ಬಿಬಿಎಂಪಿ ಚುನಾವಣೆ‌‌ಗೆ ಕಮಲ ಪಾಳಯ ಸಿದ್ಧತೆ, ಬೆಂಗಳೂರಿನ ಬಿಜೆಪಿ‌ ಜನಪ್ರತಿನಿಧಿಗಳ ಸಭೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಸಭೆಯು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದೆ. ‌

ಬಿಬಿಎಂಪಿ ಚುನಾವಣೆ‌‌ಗೆ ಕಮಲ ಪಾಳಯ ಸಿದ್ಧತೆ, ಬೆಂಗಳೂರಿನ ಬಿಜೆಪಿ‌ ಜನಪ್ರತಿನಿಧಿಗಳ ಸಭೆ
Linkup
ಬೆಂಗಳೂರು: ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜೊತೆಗೆ ಬೃಹತ್‌ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೂ ಬಿಜೆಪಿ ಸಿದ್ಧತೆ ಶುರುಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದೆ. ‌ ಮಲ್ಲೇಶ್ವರಂನಲ್ಲಿರುವ ಬಿಜೆಪಿ‌ ರಾಜ್ಯ ಕಚೇರಿ 'ಜಗನ್ನಾಥ ಭವನ'ದಲ್ಲಿ ‌ ಸಭೆ ನಡೆಯುತ್ತಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಹ ಉಸ್ತುವಾರಿ ಡಿ.ಕೆ.‌ ಅರುಣಾ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಸಭೆಗೆ ಬೆಂಗಳೂರಿನ ಬಹುತೇಕ‌ ಸಚಿವರು, ಸಂಸದರು,‌ ಶಾಸಕರು ಹಾಜರಾಗಿದ್ದಾರೆ. ಆದರೆ ಸಚಿವರಾದ ವಿ. ಸೋಮಣ್ಣ, ಶಾಸಕರಾದ ಎಸ್‌. ಸುರೇಶ್ ಕುಮಾರ್, ಎಸ್. ರಘು ಗೈರಾಗಿದ್ದಾರೆ. ಬಿಜೆಪಿ ಪಾಲಿಗೆ ಮಹತ್ವದ ಚುನಾವಣೆಯಾಗಿದ್ದು ಬೆಂಗಳೂರು ನಗರದ ಗದ್ದುಗೆ ಹಿಡಿಯಲು ಪಕ್ಷ ಈಗಾಗಲೇ ತಯಾರಿ ಆರಂಭಿಸಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಕ್ಷೇತ್ರ ವಿಂಗಡಣೆ ನೆಪದಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಲಾಗಿತ್ತು. ಈಗಾಗಲೇ ಸಾಕಷ್ಟು ವಿಳಂಬವಾಗಿರುವುದರಿಂದ ವರ್ಷಾಂತ್ಯದೊಳಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ನಗರ ಶಾಸಕರು ಒತ್ತಡ ಹಾಕಿದ್ದರು. ಬೆಂಗಳೂರು ನಗರವನ್ನು ಪ್ರತಿನಿಧಿಸುವ ಬಿಜೆಪಿಯ ಸಚಿವರು ಮತ್ತು ಶಾಸಕರು ಗುಪ್ತವಾಗಿ ಸಭೆ ನಡೆಸಿ ಬಿಬಿಎಂಪಿ ಚುನಾವಣೆಯನ್ನು ಡಿಸೆಂಬರ್ ತಿಂಗಳೊಳಗೆ ನಡೆಸಲೇಬೇಕೆಂದು ಆಗ್ರಹಿಸಿದ್ದರು. ಈಗಾಗಲೇ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಬಿಬಿಎಂಪಿ ಗಡಿ ಗುರುತಿಸುವಿಕೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆಗೆ ಬೇಕಾದ ಸಿದ್ದತೆಗಳು ಮುಕ್ತಾಯ ಹಂತದಲ್ಲಿವೆ. ಅತೀ ಶೀಘ್ರದಲ್ಲೇ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. Update: ಬಿಬಿಎಂಪಿ ಚುನಾವಣೆ ಕುರಿತ ಸಭೆಯಲ್ಲಿ, ಬಿಬಿಎಂಪಿ ಗದ್ದುಗೆ ಹಿಡಿಯಲು ಎಲ್ಲ ರೀತಿಯ ತಯಾರಿಗಳನ್ನು ನಡೆಸುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ. ಈ‌ ನಿಟ್ಟಿನಲ್ಲಿ ನಗರದಲ್ಲಿ ಪಕ್ಷ ಸಂಘಟನೆಯತ್ತ ಗಮನ ಕೊಡಲು ನಗರದ ಶಾಸಕರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು. ಅಭಿವೃದ್ಧಿ ಕುರಿತ ಬಾಕಿ ಯೋಜನೆ, ಕಾಮಗಾರಿಗಳಿಗೆ ಚುರುಕು ಕೊಡಲು ಸೂಚನೆ ನೀಡಲಾಗಿದೆ. ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕು, ಬಿಬಿಎಂಪಿಯಲ್ಲಿ ಬಹುಮತ ಪಡೆಯಲು ಬೂತ್ ಮಟ್ಟದ ಮತದಾರರ ಮೇಲೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ. ನಗರದ ಮತದಾರರಿಗೆ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಸಲು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಬೇಕು. ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಓಡಾಟ ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ ಎಂದು ಗೊತ್ತಾಗಿದೆ.