ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಬೈಕ್ ಏರಿ ಬರುವ ದುಷ್ಕರ್ಮಿಗಳು: ಪತ್ರಿಕಾ ವಿತರಕರೇ ದರೋಡೆಕೋರರ ಟಾರ್ಗೆಟ್..!

​​ನಸುಕಿನ ಜಾವದಲ್ಲಿ ಸಾರ್ವಜನಿಕರ ಓಡಾಟ ಕಡಿಮೆ ಇರುತ್ತದೆ. ಹಾಗಾಗಿ, ಪತ್ರಿಕಾ ವಿತರಕರನ್ನೇ ಗುರಿಯಾಗಿಸಿಕೊಂಡು ಬರುವ ಮುಸುಕುಧಾರಿಗಳು ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದಾರೆ ತಿಳಿದುಬಂದಿದೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಬೈಕ್ ಏರಿ ಬರುವ ದುಷ್ಕರ್ಮಿಗಳು: ಪತ್ರಿಕಾ ವಿತರಕರೇ ದರೋಡೆಕೋರರ ಟಾರ್ಗೆಟ್..!
Linkup
: ಶಿವಾಜಿನಗರದಿಂದ ಪೇಪರ್‌ ಬಂಡಲ್‌ ತುಂಬಿಕೊಂಡು ಡೆಲಿವರಿ ಮಾಡಲು ಹೋಗುತ್ತಿದ್ದ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರನ್ನು ಪಲ್ಸರ್‌ ಬೈಕ್‌ನಲ್ಲಿ ಬಂದ ಮೂವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿ ಎರಡು ಸಾವಿರ ರೂ. ನಗದು ಹಾಗೂ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಅಶೋಕ್‌ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಲೇಔಟ್‌ನ ಆಟೋ ಚಾಲಕ ತಿಮ್ಮಪ್ಪ, ಮುನೇಶ್ವರ ನಗರದ ಅಶ್ವಿನ್‌ಕುಮಾರ್‌ ಶರ್ಮಾ ಎಂಬುವರು ಹಣ ಹಾಗೂ ಮೊಬೈಲ್‌ ಕಳೆದುಕೊಂಡಿರುವ ಬಗ್ಗೆ ಅಶೋಕ್‌ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಿಮ್ಮಪ್ಪ ಬೆಳಗಿನ ಜಾವ ಶಿವಾಜಿನಗರದಿಂದ ದಿನಪತ್ರಿಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಹೊಸೂರು ರಸ್ತೆಯಿಂದ ಸರ್ಜಾಪುರ ಮಾರ್ಗದಲ್ಲಿರುವ ನ್ಯೂಸ್‌ ಏಜೆನ್ಸಿಗಳಿಗೆ ಡೆಲಿವರಿ ಮಾಡುತ್ತಿದ್ದರು. ಇದೇ ರೀತಿ ಸೋಮವಾರ ಶಿವಾಜಿನಗರದಿಂದ ಪತ್ರಿಕೆಗಳನ್ನು ತುಂಬಿಕೊಂಡು ಹೋಗುವಾಗ ಬೆಳಗಿನ ಜಾವ 4.15ರ ಸಮಯದಲ್ಲಿ ಬ್ರಿಗೇಡ್‌ ರಸ್ತೆಯ ಮಾಡೆಲ್‌ ಮೆಡಿಕಲ್‌ ಮುಂಭಾಗದ ರಸ್ತೆಯಲ್ಲಿ ಪಲ್ಸರ್‌ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿದ್ದರು. ಬಳಿಕ ಮೊಬೈಲ್‌ ಕಿತ್ತುಕೊಳ್ಳಲು ಮುಂದಾದರು. ಆದರೆ, ಅದಕ್ಕೆ ಅವಕಾಶ ಕೊಡದಿದ್ದಾಗ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಜೇಬಿನಲ್ಲಿದ್ದ ಎರಡು ಸಾವಿರ ರೂ. ನಗದು ಕಸಿದುಕೊಂಡು ಪರಾರಿಯಾದರು. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಶ್ವಿನ್‌ಕುಮಾರ್‌ ಶರ್ಮಾ ಅವರನ್ನು ಅಡ್ಡಗಟ್ಟಿ ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ ಎಂದು ಪತ್ರಿಕಾ ವಿತರಕರ ತಂಡ ದೂರಿನಲ್ಲಿ ಉಲ್ಲೇಖಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಒಂದೇ ತಿಂಗಳಲ್ಲಿ ದರೋಡೆಗೊಳಗಾದ ನಾಲ್ಕು ಪತ್ರಿಕಾ ವಿತರಕರು: ಜುಲೈ ತಿಂಗಳಲ್ಲಿ ನಾಲ್ವರು ಪತ್ರಿಕಾ ವಿತರಕರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿರುವ ಘಟನೆ ನಡೆದಿದೆ. ಪತ್ರಿಕಾ ವಿತರಕರಾದ ಸಲ್ವಾನ್‌, ಕುಪ್ಪನ್‌, ಶ್ರೀನಾಥ್‌, ರಾಜನ್‌ ದರೋಡೆಗೊಳಗಾಗಿದ್ದಾರೆ. ನಸುಕಿನ ಜಾವದಲ್ಲಿ ಸಾರ್ವಜನಿಕರ ಓಡಾಟ ಕಡಿಮೆ ಇರುತ್ತದೆ. ಹಾಗಾಗಿ, ಪತ್ರಿಕಾ ವಿತರಕರನ್ನೇ ಗುರಿಯಾಗಿಸಿಕೊಂಡು ಬರುವ ಮುಸುಕುಧಾರಿಗಳು ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದಾರೆ ಎಂದು ಪತ್ರಿಕಾ ವಿತರಕರು ವಿಕಗೆ ತಿಳಿಸಿದರು. ನೀಲಸಂದ್ರದಿಂದ ಬ್ರಿಗೇಡ್‌ ರಸ್ತೆಯವರೆಗೂ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ರಸ್ತೆಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದಾರೆ. ನಗದು ಹಾಗೂ ಮೊಬೈಲ್‌ ಕೊಡಲಿಲ್ಲವೆಂದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಾರೆ. ಹೀಗಾಗಿ, ಬೆಳಗಿನ ಜಾವದಲ್ಲಿ ಮತ್ತು ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿಓಡಾಡುವುದೇ ಕಷ್ಟವಾಗಿದೆ ಎಂದು ಸಾರ್ವಜನಿಕರು ದೂರಿದರು. 'ಬೆಳಗಿನ ಜಾವ ಪತ್ರಿಕೆ ವಿತರಣೆಗೆ ಜೀವ ಭಯದಿಂದಲೇ ತೆರಳಬೇಕಾಗಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬೆಳಗಿನ ಜಾವದಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸುವಂತೆಯೂ ಪೊಲೀಸರಲ್ಲಿ ಮನವಿ ಮಾಡಲಾಗಿದೆ' ಎಂದು ಪತ್ರಿಕಾ ವಿತರಕ ವರದರಾಜು ತಿಳಿಸಿದರು.