ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸುಮ್ಮನೆ ಮೂಕ ಪ್ರೇಕ್ಷಕರಂತೆ ಇರಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೋವಿಡ್‌-19 ನಿರ್ವಹಣೆ, ಅವ್ಯವಸ್ಥೆಗಳ ಸರಿಪಡಿಸುವಿಕೆ ಬಗ್ಗೆ ಹೈಕೋರ್ಟ್‌ ಗಳಿಂದಲೇ ಚೆನ್ನಾಗಿ ನಿಗಾ ವಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ಕೇವಲ ಪೋಷಕ ಪಾತ್ರ ನಿರ್ವಹಿಸುತ್ತಿದೆ ಎಂದು ವಿಚಾರಣೆ ವೇಳೆ ​​ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.

ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸುಮ್ಮನೆ ಮೂಕ ಪ್ರೇಕ್ಷಕರಂತೆ ಇರಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌
Linkup
ಹೊಸದಿಲ್ಲಿ: ''ಕೊರೊನಾ ಎರಡನೇ ಅಲೆ ಆರ್ಭಟದಿಂದ ನಿತ್ಯ ಸಾವಿರಾರು ಜನರು ಜೀವ ಕಳೆದುಕೊಳ್ಳುತ್ತಿರುವ ಈ 'ರಾಷ್ಟ್ರೀಯ ಬಿಕ್ಕಟ್ಟಿನ' ಸಮಯದಲ್ಲಿ ಸುಮ್ಮನೆ ಮೂಕ ಪ್ರೇಕ್ಷಕರಂತೆ ಇರಲು ಸಾಧ್ಯವಿಲ್ಲ,'' ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಖಡಕ್ಕಾಗಿ ಹೇಳಿದೆ. ದೇಶದಲ್ಲಿ ಕೋವಿಡ್‌-19 ಹಾವಳಿಯ ನಡುವೆ ಸ್ಥಿತಿಗತಿಗಳ ನಿರ್ವಹಣೆ ಬಗ್ಗೆ ತಿಳಿಯಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್‌, ತನ್ನ ಈ ಉದ್ದೇಶ ಹೈಕೋರ್ಟ್‌ಗಳ ಪ್ರಚಲಿತ ವಿಚಾರಣೆಗಳಲ್ಲಿ ಮೂಗು ತೂರಿಸುವುದು ಅಥವಾ ಅತಿಕ್ರಮಣ ನಡೆಸುವುದು ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ. ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ''ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೋವಿಡ್‌-19 ನಿರ್ವಹಣೆ, ಅವ್ಯವಸ್ಥೆಗಳ ಸರಿಪಡಿಸುವಿಕೆ ಬಗ್ಗೆ ಹೈಕೋರ್ಟ್‌ ಗಳಿಂದಲೇ ಚೆನ್ನಾಗಿ ನಿಗಾ ವಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ಕೇವಲ ಪೋಷಕ ಪಾತ್ರ ನಿರ್ವಹಿಸುತ್ತಿದೆ. ಕೆಲವು ವಿಚಾರಗಳು ಪ್ರಾದೇಶಿಕ ಗಡಿಗಳನ್ನು ದಾಟಿ ನಮ್ಮ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಕೆಲವು ರಾಷ್ಟ್ರೀಯ ವಿಚಾರಗಳಲ್ಲಿ ಸುಪ್ರೀಂ ಕೂಡ ನಿಗಾ ವಹಿಸುವಿಕೆಯ ಹೊಣೆ ಹೊರಲಿದೆ,'' ಎಂದು ಹೇಳಿದೆ. ಸ್ವಯಂಪ್ರೇರಿತ ಪ್ರಕರಣ ದಾಖಲಾತಿ ಬಗ್ಗೆ ಕೆಲವು ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಸಂಬಂಧ ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಿದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಿತು. ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಪ್ರಕರಣ ಸಂಬಂಧ ಅಮಿಕಸ್‌ ಕ್ಯೂರಿ ಆಗಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ನ್ಯಾಯಪೀಠವು ಹಿರಿಯ ವಕೀಲರಾದ ಜೈದೀಪ್‌ ಗುಪ್ತಾ ಮತ್ತು ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್‌ ಕ್ಯೂರಿ ಆಗಿ ನೇಮಿಸಿದೆ.