ಬೆಡ್ ಹಗರಣ: ಕೋಮು ಹೇಳಿಕೆ ಕುರಿತಾದ ಪ್ರಶ್ನೆಗಳಿಂದ ನುಣುಚಿಕೊಂಡ ತೇಜಸ್ವಿ ಸೂರ್ಯ

ಬಿಬಿಎಂಪಿ ಬೆಡ್ ಹಗರಣವನ್ನು ಬಯಲಿಗೆಳೆಯುವ ವೇಳೆ 17 ಮುಸ್ಲಿಂ ಉದ್ಯೋಗಿಗಳ ಹೆಸರನ್ನು ಮಾತ್ರ ಓದುವ ಮೂಲಕ ಕೋಮು ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ತೇಜಸ್ವಿ ಸೂರ್ಯ, ಸುದ್ದಿಗೋಷ್ಠಿಯಲ್ಲಿ ಕಠಿಣ ಪ್ರಶ್ನೆಗಳಿಂದ ನುಣುಚಿಕೊಂಡಿದ್ದಾರೆ.

ಬೆಡ್ ಹಗರಣ: ಕೋಮು ಹೇಳಿಕೆ ಕುರಿತಾದ ಪ್ರಶ್ನೆಗಳಿಂದ ನುಣುಚಿಕೊಂಡ ತೇಜಸ್ವಿ ಸೂರ್ಯ
Linkup
ಬೆಂಗಳೂರು: ಕೋವಿಡ್ ವಾರ್ ರೂಂನಲ್ಲಿ ರೋಗಿಗಳಿಗೆ ಬೆಡ್ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಮಾಡುವಾಗ 17 ಮುಸ್ಲಿಂ ಉದ್ಯೋಗಿಗಳನ್ನು ಗುರಿಯಾಗಿರಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸೋಮವಾರ ಸುದ್ದಿಗೋಷ್ಠಿ ವೇಳೆ ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡದೆ ಜಾರಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಅವುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ಅರು ಉತ್ತರ ನೀಡಲಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕಳೆದ ವಾರ ತಮ್ಮ ಪಕ್ಷದ ನಿಯಂತ್ರಣದಲ್ಲಿಯೇ ಇರುವ ಬಿಬಿಎಂಪಿಯಿಂದ ನಡೆಯುತ್ತಿದೆ ಎಂಬುದನ್ನು ಬಯಲಿಗೆಳೆದಿದ್ದರು. ಆದರೆ ಇದೇ ಸಂದರ್ಭದಲ್ಲಿ ಅವರು ವಾರ್ ರೂಂನಲ್ಲಿದ್ದ 17 ಮುಸ್ಲಿಂ ಉದ್ಯೋಗಿಗಳ ಹೆಸರು ಪ್ರಸ್ತಾಪಿಸಿದ್ದು, ಕೋಮು ತಿರುವು ನೀಡಿತ್ತು. ಕೋವಿಡ್ ವಾರ್ ರೂಂನಲ್ಲಿದ್ದ 205 ಉದ್ಯೋಗಿಗಳ ಪೈಕಿ 17 ಮುಸ್ಲಿಂ ಉದ್ಯೋಗಿಗಳ ಪಟ್ಟಿ ಓದಿದ್ದ ತೇಜಸ್ವಿ ಸೂರ್ಯ, 'ಯಾರು ಈ ಜನರು? ಮೊದಲ ಪಾಳಿ, ಎರಡನೆಯ ಪಾಳಿ ಮತ್ತು ರಾತ್ರಿ ಪಾಳಿ- ಎಲ್ಲ ಪಾಳಿಗಳಲ್ಲಿಯೂ ಇದ್ದಾರೆ. ಅವರ ನೇಮಕಾತಿಯ ಪ್ರಕ್ರಿಯೆ ಏನು?' ಎಂದು ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. 