ಪೆಗಾಸಸ್‌: ಕೇಂದ್ರದ ವಿರುದ್ಧ ಒಗ್ಗಟ್ಟಿನ ಹೋರಾಟ..! ಮಂಗಳವಾರ ರಾಹುಲ್‌ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ

ಕಳೆದ ಲೋಕಸಭೆ ಚುನಾವಣೆ ವೇಳೆ ರಫೇಲ್‌ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಕೇಂದ್ರ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗರೆದಿತ್ತು. ಆಗ ಇತರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದ ಪಕ್ಷವು ಬಿಜೆಪಿಯ ತಂತ್ರಗಾರಿಕೆ ಎದುರು ಮಂಡಿಯೂರಿತ್ತು.

ಪೆಗಾಸಸ್‌: ಕೇಂದ್ರದ ವಿರುದ್ಧ ಒಗ್ಗಟ್ಟಿನ ಹೋರಾಟ..! ಮಂಗಳವಾರ ರಾಹುಲ್‌ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ
Linkup
: ಪೆಗಾಸಸ್‌ ಬೇಹುಗಾರಿಕೆ ಆರೋಪದ ವಿಚಾರವಾಗಿ ಸಂಸತ್‌ನಲ್ಲಿ ಕೇಂದ್ರ ಸರಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುತ್ತಿರುವ ಪ್ರತಿಪಕ್ಷಗಳು, ತಮ್ಮ ಪ್ರತಿಭಟನೆ ತೀವ್ರಗೊಳಿಸಲು ತೀರ್ಮಾನಿಸಿವೆ. ವಿಶೇಷ ಎಂದರೆ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಎಲ್ಲ ಪ್ರತಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸಲು ಮುಂದಾಗಿದೆ. ಹೋರಾಟದ ರೂಪುರೇಷೆ ನಿರ್ಧರಿಸುವ ಸಲುವಾಗಿ ರಾಹುಲ್‌ ಗಾಂಧಿ ಅವರು ನಾಯಕರನ್ನು 'ಉಪಾಹಾರ 'ಗೆ ಆಹ್ವಾನಿಸಿದ್ದಾರೆ. ಹೊಸ ದಿಲ್ಲಿಯ ಕಾನ್ಸ್‌ಟಿಟ್ಯೂಷನ್‌ ಕ್ಲಬ್‌ನಲ್ಲಿ ಮಂಗಳವಾರ ಬೆಳಗ್ಗೆ ಸಭೆ ನಡೆಯಲಿದೆ. ಪ್ರತಿಪಕ್ಷಗಳ ಎಲ್ಲ ಸಂಸದರು, ಸದನ ನಾಯಕರಿಗೆ ಆಹ್ವಾನ ನೀಡಲಾಗಿದೆ. ರಾಹುಲ್‌ ಗಾಂಧಿ ಕರೆದಿದ್ದ ಎಲ್ಲ ಸಭೆಗಳಿಗೆ ಗೈರು ಹಾಜರಾಗಿರುವ ತೃಣಮೂಲ ಕಾಂಗ್ರೆಸ್‌ಗೂ ಆಹ್ವಾನ ನೀಡಲಾಗಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ರಫೇಲ್‌ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಕೇಂದ್ರ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗರೆದಿತ್ತು. ಆಗ ಇತರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದ ಪಕ್ಷವು ಬಿಜೆಪಿಯ ತಂತ್ರಗಾರಿಕೆ ಎದುರು ಮಂಡಿಯೂರಿತ್ತು. ಈಗ ಪೆಗಾಸಸ್‌ ವಿಚಾರದಲ್ಲಿ ಪ್ರತಿಪಕ್ಷಗಳೂ ಸರಕಾರದ ವಿರುದ್ಧ ಮುಗಿಬಿದ್ದಿವೆ, ಜತೆಗೆ ಕಾಂಗ್ರೆಸ್‌ ಸಹ ಪ್ರತಿಪಕ್ಷಗಳ ನೆರವು ಪಡೆಯಲು ಮುಂದಾಗಿದೆ. ಜಗತ್ತಿನ 17 ಮಾಧ್ಯಮ ಸಂಸ್ಥೆಗಳು ಕಳೆದ ತಿಂಗಳು ಪೆಗಾಸಸ್‌ ಸ್ಪೈವೇರ್‌ ಮೂಲಕ ಭಾರತದಲ್ಲಿ ಹಿರಿಯ ರಾಜಕಾರಣಿಗಳು, ನ್ಯಾಯಮೂರ್ತಿಗಳು, ಪತ್ರಕರ್ತರು, ಗಣ್ಯರ ವಿರುದ್ಧ ಬೇಹುಗಾರಿಕೆ ನಡೆದಿದೆ ಎಂದು ಆರೋಪಿಸಿದ್ದವು. ಈ ಸ್ಪೈವೇರ್‌ ಅಭಿವೃದ್ಧಿಪಡಿಸಿರುವ ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯು, 'ಹಲವು ದೇಶಗಳ ಸರಕಾರಗಳು ಮತ್ತು ಅವುಗಳ ಅಂಗಸಂಸ್ಥೆಗಳು ಮಾತ್ರವೇ ಈ ಸ್ಪೈವೇರ್‌ ಬಳಸುತ್ತಿವೆ' ಎಂದು ಸ್ಪಷ್ಟೀಕರಣ ನೀಡಿದ ಬಳಿಕ, ಇದನ್ನೇ ಆಧಾರವಾಗಿಟ್ಟುಕೊಂಡು, 'ಸರಕಾರವೇ ಬೇಹುಗಾರಿಕೆ ನಡೆಸುತ್ತಿದೆ' ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದೇ ವಿಷಯ ಇಟ್ಟುಕೊಂಡು ಸಂಸತ್‌ನ ಮುಂಗಾರು ಅಧಿವೇಶನದಲ್ಲಿಯೂ ಪ್ರತಿಭಟನೆ ನಡೆಸುತ್ತಿವೆ. ನಡೆಯದ ಕಲಾಪ: ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸಂಸತ್‌ನ ಉಭಯ ಸದನಗಳಲ್ಲಿ ಸೋಮವಾರವೂ ಕಲಾಪ ನಡೆಯಲಿಲ್ಲ. ಗದ್ದಲದ ನಡುವೆಯೇ ಲೋಕಸಭೆಯಲ್ಲಿ ವಿಮೆ ಕುರಿತ ವಿಧೇಯಕ ಅಂಗೀಕಾರಗೊಂಡಿತು. ಪೆಗಾಸಸ್‌ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎನ್ನುವುದು ಪ್ರತಿಪಕ್ಷಗಳ ಬೇಡಿಕೆ. ಈ ಸಂಬಂಧ ಪ್ರತಿದಿನ ಉಭಯ ಸದನಗಳಲ್ಲಿಯೂ ನಿಲುವಳಿ ಸೂಚನೆ ಮಂಡಿಸುತ್ತಲೇ ಇವೆ. 'ಪೆಗಾಸಸ್‌ ಚರ್ಚೆ ಮಾಡುವ ವಿಷಯವೇ ಅಲ್ಲ. ಮಾಹಿತಿ ತಂತ್ರಜ್ಞಾನ ಸಚಿವರು ಈ ಕುರಿತು ಈಗಾಗಲೇ ಹೇಳಿಕೆ ನೀಡಿಯಾಗಿದೆ' ಎನ್ನುವುದು ಸರಕಾರದ ನಿಲುವು. ಕಳೆದ ವಾರ ಸಂಸತ್‌ನಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು, 'ಭಾರತದಲ್ಲಿ ಈ ರೀತಿಯ ಬೇಹುಗಾರಿಕೆ ನಡೆಸುವುದು ಸಾಧ್ಯವೇ ಇಲ್ಲ. ಇದೆಲ್ಲ ಕಟ್ಟು ಕತೆ' ಎಂದು ತಿಳಿಸಿದ್ದರು. ತನಿಖೆಗೆ ನಿತೀಶ್‌ ಆಗ್ರಹ: ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾಗಿರುವ ಜೆಡಿಯು ವರಿಷ್ಠ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು, ಪೆಗಾಸಸ್‌ ಬೇಹುಗಾರಿಕೆ ಆರೋಪದ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಅವರ ಈ ಬೇಡಿಕೆಯು ಪೆಗಾಸಸ್‌ ಕುರಿತು ತನಿಖೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳಿಗೆ ಬಲ ನೀಡಿದಂತಾಗಿದೆ. ಪೆಗಾಸಸ್‌ ತನಿಖೆಗೆ ಆಗ್ರಹಿಸಿದ ಬಿಜೆಪಿಯ ಮೊದಲ ಮಿತ್ರಪಕ್ಷ ಜೆಡಿಯು ಆಗಿದೆ. ಪಟನಾದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಅವರು, 'ಪೆಗಾಸಸ್‌ನಂತಹ ಅಸ್ತ್ರಗಳನ್ನು ಜನರನ್ನು ಬೆದರಿಸಲು ಬಳಸಬಾರದು. ತನಿಖೆ ನಡೆದರೆ ಸತ್ಯಾಂಶ ನಯಲಿಗೆ ಬರುತ್ತದೆ. ವಾಸ್ತವ ಸಂಗತಿ ಏನು ಎನ್ನುವುದು ಜನರಿಗೆ ತಿಳಿಯಬೇಕು' ಎಂದು ಹೇಳಿದರು. 'ಕಳೆದ 10 ದಿನಗಳಲ್ಲಿ 12 ವಿಧೇಯಕ ಅಂಗೀಕರಿಸಲಾಗಿದೆ. ಪ್ರತಿ ವಿಧೇಯಕದ ಮೇಲೆ ಸರಾಸರಿ 7 ನಿಮಿಷ ಚರ್ಚೆ ನಡೆದಿದೆ. ಈ ಸರಕಾರ ಪಾಪಡ್‌ ಚಾಟ್‌ ಮಾಡುತ್ತಿದೆಯೇ ಅಥವಾ ಕಾನೂನು ರೂಪಿಸುತ್ತಿದೆಯೇ?' ಎಂದು ಟಿಎಂಸಿ ಸಂಸದ ಡೆರೆಕ್‌ ಓ'ಬ್ರಿಯಾನ್‌ ಕಿಡಿಕಾರಿದ್ದಾರೆ.