'ಪುಕ್ಸಟ್ಟೆ ಲೈಫು' ಕಥೆ ಹೇಳಿದ್ದೇ 'ಸಂಚಾರಿ' ವಿಜಯ್‌! ಸಿನಿಮಾ ನೋಡಿ 'ಕಿಚ್ಚ' ಸುದೀಪ್ ಏನಂದ್ರು?

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ 'ಸಂಚಾರಿ' ವಿಜಯ್‌ ಅಭಿನಯಿಸಿರುವ 'ಪುಕ್ಸಟ್ಟೆ ಲೈಫು' ಚಿತ್ರ ವೀಕ್ಷಿಸಿ ನಟ ಸುದೀಪ್‌ ಕೂಡ ಅವರನ್ನು ಹೊಗಳಿದ್ದರಂತೆ. ಈ ಬಗ್ಗೆ ನಿರ್ದೇಶಕ ಅರವಿಂದ್‌ ಕುಪ್ಳೀಕರ್‌ ಇಲ್ಲಿ ಮಾಹಿತಿ ನೀಡಿದ್ದಾರೆ.

'ಪುಕ್ಸಟ್ಟೆ ಲೈಫು' ಕಥೆ ಹೇಳಿದ್ದೇ 'ಸಂಚಾರಿ' ವಿಜಯ್‌! ಸಿನಿಮಾ ನೋಡಿ 'ಕಿಚ್ಚ' ಸುದೀಪ್ ಏನಂದ್ರು?
Linkup
ಪದ್ಮಾ ಶಿವಮೊಗ್ಗ ನಟ ಸಂಚಾರಿ ವಿಜಯ್‌ ಸಿನಿಮಾ ರಂಗದಲ್ಲಿ ಮಾಡಿದ್ದ ಇನ್ನೂ ಒಂದಷ್ಟು ಕೆಲಸಗಳು ಅವರ ನಿಧನದ ನಂತರ ಬೆಳಕಿಗೆ ಬರುತ್ತಿವೆ. ಇದೀಗ ಬಿಡುಗಡೆಗೆ ಸಿದ್ಧವಾಗಿರುವ ಅವರ ನಟನೆಯ '' ಚಿತ್ರಕ್ಕೆ ಕಥೆ ನೀಡಿದ್ದೇ ವಿಜಯ್‌ ಎಂದು ಇದೀಗ ತಿಳಿದುಬಂದಿದೆ. ಈ ಚಿತ್ರ ತಾವು ನಿರ್ದೇಶಿಸಲು ವಿಜಯ್‌ ಅವರೇ ಕಾರಣ ಎಂದಿದ್ದಾರೆ ಚಿತ್ರದ ನಿರ್ದೇಶಕ ಅರವಿಂದ್‌ ಕುಪ್ಳೀಕರ್‌. 'ಈ ಸಿನಿಮಾವನ್ನು ಬೇರೆಯವರು ಮಾಡಬೇಕಿತ್ತು. ಅದಾಗಿರಲಿಲ್ಲ. ಇದರಿಂದ ನಿರಾಶರಾಗಿದ್ದ ವಿಜಿ ನನಗೆ ಒನ್‌ಲೈನ್‌ ಕಥೆ ಹೇಳಿದ್ದರು. ನನಗೆ ಇಷ್ಟವಾಗಿ ನಾವೇ ಮಾಡೋಣ ಎಂದೆ. ಹಲವು ವರ್ಷಗಳ ಸ್ನೇಹಿತರು ನಾವು. ಇದೀಗ ಸಿನಿಮಾ ರೆಡಿಯಾಗಿದೆ, ಅವರಿಲ್ಲ. ಆದರೆ, ಸಿನಿಮಾ ನೋಡಿದವರೆಲ್ಲರೂ ಬೀಗ ರಿಪೇರಿ ಮಾಡುವ ಹುಡುಗನ ಪಾತ್ರದಲ್ಲಿ ವಿಜಯ್‌ ಅದ್ಭುತವಾಗಿ ನಟಿಸಿದ್ದಾರೆ ಎನ್ನುತ್ತಿದ್ದಾರೆ. ಸುದೀಪ್‌ ಅವರೂ ಅವರ ನಟನೆಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದರು. ಇಂಥದ್ದೇ ಪಾತ್ರಗಳಲ್ಲಿ ನಟಿಸುವಂತೆ ಹೇಳಿದ್ದರು' ಎಂದಿದ್ದಾರೆ ಅರವಿಂದ್‌ ಕುಪ್ಳೀಕರ್‌. 