'ನೀವೇನು ಮದರಸ ನಡೆಸುತ್ತಿದ್ದೀರೋ, ಪಾಲಿಕೆಯನ್ನೋ?' ಎಂದು ಶಾಸಕ ಹಾಗೂ ಸೂರ್ಯ ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಕೇಳಿದ್ದರು. ಇದು ತೀವ್ರ ಚರ್ಚೆಗೆ ಒಳಗಾಗಿತ್ತು. ತಾವು ಯಾವುದೇ ಕೋಮು ದ್ವೇಷದ ಹೇಳಿಕೆಗಳನ್ನು ನೀಡಿರಲಿಲ್ಲ. ತಮಗೆ ನೀಡಿದ್ದ ಪಟ್ಟಿಯನ್ನು ಓದಿದ್ದಷ್ಟೇ ಎಂದು ಸೂರ್ಯ ಸಮಜಾಯಿಷಿ ನೀಡಿದ್ದಾರೆ. 'ಅದು ನನಗೆ ನೀಡಲಾಗಿದ್ದ ಪಟ್ಟಿ. ಅವರನ್ನು ಏಕೆ ನೇಮಿಸಲಾಗಿದೆ, ಹೇಗೆ ನೇಮಿಸಲಾಗಿದೆ ಮತ್ತು ನೇಮಕಾತಿಯ ಪ್ರಕ್ರಿಯೆ ಏನು ಎಂದು ಪ್ರಶ್ನಿಸಿದ್ದೆ. ಅದರ ವಿಡಿಯೋ ಕೂಡ ಇದೆ. ವಿಡಿಯೋದಲ್ಲಿನ ಮಾತುಗಳನ್ನು ನೀವು ಆಲಿಸಬಹುದು. ಇದನ್ನು ಏಕೆ ಮಾಡಲಾಗಿದೆ ಎನ್ನುವುದನ್ನು ನೀವು ಅಧಿಕಾರಿಗಳನ್ನು ಕೇಳಬೇಕು' ಎಂದು ಅವರು ಮುಸ್ಲಿಂ ಹೆಸರುಗಳನ್ನು ಮಾತ್ರ ಹೇಳಿದ್ದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 'ನಾನು ಹಜ್ ಅಥವಾ ಮದರಸಾ ಎಂಬ ಪದಗಳನ್ನು ಬಳಸಲಿಲ್ಲ. ನನ್ನ ಕ್ರಿಯೆ ಮತ್ತು ಬಳಸಿದ ಪದಗಳಿಗೆ ಮಾತ್ರ ನನ್ನನ್ನು ಹೊಣೆಗಾರನನ್ನಾಗಿಸಿ' ಎಂದರು. ಅವರ ಸಮ್ಮುಖದಲ್ಲಿ ಅವರ ಸಹೋದ್ಯೋಗಿಗಳು ನೀಡಿದ ಹೇಳಿಕೆಗಳಿಗೆ ತೇಜಸ್ವಿ ಸೂರ್ಯ ಕೂಡ ಹೊಣೆಗಾರರಾಗುತ್ತಾರೆ ಎಂಬ ಸುದ್ದಿಗಾರರ ಹೇಳಿಕೆಗೆ ಅವರು ಮೌನವಹಿಸಿದರು. ತಾವು ನಿರ್ದಿಷ್ಟ ಸಮುದಾಯದ ವಿರುದ್ಧ ಅಥವಾ ಅವರನ್ನು ಗುರಿಯಾಗಿರಿಸಿ ಯಾವುದೇ ಆರೋಪ ಮಾಡಿಲ್ಲ. ಹೀಗಾಗಿ ಕ್ಷಮೆ ಕೂಡ ಕೇಳುವುದಿಲ್ಲ ಎಂದರು. ತಾವು ಅವರ ವಿರುದ್ಧ ಕ್ರಿಮಿನಲ್ ಆರೋಪ ಮಾಡದೆ ಇರುವುದರಿಂದ 17 ಮಂದಿಗೆ ಕ್ಲೀನ್ ಚಿಟ್ ನೀಡಲು ಸಿಸಿಬಿ ವಿಚಾರಣೆಗೆ ಒಳಪಡಿಸಿಲ್ಲ ಎಂದರು. 'ನಿಮಗೆ ನಿಮ್ಮದೇ ಅಜೆಂಡಾ ಇರಬಹುದು. ನನ್ನ ಅಜೆಂಡಾ ಸ್ಪಷ್ಟವಾಗಿದೆ. ನನ್ನ ಅಜೆಂಡಾ ಸತ್ಯ ಹೇಳುವುದು. ನನ್ನ ಅಜೆಂಡಾ ಜೀವಗಳನ್ನು ಉಳಿಸುವುದು. ಈ ಪ್ರಶ್ನೆಗೆ ನಾನು ಉತ್ತರ ನೀಡಿದ್ದೇನೆ' ಎಂದರು. ಹಾಗಾದರೆ ನೀವು ಹೇಳಿದ 17 ಜನರನ್ನು ಮಾತ್ರ ಪೊಲೀಸರು ಏಕೆ ವಿಚಾರಣೆಗೆ ಒಳಪಡಿಸಿದರು ಎಂದು ಕೇಳಿದಾಗ, ಅದಕ್ಕೆ ಉತ್ತರಿಸದ ತೇಜಸ್ವಿ, 'ಬೇರೆ ಏನಾದರೂ ಪ್ರಶ್ನೆ ಇದೆಯೇ?' ಎಂದು ಹೇಳಿದರು. 