ನಾಗಪ್ಪ ನಾಗನಾಯಕನಹಳ್ಳಿ,
ಉದ್ಯಾನನಗರಿ ಮತ್ತು ಹೊರವಲಯದಲ್ಲಿ 2-3 ತಿಂಗಳು ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನೂರಾರು ಮನೆಗಳು ಕುಸಿದ ಪರಿಣಾಮ, ಹಲವು ಕುಟುಂಬಗಳು ಬೀದಿ ಪಾಲಾಗಿವೆ. ಅತಿವೃಷ್ಟಿಯಿಂದ ಬಾಧಿತರಾದ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಕಳೆದ ಸೆಪ್ಟೆಂಬರ್ನಿಂದ ನವೆಂಬರ್ ಅಂತ್ಯದವರೆಗೆ ಆರ್ಭಟಿಸಿದ ಮಳೆಗೆ ನಗರದಲ್ಲಿ 12 ಹಾಗೂ ಗ್ರಾಮೀಣ ಪ್ರದೇಶದಲ್ಲಿ 445 ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತ ಕುಟುಂಬಗಳಿಗೆ ಈವರೆಗೆ ಪರಿಹಾರ ಪಾವತಿಯಾಗಿಲ್ಲ. ಹೀಗಾಗಿ, ಸಂತ್ರಸ್ತರು ಕುಸಿದ ಮನೆಗಳಲ್ಲೇ ಬದುಕು ದೂಡುತ್ತಿದ್ದಾರೆ. ಈ ಕುಟುಂಬಗಳಿಗೆ ಕಟ್ಟಡ ಕಾಮಗಾರಿ ಪ್ರಗತಿ ಆಧರಿಸಿ ಹಂತ ಹಂತವಾಗಿ ಸಬ್ಸಿಡಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಜೋಳ, ಅವರೆ, ತೊಗರಿ ಸೇರಿದಂತೆ ನಾನಾ ಬೆಳೆ ಬೆಳೆಯಲಾಗುತ್ತದೆ. ವರುಣನ ಆರ್ಭಟದಿಂದಾಗಿ 2907 ಹೆಕ್ಟೇರ್ಗೆ ಸಂಬಂಧಿಸಿದಂತೆ ಪರಿಹಾರ ಕೋರಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಭೂಮಿ ಆನ್ಲೈನ್ ಪರಿಹಾರ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿರುವ ಕೃಷಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಪಾವತಿಸಲಾಗುತ್ತಿದೆ. ಇಲ್ಲಿಯವರೆಗೆ 3023 ರೈತರಿಗೆ 1.32 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿvಪರಿಸ್ಥಿತಿ ಅವಲೋಕಿಸಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಪ್ರವಾಹದಿಂದಾಗಿರುವ ಬೆಳೆ ಹಾನಿ ವಿವರಗಳನ್ನು ಜಂಟಿ ಸಮೀಕ್ಷೆ ನಡೆಸಿ, ಪರಿಹಾರ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಇದರನ್ವಯ ನಿತ್ಯ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ನೀರು ನುಗ್ಗಿ ಮನೆಗಳ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳನ್ನು ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿ ಮಾಡಲಾಗುತ್ತಿದೆ.
ಕಂದಾಯ ಇಲಾಖೆಯು ಜುಲೈ ತಿಂಗಳಿನಿಂದ ಈವರೆಗೆ ಸುರಿದ ಅತಿವೃಷ್ಟಿಯಿಂದ ಬಾಧಿತರಾದ ಸಂತ್ರಸ್ತರಿಗೆ ಪರಿಹಾರ ವಿತರಿಸಲು ರಾಜ್ಯ ವಿಕೋಪ ಪರಿಹಾರ ನಿಧಿಯಿಂದ 418.72 ಕೋಟಿ ರೂ. ಅನುದಾನವನ್ನು ಎಲ್ಲmಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. ಈ ಹಣದಿಂದಲೇ ಬೆಳೆ ನಷ್ಟ ಅನುಭವಿಸಿದ ರೈತರು ಹಾಗೂ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿದೆ.
ಮಳೆಯಿಂದ 457 ಮನೆಗಳಿಗೆ ಹಾನಿ!
ನಗರ ಜಿಲ್ಲೆಯಲ್ಲಿ ಸುರಿದ ಜೋರು ಮಳೆಯಿಂದ 457 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ 167 ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಕೆಲವೊಂದು ಮನೆಗಳು ಭಾಗಶಃ ಹಾನಿಗೀಡಾಗಿವೆ. ಹೀಗೆ ಹಾನಿಗೊಳಗಾಗಿರುವ ಮನೆಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಪರಿಹಾರ ನಿಗದಿಪಡಿಸಲಾಗಿದೆ.
ಸಂಪೂರ್ಣವಾಗಿ ಕುಸಿದು ಬಿದ್ದಿರುವ ಮನೆಗಳಿಗೆ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿ ದರ ಮತ್ತು ರಾಜ್ಯ ಸರಕಾರದ ನೆರವು ಸೇರಿ 5 ಲಕ್ಷ ರೂ., ಶೇ.25ರಿಂದ ಶೇ.75ರಷ್ಟು ಹಾನಿಯಾಗಿರುವ ಮನೆಗಳನ್ನು ಕೆಡವಿ ಹೊಸದಾಗಿ ಕಟ್ಟಲು 5 ಲಕ್ಷ ರೂ., ತೀವ್ರ ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಯಾಗಿರುವ ಕಟ್ಟಡಗಳಿಗೆ 50 ಸಾವಿರ ರೂ. ಪರಿಹಾರ ಸಿಗಲಿದೆ. ಮೊದಲಿಗೆ 95,100 ರೂ.ಗಳನ್ನು ಸಂತ್ರಸ್ತ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಆನಂತರ ಕಟ್ಟಡದ ಪ್ರಗತಿ ಆಧರಿಸಿ ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡಲಾಗುತ್ತದೆ.
