ಮುಖೇಶ್‌ ಅಂಬಾನಿ ಮನೆ ವಿಳಾಸ ಕೇಳಿದ ಪ್ರವಾಸಿಗ..! ಸಂಭವನೀಯ ದಾಳಿ ಶಂಕೆ, ಓರ್ವನ ವಶ

ರಿಲಾಯನ್ಸ್‌ ಸಮೂಹದ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಂಭವನೀಯ ದಾಳಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಅದಲ್ಲದೇ ಘಟನೆಗೆ ಸಂಬಂಧಿಸಿದಂತೆ ಅಂಬಾನಿ ನಿವಾಸದ ವಿಳಾಸ ಕೇಳಿದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಖೇಶ್‌ ಅಂಬಾನಿ ಮನೆ ವಿಳಾಸ ಕೇಳಿದ ಪ್ರವಾಸಿಗ..! ಸಂಭವನೀಯ ದಾಳಿ ಶಂಕೆ, ಓರ್ವನ ವಶ
Linkup
ಮುಂಬೈ: ರಿಲಾಯನ್ಸ್‌ ಸಮೂಹದ ಮುಖ್ಯಸ್ಥ ಹಾಗೂ ಖ್ಯಾತ ವಾಣಿಜ್ಯೋದ್ಯಮಿ ನಿವಾಸದ ವಿಳಾಸ ಕೇಳಿ ಆತಂಕಕ್ಕೆ ಕಾರಣವಾಗಿದ್ದ 40 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಸಂಶಯಾಸ್ಪದವಾಗಿ ಮುಖೇಶ್‌ ಅಂಬಾನಿ ಮನೆ ವಿಳಾಸ ಕೇಳುತ್ತಿದ್ದ ಸುರೇಶ್‌ ವಿಸಾಂಜಿ ಪಟೇಲ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರಂಭಿಕ ವಿಚಾರಣೆಯಲ್ಲಿ ಯಾವುದೇ ಆತಂಕಕಾರಿ ಅಂಶಗಳು ಕಂಡುಬಂದಿಲ್ಲ. ಪಟೇಲ್‌ ಪ್ರವಾಸಿಗರಾಗಿದ್ದು, ಕುತೂಹಲಕ್ಕಾಗಿ ಮುಂಬೈನ ಪ್ರಮುಖ ಸ್ಥಳವಾದ ಮುಖೇಶ್‌ ಅಂಬಾನಿ ನಿವಾಸದ ವಿಳಾಸ ಕೇಳಿದ್ದಾರೆ ಎಂದು ಮುಂಬೈ ಪೊಲೀಸರು ಮಂಗಳವಾರ ಬೆಳಗ್ಗೆ ತಿಳಿಸಿದ್ದಾರೆ. ಆದರೂ, ಯಾವುದೇ ಸಂಭವನೀಯ ಬೆದರಿಕೆಯನ್ನು ತಳ್ಳಿಹಾಕದೇ ಸಂಪೂರ್ಣವಾಗಿ ಪಟೇಲ್‌ ಅವರನ್ನು ವಿಚಾರಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು ವ್ಯಕ್ತಿಗಳು ಮುಖೇಶ್‌ ಅಂಬಾನಿ ಅವರ ನಿವಾಸದ ವಿಳಾಸ ಕೇಳಿದ ಬಳಿಕ ಸೋಮವಾರ ರಾತ್ರಿ ಮುಖೇಶ್‌ ಅಂಬಾನಿ ಅವರ ನಿವಾಸ ಅಂಟಿಲಿಯಾದ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಬ್ಬರು ವ್ಯಕ್ತಿಗಳು ದೊಡ್ಡ ಬ್ಯಾಗ್‌ಗಳೊಂದಿಗೆ ಬಂದು ಮುಖೇಶ್‌ ಅಂಬಾನಿ ನಿವಾಸದ ವಿಳಾಸವನ್ನು ಕೇಳಿದ್ದಾರೆ ಎಂದು ಟ್ಯಾಕ್ಸಿ ಚಾಲಕನೊಬ್ಬ ಫೋನ್‌ ಮಾಡಿ ಮಾಹಿತಿ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದು, ಗುಜರಾತ್‌ ಮೂಲದ ಟ್ಯಾಕ್ಸಿ ಚಾಲಕನನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಮುಖೇಶ್‌ ಅಂಬಾನಿ ನಿವಾಸದ ಬಳಿ ಪತ್ತೆಯಾಗಿತ್ತು. ಕಾರ್‌ನಲ್ಲಿ 20 ಜಿಲೆಟಿನ್‌ ಕಡ್ಡಿಗಳು ಹಾಗೂ ಪತ್ರ ದೊರಕಿತ್ತು. ಇನ್ನು ಈ ಕಾರು ಕಳ್ಳತನದ ಕಾರಾಗಿದ್ದು, ಈ ಘಟನೆ ನಡೆದು ಕೆಲವೇ ದಿನದಲ್ಲಿ ಕಾರಿನ ಮಾಲೀಕ ಮನ್ಸುಖ್ ಹಿರೇನ್‌ ಮೃತ ದೇಹ ಥಾಣೆಯ ಒಂದು ಕೊಳದಲ್ಲಿ ಪತ್ತೆಯಾಗಿತ್ತು. ಪೊಲೀಸರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ತನ್ನ ಪತಿಯ ಸಾವಿಗೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಾಜೆ ಕಾರಣ ಎಂದು ಮನ್ಸುಖ್ ಹಿರೇನ್‌ ಪತ್ನಿ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸಚಿನ್‌ ವಾಜೆ ಸೇವೆಯಿಂದ ಅಮಾನತುಗೊಂಡಿದ್ದಾರೆ. ಹಾಗೆಯೇ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಇನ್ನೂ ಎರಡು ಕೊಲೆಗಳನ್ನು ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪ ಮಾಡಲಾಗಿದೆ. ಎನ್‌ಕೌಂಟರ್ ತಜ್ಞರಾಗಿದ್ದ ಸಚಿನ್ ವಾಜೆ ಸುಮಾರು 63 ಎನ್‌ಕೌಂಟರ್‌ಗಳಲ್ಲಿ ಪಾಲ್ಗೊಂಡಿದ್ದರು. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳ ನಡೆಸುತ್ತಿದೆ.