'ಚಿತ್ರದಲ್ಲಿ ಅಪರಾಧ ಜಗತ್ತಿನಲ್ಲಿ ಪೊಲೀಸರು, ಮುಗ್ಧ ಯುವಕರ ಬದುಕು ಹೇಗಿರುತ್ತೆ ಎನ್ನುವುದನ್ನು ಹೇಳಲಾಗಿದೆ. 'ಅಮಾಯಕರಿರಬಹುದು, ಅಧಿಕಾರದಲ್ಲಿ ಇರುವವರು ಇರಬಹುದು, ಅಧಿಕಾರ ದುರುಪಯೋಗಪಡಿಸಿಕೊಂಡರೆ ಶಿಕ್ಷೆ ಆಗೇ ಆಗುತ್ತೆ ಎನ್ನುವುದು ಸಿನಿಮಾದಲ್ಲಿದೆ. ಪೊಲೀಸರು, ಅಮಾಯಕರ ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಕಥೆ. ಬೀಗ ರಿಪೇರಿ ಮಾಡುವ ಹುಡುಗ ಕಳ್ಳತನದಲ್ಲಿ ಸಿಕ್ಕಿಕೊಳ್ಳುತ್ತಾನೆ. ಪೊಲೀಸರು ಅವನನ್ನು ಹೇಗೆ ಬಳಸಿಕೊಳ್ತಾರೆ, ಈ ಟ್ರ್ಯಾಪ್‌ನಲ್ಲಿ ಹೇಗೆ ಸಿಕ್ಕಿಕೊಳ್ತಾನೆ ಎನ್ನುವುದು ಸಿನಿಮಾದಲ್ಲಿದೆ. ತುಂಬಾ ಜನ ಇಂಥ ಟ್ರ್ಯಾಪ್‌ನಲ್ಲಿ ಸಿಕ್ಕಿಕೊಳ್ಳೋದನ್ನು ನೋಡುತ್ತಿದ್ದೇವೆ. ಎಷ್ಟೋ ಜನರು ಹೇಗೆ ಪುಕ್ಸಟ್ಟೆಯಾಗಿ ಸಂಪಾದನೆ ಮಾಡುತ್ತಿರುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬಹುದಾಗಿದೆ' ಎಂದಿದ್ದಾರೆ ಅವರು. ವಿಜಯ್‌ ಅವರು ಈ ಚಿತ್ರಕ್ಕಾಗಿ ತೂಕವನ್ನೂ ಕಳೆದುಕೊಂಡಿದ್ದರಂತೆ. 'ವಿಜಯ್‌ ಯಾವುದೇ ಪಾತ್ರವಿರಲಿ ಶ್ರಮ ಹಾಕುತ್ತಿದ್ದರು. ಈ ಚಿತ್ರಕ್ಕೂ ಮಲ್ಲೇಶ್ವರ-ಕನಕಪುರ ರಸ್ತೆಗೆ ಸೈಕಲ್‌ನಲ್ಲೇ ಬರುತ್ತಿದ್ದರು. ಪಾತ್ರಕ್ಕೆ ಬೇಕಾದಂತೆ ಸಣ್ಣ ಆಗಿದ್ದರು' ಎಂದಿದ್ದಾರೆ ಅರವಿಂದ್‌. ಚಿತ್ರದಲ್ಲಿ ವಿಜಯ್‌ ಮುಸ್ಲಿಂ ಯುವಕನಾಗಿ ಕಾಣಿಸಿಕೊಂಡಿರುವುದು ಎಲ್ಲರಲ್ಲಿ ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ. 'ಟ್ರೇಲರ್‌ ನೋಡಿ ಯಾಕೆ ಮುಸ್ಲಿಂ ಹುಡುಗನನ್ನಾಗಿ ಮಾಡಿದ್ದೀರ ಅಂತ ಕೇಳುತ್ತಿದ್ದಾರೆ. ಹಿಂದು ಮುಸ್ಲಿಂ ಗಲಾಟೆದಾ ಅಂತ ಕೇಳುತ್ತಿದ್ದಾರೆ. ನಾವು ಧರ್ಮದ ಬಗ್ಗೆ ಸಿನಿಮಾದಲ್ಲಿ ಮಾತನಾಡುತ್ತಿಲ್ಲ. ಮೊದಲು ತಮಿಳು ಹುಡುಗ ಎಂದುಕೊಂಡಿದ್ದೆವು. ಆಮೇಲೆ ವಿಜಯ್‌ ಮುಸ್ಲಿಂ ಹುಡುಗನ ಪಾತ್ರಕ್ಕೆ ಹೊಂದುತ್ತಾರೆ ಎನ್ನಿಸಿತು. ಅಷ್ಟೆ. ಸಿನಿಮಾಗಳಲ್ಲಿ ಮುಸ್ಲಿಂ ಅರೆಬರೆ ಕನ್ನಡದಲ್ಲಿ ಮಾತನಾಡುವುದು ಬಹಳ ಕ್ಲೀಷೆಯಾಗಿದೆ. ತುಂಬಾ ಚೆನ್ನಾಗಿ ಕನ್ನಡ ಮಾತನಾಡುವವರೂ ಇದ್ದಾರೆ. ಹಾಗಾಗಿ ಸಿನಿಮಾದಲ್ಲಿ ವಿಜಯ್‌ ಅಪ್ಪಟ ಕನ್ನಡದಲ್ಲೇ ಮಾತನಾಡಿದ್ದಾರೆ' ಎಂದಿದ್ದಾರೆ ಅರವಿಂದ್‌. ಚಿತ್ರದಲ್ಲಿಅಚ್ಯುತ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ, ಸಿಬಿಐ ಆಫೀಸರ್‌ ಆಗಿ ರಂಗಾಯಣ ರಘು ನಟಿಸಿದ್ದಾರೆ. ಕೋಟ್ಸ್‌ ಸಂಚಾರಿ ವಿಜಯ್‌ 'ಪುಕ್ಸಟ್ಟೆ ಲೈಫು' ಚಿತ್ರದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗ ಅವರು ಇರಬೇಕಿತ್ತು. ಈ ಚಿತ್ರವನ್ನು ಕಳೆದ ವರ್ಷ ಮೇನಲ್ಲಿ ರಿಲೀಸ್‌ ಮಾಡಬೇಕೆಂದುಕೊಂಡಿದ್ದೆವು. ಕೊರೊನಾದಿಂದ ಆಗಲಿಲ್ಲ. ಈ ವರ್ಷ ಮಾರ್ಚ್‌ಗೆ ಎಂದುಕೊಂಡೆವು. ಆಗಲೂ 2ನೇ ಅಲೆಯಿಂದಾಗಿ ಆಗಲಿಲ್ಲ. ಆದರೂ ನಾವು ಚಿತ್ರಮಂದಿರದಲ್ಲೇ ರಿಲೀಸ್‌ ಮಾಡಬೇಕೆಂದು ಕಾದಿದ್ದೇವೆ. -ಅರವಿಂದ್‌ ಕುಪ್ಲೀಕರ್‌, ನಿರ್ದೇಶಕ