ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲಿನ ಕೊರತೆ: ಕತ್ತಲಲ್ಲಿ ಮುಳುಗುವ ಅಪಾಯದಲ್ಲಿ ರಾಜಧಾನಿ

ರಾಷ್ಟ್ರ ರಾಜಧಾನಿಯಲ್ಲಿ ಕೂಡ ವಿದ್ಯುತ್ ಅಭಾವ ಎದುರಾಗುವ ಸ್ಥಿತಿ ಉಂಟಾಗಿದೆ. ಇನ್ನು ಎರಡು ದಿನಗಳಲ್ಲಿ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಾಗದೆ ಇದ್ದಲ್ಲಿ, ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ದಿಲ್ಲಿ ಸರ್ಕಾರ ತಿಳಿಸಿದೆ.

ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲಿನ ಕೊರತೆ: ಕತ್ತಲಲ್ಲಿ ಮುಳುಗುವ ಅಪಾಯದಲ್ಲಿ ರಾಜಧಾನಿ
Linkup
ಹೊಸದಿಲ್ಲಿ: ಮುಂದಿನ ಎರಡು ದಿನಗಳಲ್ಲಿ ರಾಜಧಾನಿ ಅಂಧಕಾರದಲ್ಲಿ ಮುಳುಗುವ ಭೀತಿ ಎದುರಾಗಿದೆ. ವಿದ್ಯುತ್ ಸ್ಥಾವರಗಳಿಗೆ ಪೂರೈಕೆಯಾಗುತ್ತಿರುವ ಕಲ್ಲಿದ್ದಲಿನ ಪ್ರಮಾಣ ಹೆಚ್ಚಳವಾಗದೆ ಇದ್ದರೆ ರಾಜಧಾನಿಯಲ್ಲಿ ಎದುರಾಗಲಿದೆ ಎಂದು ದಿಲ್ಲಿ ವಿದ್ಯುತ್ ಸಚಿವ ಶನಿವಾರ ತಿಳಿಸಿದ್ದಾರೆ. ಥರ್ಮಲ್ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ದೀರ್ಘಾವಧಿ ಪವರ್ ಕಟ್‌ಗಳನ್ನು ನಡೆಸಬೇಕಾಗಲಿದೆ ಎಂದು ತಮಿಳುನಾಡು ಮತ್ತು ಒಡಿಶಾ ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಅವುಗಳ ಸಾಲಿಗೆ ದಿಲ್ಲಿ ಸೇರಿಕೊಂಡಿದೆ. ದಿಲ್ಲಿಯಲ್ಲಿ ಕೂಡ ಅನಿಯಮಿತ , ಲೋಡ್ ಶೆಡ್ಡಿಂಗ್ ಸನ್ನಿವೇಶ ಎದುರಾಗಬಹುದು. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ 70ರಷ್ಟು ವಿದ್ಯುತ್ತನ್ನು 135 ಥರ್ಮಲ್ ವಿದ್ಯುತ್ ಸ್ಥಾವರಗಳು ನೀಡುತ್ತಿವೆ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಘಟಕಗಳಲ್ಲಿ ಮೂರು ದಿನಕ್ಕೆ ಸಾಲುವಷ್ಟು ಕೂಡ ಕಲ್ಲಿದ್ದಲು ಸಂಗ್ರಹವಿಲ್ಲ ಎಂದು ಕೇಂದ್ರ ಗ್ರಿಡ್ ಆಪರೇಟರ್ ದಾಖಲೆಗಳು ತಿಳಿಸಿವೆ. 