'ನಾನು ಸತ್ಯ ಮತ್ತು ಪ್ರತಿಪಾದನೆಗಳಿಗೆ ಉತ್ತರ ನೀಡಿದ್ದೇನೆ. ಬೆಂಗಳೂರಿನ ಜನತೆ ಹಾಸಿಗೆಗಳ ಲಭ್ಯತೆ ಕುರಿತು ಉತ್ತರ ಬಯಸಿದ್ದಾರೆ. ನಾನು ಮತ್ತೊಮ್ಮೆ ಅದನ್ನು ಹೇಳುತ್ತೇನೆ. ನಾನು ಆ 17 ಜನರ ಮೇಲೆ ಅಪರಾಧ ಹೊರಿಸಿಲ್ಲ. ಅವರು ಈ ಸಂಸ್ಥೆಯ ತಾತ್ಕಾಲಿಕ ಕೆಲಸಗಾರರು. ಅವರನ್ನು ನೇಮಿಸುವುದು ಅಥವಾ ಹೊರಹಾಕುವುದು ತೇಜಸ್ವಿ ಸೂರ್ಯನ ಕೆಲಸ ಅಲ್ಲ. ಅದು ಬಿಬಿಎಂಪಿಯ ಕೆಲಸ. ಅವರನ್ನು ಕಿತ್ತುಹಾಕಿದ್ದು ಏಕೆ? ಬಿಬಿಎಂಪಿಯನ್ನು ಪ್ರಶ್ನಿಸಿ' ಎಂದು ಹೇಳುವ ಮೂಲಕ ಮತ್ತಷ್ಟು ಪ್ರಶ್ನೆಗಳನ್ನು ಕೇಳದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. 'ಸಾಯುತ್ತಿರುವ ಜನರಿಗೆ ಹಾಸಿಗೆಗಳನ್ನು ಒದಗಿಸುವುದು ಮುಖ್ಯವೋ ಅಥವಾ ಈ ಇಡೀ ಪ್ರಕರಣವನ್ನು ದಿಕ್ಕುತಪ್ಪಿಸುವುದು ಮುಖ್ಯವೋ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಕಳೆದ ಮೂರು ದಿನಗಳು, 100 ಗಂಟೆಗಳಿಂದ ಜನರು ವೀಕ್ಷಿಸಿದ್ದಾರೆ. ಜನರು ನಿರ್ಧಾರ ಮಾಡಲಿದ್ದಾರೆ. ನನ್ನ ಬದ್ಧತೆ ಇರುವುದು ಜನರಿಗೆ. ರೋಗಿಗಳಿಗೆ ಸಿಗುವ ಹಾಸಿಗೆ ಸಂಖ್ಯೆಯು ಜಾತಿ ಅಥವಾ ಧರ್ಮವನ್ನು ಪರಿಗಣಿಸುವುದಿಲ್ಲ. ನನ್ನ ಉದ್ದೇಶ ಸ್ಪಷ್ಟವಾಗಿದೆ ಮತ್ತು ನನ್ನ ಜನರಿಗೆ ಮಾಡಬೇಕಾದ ಕರ್ತವ್ಯವನ್ನು ನಿಭಾಯಿಸಿದ್ದೇನೆ' ಎಂದರು. ಅನೇಕ ಪ್ರಮುಖ ಪ್ರಶ್ನೆಗಳಿಗೆ ಅವರು ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಮೂವರ ಬಂಧನ ಬೆಡ್ ಬ್ಲಾಕಿಂಗ್ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ, ಇನ್ನೂ ಮೂವರನ್ನು ಸೋಮವಾರ ಬಂಧಿಸಿದೆ. ಇದರಿಂದ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ ಏಳಕ್ಕೆ ಏರಿದೆ. ಆರೋಪಿಗಳನ್ನು ಶಶಿಧರ್, ವೆಂಕೋಬ ರಾವ್ ಮತ್ತು ಸುಧೀರ್ ಉಮಾ ರಾಣಿ ಎಂದು ಗುರುತಿಸಲಾಗಿದೆ. ಶಶಿಧರ್ ಆರೋಗ್ಯ ಮಿತ್ರನಾಗಿ ಕೆಲಸ ಮಾಡುತ್ತಿದ್ದರೆ, ಉಳಿದಿಬ್ಬರು ಆರ್ಆರ್ ನಗರದ ಸ್ಪರ್ಶ್ ಆಸ್ಪತ್ರೆ ಮತ್ತು ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದಾರೆ.