ಬೆಂಗಳೂರಿನ ಚಿತಾಗಾರಗಳಲ್ಲಿ ಆನ್‌ಲೈನ್‌ ವ್ಯವಸ್ಥೆ: ಕಾಯುವಿಕೆ ತಪ್ಪಿಸಲು ಸರ್ಕಾರದ ಕ್ರಮ

ಮೃತರ ಸಂಬಂಧಿಕರು ತಮ್ಮ ಮೊಬೈಲ್‌ಗೆ ಬಂದ ಟೋಕನ್‌ ಸಂಖ್ಯೆ ಮತ್ತು ಇನ್ನಿತರೆ ದಾಖಲೆಗಳನ್ನು ಸ್ಮಶಾನದ ಸಿಬ್ಬಂದಿಗೆ ತೋರಿಸಿ ಅಂತ್ಯಸಂಸ್ಕಾರ ಮಾಡಬಹುದು. ಬಿಬಿಎಂಪಿ ಅಧೀನದಲ್ಲಿ ಬರುವ 20 ಚಿತಾಗಾರಗಳಲ್ಲಿ ಅಂತ್ಯಕ್ರಿಯೆಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಬೆಂಗಳೂರಿನ ಚಿತಾಗಾರಗಳಲ್ಲಿ ಆನ್‌ಲೈನ್‌ ವ್ಯವಸ್ಥೆ: ಕಾಯುವಿಕೆ ತಪ್ಪಿಸಲು ಸರ್ಕಾರದ ಕ್ರಮ
Linkup
: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರು ಹಾಗೂ ಸ್ವಾಭಾವಿಕವಾಗಿ ಇತರೆ ಕಾರಣದಿಂದ ಸಾವಿಗೀಡಾದವರನ್ನು ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ಮಾಡಲು ಆನ್‌ಲೈನ್‌ ಮೂಲಕ ನೋಂದಾಯಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ವಿದ್ಯುತ್‌ ಚಿತಾಗಾರ, ಸ್ಮಶಾನಗಳಲ್ಲಿ ಶವ ಸಂಸ್ಕಾರಕ್ಕೆ ಗಂಟೆಗಟ್ಟಲೇ ಕಾಯುವುದನ್ನು ತಪ್ಪಿಸಲು ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ಪಾರ್ಥಿವ ಶರೀರವನ್ನು ಅಥವಾ ಸ್ಮಶಾನಕ್ಕೆ ಕಳುಹಿಸುತ್ತಿರುವ ಪದ್ಧತಿ ಕೈಬಿಟ್ಟು, ಆನ್‌ಲೈನ್‌ ಮೂಲಕ ಅಂತ್ಯಕ್ರಿಯೆಯ ದಿನ, ಸಮಯವನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆಸ್ಪತ್ರೆ ಅಥವಾ ಮನೆಯಲ್ಲಿ ಸಾವು ಸಂಭವಿಸಿದಾಗ ಸಂಬಂಧಿಗಳು ಪಾಲಿಕೆಯ ಸಹಾಯವಾಣಿ ಸಂಖ್ಯೆ 8495998495ಗೆ ಕರೆ ಮಾಡಿ ಅಂತ್ಯಕ್ರಿಯೆಗಾಗಿ ನಿಗದಿತ ದಿನ, ಸ್ಮಶಾನದ ಹೆಸರು, ಸಮಯದ ಮಾಹಿತಿಯನ್ನು ಒದಗಿಸಬೇಕು. ಬಳಿಕ ಸಹಾಯವಾಣಿ ಸಿಬ್ಬಂದಿಯು ತಂತ್ರಾಂಶದಲ್ಲಿ ವಿವರ ದಾಖಲಿಸಿಕೊಂಡು, ಕರೆ ಮಾಡಿದವರ ಮೊಬೈಲ್‌ಗೆ ಟೋಕನ್‌ ಸಂಖ್ಯೆ ಮತ್ತು ಹಂಚಿಕೆಯ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಕಳುಹಿಸುತ್ತಾರೆ. ಇದರಿಂದ ಆಂಬ್ಯುಲೆನ್ಸ್‌ಗಳು ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಲ್ಲುವುದು, ಅನಗತ್ಯ ವಿಳಂಬ ತಪ್ಪಲಿದೆ. ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡವರು ನಿಗದಿಪಡಿಸಿದ ಸಮಯಕ್ಕಿಂತ 30 ನಿಮಿಷ ಮೊದಲು ಮೃತದೇಹಗಳೊಂದಿಗೆ ಚಿತಾಗಾರಗಳನ್ನು ತಲುಪಬೇಕಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 16 ಚಿತಾಗಾರಗಳು ಕಾರ್ಯ ನಿರ್ವಹಿಸುತ್ತಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಮರಣ ಪ್ರಮಾಣ ಹೆಚ್ಚಾಗಿದ್ದು, ಚಿತಾಗಾರಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಆದ ಕಾರಣ, ಗಿಡ್ಡೇನಹಳ್ಳಿ, ತಾವರೆಕೆರೆ, ಮಾವಳ್ಳಿಪುರ ಮತ್ತು ಟಿ.ಆರ್‌.ಮಿಲ್‌ಗಳಲ್ಲಿ ಅಂತ್ಯಸಂಸ್ಕಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ನಿತ್ಯ 150 ಶವ ಸಂಸ್ಕಾರ ಮಾಡಬಹುದಾಗಿದೆ. ಬಿಬಿಎಂಪಿ ಅಧೀನದಲ್ಲಿ ಬರುವ 20 ಚಿತಾಗಾರಗಳಲ್ಲಿ ಅಂತ್ಯಕ್ರಿಯೆಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮೃತರ ಸಂಬಂಧಿಕರು ತಮ್ಮ ಮೊಬೈಲ್‌ಗೆ ಬಂದ ಟೋಕನ್‌ ಸಂಖ್ಯೆ ಮತ್ತು ಇನ್ನಿತರೆ ದಾಖಲೆಗಳನ್ನು ಸ್ಮಶಾನದ ಸಿಬ್ಬಂದಿಗೆ ತೋರಿಸಿ ಅಂತ್ಯಸಂಸ್ಕಾರ ಮಾಡಬಹುದು.