2907 ಹೆಕ್ಟೇರ್ ಬೆಳೆ ನಷ್ಟ!
ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ, ಯಲಹಂಕ ತಾಲೂಕಿನಲ್ಲಿ ಮಳೆಯನ್ನು ನಂಬಿ ವ್ಯವಸಾಯ ಮಾಡುತ್ತಿರುವ ರೈತರ ಸಂಖ್ಯೆಯೇ ಹೆಚ್ಚು. ರಾಗಿ ಕೊಯ್ಲುಸಂದರ್ಭದಲ್ಲಿಯೇ ಎಡೆಬಿಡದೆ ಮಳೆ ಸುರಿಯಿತು. ಪರಿಣಾಮ, ನೆಲಕಚ್ಚಿದ್ದ ರಾಗಿ ತೆನೆಯಲ್ಲಿಯೇ ಮೊಳಕೆಯೊಡೆಯಿತು. ಇದರಿಂದ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರಾಗಿ ಮಣ್ಣು ಪಾಲಾಯಿತು.
ಈ ಐದು ತಾಲೂಕುಗಳಲ್ಲಿ ನೀರಾವರಿ, ಮಳೆ ಆಶ್ರಿತ, ತೋಟಗಾರಿಕೆ ಬೆಳೆ ಬೆಳೆಯುವ 4351 ಮಂದಿ ಕೃಷಿಕರು 2907 ಹೆಕ್ಟೇರ್ ಫಸಲು ನಾಶಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೆ 3023 ರೈತರಿಗೆ 1.32 ಕೋಟಿ ರೂ. ಪರಿಹಾರ ಪಾವತಿ ಮಾಡಲಾಗಿದೆ. ನೀರಾವರಿ ಬೆಳೆಗೆ ಹೆಕ್ಟೇರ್ಗೆ 13500 ರೂ., ಮಳೆ ಆಶ್ರಿತ ಫಸಲಿಗೆ 6800 ರೂ. ಹಾಗೂ ಬಹುವಾರ್ಷಿಕ ಬೆಳೆಗೆ 18 ಸಾವಿರ ರೂ. ಪರಿಹಾರ ನಿಗದಿ ಮಾಡಲಾಗಿದೆ.
ಸಂಪೂರ್ಣ ಹಾನಿಗೀಡಾಗಿರುವ ಮನೆಗಳಿಗೆ ಮೊದಲ ಕಂತಿನಲ್ಲಿ95,100 ರೂ. ವಿತರಿಸಲಾಗಿದೆ. ಉಳಿದ ಮೊತ್ತವನ್ನು ಹಂತ ಹಂತವಾಗಿ ರಾಜೀವ್ಗಾಂಧಿ ನಿಗಮವು ಬಿಡುಗಡೆ ಮಾಡಲಿದೆ. ಮನೆ ನಿರ್ಮಾಣದ ಸ್ಥಳ ತನಿಖೆ, ಜಿಪಿಎಸ್ ಫೋಟೊ ಆಧರಿಸಿ ಪರಿಹಾರ ಪಾವತಿ ಮಾಡಲಾಗುತ್ತದೆ.
- ಜೆ.ಮಂಜುನಾಥ್, ನಗರ ಜಿಲ್ಲಾಧಿಕಾರಿ
ಅತಿ ವೃಷ್ಟಿ ಪರಿಹಾರದ ವಿವರ:ವಿವರ ಪರಿಹಾರ ಮೊತ್ತ(ರೂ. ಗಳಲ್ಲಿ)
ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು, ಬಟ್ಟೆಗಳ ಹಾನಿ 10,000
ಶೇ.75ಕ್ಕಿಂತ ಹೆಚ್ಚು ಹಾನಿಯಾದ ಮನೆ('ಎ' ವರ್ಗ) 5 ಲಕ್ಷ
ಶೇ.25ರಿಂದ ಶೇ.75ರಷ್ಟು ಮನೆ ಹಾನಿ('ಬಿ' ವರ್ಗ) 3 ಲಕ್ಷ
ಶೇ.15ರಿಂದ ಶೇ.25 ಭಾಗಶಃ ಮನೆ ಹಾನಿ('ಸಿ' ವರ್ಗ) 50 ಸಾವಿರ
ಪರಿಹಾರಕ್ಕೆ ಸಲ್ಲಿಕೆಯಾಗಿರುವ ಬೆಳೆ ನಷ್ಟದ ಮಾಹಿತಿ:
ತಾಲೂಕು ಹಾನಿಗೀಡಾಗಿರುವ ಬೆಳೆ (ಹೆಕ್ಟೇರ್ಗಳಲ್ಲಿ)
ಬೆಂಗಳೂರು ಉತ್ತರ 181
ಯಲಹಂಕ 378
ಬೆಂಗಳೂರು ದಕ್ಷಿಣ 1131
ಬೆಂಗಳೂರು ಪೂರ್ವ 139
ಆನೇಕಲ್ 1078
--------------------
ಒಟ್ಟು 2907