರೆ. ಅಧಿಕಾರಿಗಳ ಎಡವಟ್ಟು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಣಕಾಸು ವಿಭಾಗದ ಪ್ರಭಾರ ಸಹಾಯಕ ವ್ಯವಸ್ಥಾಪಕರ ಸಹಿಯೊಂದಿಗೆ ನ.4ರಂದು ಅಧಿಕೃತ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಅದರಲ್ಲಿ ನಾಣ್ಯ ತೆಗೆದುಕೊಳ್ಳದಂತೆ ಸೂಚಿಸಿ, ಅದಕ್ಕೆ ಕಾರಣ ನೀಡಲಾಗಿದೆ. 'ಹಾಲು ವಿತರಣಾ ಮಾರ್ಗದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೌಲ್ಯದಲ್ಲಿ ಬರುವ ನಾಣ್ಯಗಳನ್ನು ಆ್ಯಕ್ಸಿಸ್‌ ಬ್ಯಾಂಕ್‌ನವರು ಸ್ವೀಕರಿಸಲು ನಿರಾಕರಿಸಿರುತ್ತಾರೆ. ಆದುದರಿಂದ ವಿತರಣಾ ಮಾರ್ಗದ ಸಿಬ್ಬಂದಿ ಡೀಲರ್‌ಗಳಿಂದ ಸ್ವೀಕೃತಿ ಹಣವನ್ನು ನೋಟು ರೂಪದಲ್ಲಿ ಮಾತ್ರ ಸ್ವೀಕರಿಸಿ, ಒಕ್ಕೂಟಕ್ಕೆ ಪಾವತಿ ಮಾಡಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿ ಕೋರಲಾಗಿದೆ' ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳಿಂದ ಸುತ್ತೋಲೆ ಬಂದದ್ದೇ ತಡ, ಡೀಲರ್‌ಗಳು ಗ್ರಾಹಕರಿಂದ ನಾಣ್ಯ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಜನರಿಗೆ ಇದರ ಮರ್ಮ ಅರ್ಥವಾಗದೆ, ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆಲವು ಕಡೆ ನಾಣ್ಯ ನಿರಾಕರಿಸಿದ್ದರೆ, ಉಳಿದೆಡೆ ಹಾಲಿನ ಜತೆ ಬೇರೆ ವ್ಯಾಪಾರವೂ ಇರುವುದರಿಂದ ನಾಣ್ಯ ಪಡೆದುಕೊಳ್ಳುತ್ತಿದ್ದಾರೆ. ನಂದಿನಿ ಹಾಲಿನ ಬೂತ್‌ಗೆ ಹೋದರೆ ಸ್ವೀಕರಿಸುತ್ತಿಲ್ಲ. ಈಗ ಬೇರೆ ನಾಣ್ಯ ಪಡೆಯದಂತೆ ಸೂಚಿಸಿದ್ದಾರಂತೆ. ಇದು ಕೂಡ ನಾಣ್ಯ ಅಮಾನ್ಯೀಕರಣ ಮಾಡಿದಂತೆ. ಸರಕಾರದ ನಾಣ್ಯ ನಿರಾಕರಿಸುವುದು ಅಕ್ಷಮ್ಯ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾರೆ ಕೊಟ್ಟಾರದ ಶೇಕ್‌ ಮುಹಮ್ಮದ್‌ ಸವಾದ್‌. ಹಾಲಿನ ಬೂತ್‌ಗಳಲ್ಲಿ ನಾಣ್ಯ ಪಡೆಯಬಾರದು ಎಂಬ ಸುತ್ತೋಲೆ ಹೊರಡಿಸುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ದೇಶದ ಕರೆನ್ಸಿಯನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಅಂತಹ ಸುತ್ತೋಲೆ ಹೊರಡಿಸಿದರೆ ಅದು ತಪ್ಪು. ಈ ಬಗ್ಗೆ ನಾನು ಅಧಿಕಾರಿಗಳಲ್ಲಿ ವಿಚಾರಿಸುತ್ತೇನೆ. -ರವಿರಾಜ್‌ ಹೆಗ್ಡೆ ಕೊಡವೂರು, ಅಧ್ಯಕ್ಷ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