ಬೆಂಗಳೂರು: ರೌಡಿ ಶೀಟರ್ ಬಬ್ಲಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಗುಂಡಿಕ್ಕಿ ಬಂಧನ..!

ರೌಡಿ ಶೀಟರ್ ಬಬ್ಲಿ ಅಪರಾಧ ಕೃತ್ಯಗಳನ್ನು ಬಿಟ್ಟು ಗುತ್ತಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗಾಗಿ, ರವಿವರ್ಮನ ಶಿಷ್ಯ ಪ್ರದೀಪ್‌, ಬಬ್ಲಿಯ ಕೊಲೆಗೆ ಸಂಚು ರೂಪಿಸಿ ಕೊಂದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಂಗಳೂರು: ರೌಡಿ ಶೀಟರ್ ಬಬ್ಲಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಗುಂಡಿಕ್ಕಿ ಬಂಧನ..!
Linkup
: ನಗರದಲ್ಲಿ ಹಾಡಹಗಲೇ ಬ್ಯಾಂಕ್‌ನೊಳಗೆ ನುಗ್ಗಿ ರೌಡಿ ಶೀಟರ್‌ ಜೋಸೆಫ್‌ ಅಲಿಯಾಸ್‌ ಬಬ್ಲಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಶೋಕ್‌ ನಗರದ ರೌಡಿ ಶೀಟರ್‌ ಪ್ರದೀಪ್‌ ಅಲಿಯಾಸ್‌ ಚೊಟ್ಟೆ, ಜೆ.ಸಿ. ನಗರದ ರೌಡಿ ಶೀಟರ್‌ ರವಿ ಗುಂಡೇಟು ತಿಂದು ಬಂಧಿತರಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಬುಧವಾರ ನಸುಕಿನ ಜಾವ ಬೇಗೂರು ಕೆರೆ ಬಳಿ ಆರೋಪಿಗಳಿರುವ ಬಗ್ಗೆ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಕೋರಮಂಗಲ ಠಾಣೆ ಇನ್ಸ್‌ಪೆಕ್ಟರ್‌ ಕೆ. ಬಿ. ರವಿ ನೇತೃತ್ವದ ಪೊಲೀಸ್‌ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಆರೋಪಿಗಳನ್ನು ಶರಣಾಗುವಂತೆ ಇನ್ಸ್‌ಪೆಕ್ಟರ್‌ ರವಿ ಆರೋಪಿಗಳಿಗೆ ಸೂಚಿಸಿದ್ದಾರೆ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪಿಎಸ್‌ಐ ಸಿದ್ದಪ್ಪ, ಎಎಸ್‌ಐ ರವೀಂದ್ರ ಬಂಧಿಸಲು ಮುಂದಾದಾಗ, ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪೊಲೀಸರು ಆತ್ಮ ರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜತೆಗೆ ಹಲ್ಲೆಗೊಳಗಾಗಿದ್ದ ಪೊಲೀಸರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗೆ ಕಾರಣ ಏನು?: ವಿವೇಕ ನಗರದ ರೌಡಿ ಶೀಟರ್‌ ರವಿವರ್ಮ ಅಲಿಯಾಸ್‌ ಪಪ್ಪು ಎಂಬಾತನನ್ನು ಬಬ್ಲಿ ಹಾಗೂ ಆತನ ಬಾಮೈದ ಜಾರ್ಜ್‌ ತನ್ನ ಇಬ್ಬರು ಸಹಚರರ ಜತೆ ಸೇರಿ ಕೊಲೆಗೈದಿದ್ದರು. ಸ್ನೇಹಿತನ ಮನೆಗೆ ತೆರಳಿ, ವಾಪಸಾಗುತ್ತಿದ್ದ ವೇಳೆ ಅಶೋಕನಗರದ ಫಾತಿಮಾ ಗಲ್ಲಿಯಲ್ಲಿ ರವಿವರ್ಮನನ್ನು ಬಬ್ಲಿ ತಂಡ ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಾರ್ಜ್ ಹಾಗೂ ಆತನ ಸಹಚರರು ಜೈಲು ಸೇರಿದ್ದರು. ರವಿವರ್ಮನ ಕೊಲೆಯ ಹಿನ್ನೆಲೆಯಲ್ಲಿ ಆತನ ತಂಡದವರಿಗೆ ಬಬ್ಲಿ ಹಾಗೂ ಜಾರ್ಜ್ ಮೇಲೆ ದ್ವೇಷ ಬೆಳೆದಿತ್ತು. ರವಿವರ್ಮನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದಾಗ ಆರೋಪಿಗಳೆಲ್ಲರೂ ಜೈಲಿನಲ್ಲಿರುವುದು ತಿಳಿದಿತ್ತು. ಅದರಲ್ಲಿ ಬಬ್ಲಿ ಮಾತ್ರ ಹೊರಗಿದ್ದು, ಅಪರಾಧ ಕೃತ್ಯಗಳನ್ನು ಬಿಟ್ಟು ಗುತ್ತಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗಾಗಿ, ರವಿವರ್ಮನ ಶಿಷ್ಯ ಪ್ರದೀಪ್‌, ಬಬ್ಲಿಯ ಕೊಲೆಗೆ ಸಂಚು ರೂಪಿಸಿ ಕೊಂದಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.