'ಕಲ್ಲಿದ್ದಲು ಪೂರೈಕೆ ಸುಧಾರಣೆಯಾಗದೆ ಇದ್ದಲ್ಲಿ, ಮುಂದಿನ ಎರಡು ದಿನಗಳಲ್ಲಿ ದಿಲ್ಲಿಯಲ್ಲಿ ವಿದ್ಯುತ್ ಅಭಾವ ಉಂಟಾಗಲಿದೆ. ಕಲ್ಲಿದ್ದಲನ್ನು ದಹಿಸಿ ದಿಲ್ಲಿಗೆ ವಿದ್ಯುತ್ ನೀಡುವ ಸ್ಥಾವರಗಳು ಒಂದು ತಿಂಗಳಿಗೆ ಸಾಲುವಷ್ಟು ಕನಿಷ್ಠ ಕಲ್ಲಿದ್ದಲು ಸಂಗ್ರಹವನ್ನು ಹೊಂದಿರಬೇಕು. ಆದರೆ ಅವುಗಳ ಸಂಗ್ರಹ ಒಂದು ದಿನಕ್ಕೆ ಕುಸಿದಿದೆ' ಎಂದು ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಕೂಡಲೇ ರೈಲ್ವೆ ಬಂಡಿಗಳನ್ನು ವ್ಯವಸ್ಥೆಗೊಳಿಸಿ ಆದಷ್ಟು ಬೇಗನೆ ಘಟಕಗಳಿಗೆ ಕಲ್ಲಿದ್ದಲು ತಲುಪುವಂತೆ ಮಾಡಬೇಕು. ಈಗಾಗಲೇ ಎಲ್ಲ ಘಟಕಗಳೂ ಶೇ 55ರಷ್ಟು ಸಾಮರ್ಥ್ಯದೊಂದಿಗೆ ಮಾತ್ರವೇ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಕೋವಿಡ್ 19 ಎರಡನೆಯ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಉಂಟಾದಂತೆಯೇ ಕಲ್ಲಿದ್ದಲಿನ ಅಭಾವವೂ ಮಾನವ ನಿರ್ಮಿತ ಎಂಬಂತೆ ಕಾಣಿಸುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. 'ಈಗೊಂದು ಬಗೆಯ ರಾಜಕೀಯ ನಡೆಯುತ್ತಿದೆ. ನೀವೊಂದು ಬಿಕ್ಕಟ್ಟನ್ನು ಸೃಷ್ಟಿಸಿದರೆ, ಅದನ್ನು ಪರಿಹರಿಸುವ ಮೂಲಕ ಮಹಾನ್ ಸಾಧನೆ ಮಾಡಿದಂತೆ ಬಿಂಬಿಸಲಾಗುತ್ತದೆ' ಎಂದು ಕೇಂದ್ರ ಸರ್ಕಾರದತ್ತಲೇ ಪರೋಕ್ಷ ಬೊಟ್ಟು ಮಾಡಿದ್ದಾರೆ. ದಿಲ್ಲಿಯ ಹೊರ ವಲಯದಲ್ಲಿ 1300 ಮೆಗಾ ವ್ಯಾಟ್‌ನ ಅನಿಲ ಆಧಾರಿತ ವಿದ್ಯುತ್ ಘಟಕವಿದೆ. ದಿಲ್ಲಿಯ ಎಲ್ಲ ಮೂರು ಕಂಪೆನಿಗಳೂ ವಿದ್ಯುತ್ ಪೂರೈಕೆದಾರರಾಗಿವೆಯೇ ವಿನಾ ವಿದ್ಯುತ್ ಉತ್ಪಾದಕರಲ್ಲ. ನಾವು ಕೇಂದ್ರದ ಘಟಕದ ಮೇಲೆ ಅವಲಂಬಿತರಾಗಿದ್ದೇವೆ. ಒಂದು ವೇಳೆ ಪೂರೈಕೆ ಬಾರದೆ ಹೋದಲ್ಲಿ, ಎರಡು ದಿನಗಳ ಬಳಿಕ ಇಡೀ ದಿಲ್ಲಿಯಲ್ಲಿ ಅಂಧಕಾರ ತುಂಬಲಿದೆ ಎಂದು ತಿಳಿಸಿದ್ದಾರೆ. ದಿಲ್ಲಿ ವಿದ್ಯುತ್ ಬಿಕ್ಕಟ್ಟು ಎದುರಿಸುವ ಸಾಧ್ಯತೆ ಇದೆ. ಪರಿಸ್ಥಿತಿಯ ಮೇಲೆ ನಾನು ಖುದ್ದು ನಿಗಾ ವಹಿಸಿದ್ದೇನೆ. ವಿದ್ಯುತ್ ಕಡಿತದ ಸನ್ನಿವೇಶವನ್ನು ತಪ್ಪಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಈ ಬಗ್ಗೆ ಗಮನ ಹರಿಸಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ಪತ್ರ ಬರೆದಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.