![](https://vijaykarnataka.com/photo/87835156/photo-87835156.jpg)
'ಪವರ್ ಸ್ಟಾರ್' ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 23 ದಿನಗಳಾಗಿವೆ. ಆದರೂ ಅವರಿಲ್ಲ ಅನ್ನೋ ಭಾವನೆ ಯಾರಲ್ಲೂ ಇಲ್ಲ. ಅವರ ಅಗಲಿಕೆಯ ನೋವಿನಿಂದ ಯಾರಿಗೂ ಹೊರಬರಲು ಆಗುತ್ತಿಲ್ಲ. ಈಗಲೂ ಪ್ರತಿದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಸಾವಿರಾರು ಜನ ಭೇಟಿ ನೀಡುತ್ತಲೇ ಇದ್ದಾರೆ. ಅಭಿಮಾನಿಗಳು ಪ್ರತಿದಿನ, ಪ್ರತಿಕ್ಷಣ ನೆನೆಯುತ್ತಿದ್ದಾರೆ. ಇನ್ನು, ಚಿತ್ರರಂಗ ಕೂಡ ಅಪ್ಪು ನಿಧನದ ನೋವಿನಿಂದ ಹೊರಬಂದಿಲ್ಲ. ಈ ಮಧ್ಯೆ ಪುನೀತ್ ರಾಜ್ಕುಮಾರ್ ಅವರ ಬಯೋಪಿಕ್ ಕುರಿತಂತೆ ಒಂದು ನ್ಯೂಸ್ ಕೇಳಿಬಂದಿದೆ. ಇಂಥದ್ದೊಂದು ನ್ಯೂಸ್ ಹೊರಬೀಳಲು ಕಾರಣ ನಿರ್ದೇಶಕ ಸಂತೋಷ್ ಆನಂದ್ರಾಮ್.
ಅಪ್ಪು ಬಯೋಪಿಕ್ ಮಾಡ್ತಾರಾ ಸಂತೋಷ್?ಈಚೆಗೆ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರಿಗೆ ಟ್ವಿಟರ್ನಲ್ಲಿ ಅಭಿಮಾನಿಯೊಬ್ಬರು ಒಂದು ಪ್ರಶ್ನೆ ಕೇಳಿದ್ದರು. 'ಸಂತೋಷ್ ಆನಂದ್ರಾಮ್ ಸರ್... ಅಪ್ಪು ಸರ್ ಬಗ್ಗೆ ಒಂದು ಬಯೋಪಿಕ್ ಮಾಡಿ. ನೀವು ಅವರನ್ನು ತುಂಬ ಹತ್ತಿರದಿಂದ ನೋಡಿದ್ದೀರಿ. ಅವರ ಪ್ರೀತಿ ಮತ್ತು ಮೌಲ್ಯಗಳನ್ನು ಕಂಡಿದ್ದೀರಿ... ದಯವಿಟ್ಟು ಮಾಡಿ..' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಕಲ್ಪನೆಯನ್ನು ತೆರೆಯ ಮೇಲೆ ತರಲು ನನ್ನಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ..' ಎಂದು ಹೇಳಿಕೊಂಡಿದ್ದಾರೆ.
ಅಪ್ಪು ಫ್ಯಾನ್ಸ್ ಬೆಂಬಲಇಂಥದ್ದೊಂದು ಮಾತುಕತೆ ಟ್ವಿಟರ್ನಲ್ಲಿ ಆಗುತ್ತಿದ್ದಂತೆಯೇ, ಅಪ್ಪು ಫ್ಯಾನ್ಸ್ ಬೆಂಬಲ ನೀಡಿದ್ದಾರೆ. 'ನಮ್ಮ ರಾಜಕುಮಾರ ಅಪ್ಪು ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ನೋಡುವಾಸೆ ಕನ್ನಡದ ಮನಸುಗಳಿಗೆ ಇದೆ. ನೀವು ಜವಾಬ್ದಾರಿಯಿಂದ ಸಮಯ ತೆಗೆದುಕೊಂಡು ಅದ್ಭುತವಾದ ಸಿನಿಮಾ ಮಾಡಿ. ನಿಮ್ಮ ಜೊತೆ ರಾಜವಂಶದ ಅಭಿಮಾನಿಗಳು ಸದಾ ಇರುತ್ತೇವೆ..' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದ್ದರೆ, ಮತ್ತೊಬ್ಬರು, 'ಆತ್ಮೀಯ ನಿರ್ದೇಶಕರೇ, ಒಬ್ಬ ಅಪ್ಪಟ ಅಪ್ಪು ಸರ್ ಅಭಿಮಾನಿಯಾಗಿ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ದಯಮಾಡಿ ಅಪ್ಪು ಸರ್ಗಾಗಿ ಅವರ ಹುಟ್ಟುಹಬ್ಬದ ದಿನದಂದು ಒಂದು ಒಳ್ಳೆಯ ಹಾಡನ್ನು ತಯಾರಿಸಿ. ಅದನ್ನು ಅಪ್ಪು ಸರ್ ಅವರಿಗೆ ಅರ್ಪಿಸೋಣ..' ಎಂದು ಮನವಿ ಮಾಡಿದ್ದಾರೆ.
ಪುನೀತ್ ಜೊತೆಗೆ ಎರಡು ಸಿನಿಮಾ ಮಾಡಿದ್ದ ಸಂತೋಷ್ಅಭಿಮಾನಿ ಹೇಳಿದಂತೆಯೇ, ಪುನೀತ್ ಜೊತೆಗೆ ಸಂತೋಷ್ ಆನಂದ್ರಾಮ್ಗೆ ಒಳ್ಳೆಯ ಒಡನಾಟ ಇತ್ತು. 'ರಾಜಕುಮಾರ'ದಂತಹ ಸಿನಿಮಾ ಮಾಡಿ, ಅಪ್ಪು ಅವರ ಕರಿಯರ್ಗೆ ದೊಡ್ಡ ಬ್ರೇಕ್ ಕೊಟ್ಟಿದ್ದರು ಸಂತೋಷ್. ನಂತರ ಈ ಜೋಡಿ 'ಯುವರತ್ನ' ಸಿನಿಮಾ ಮಾಡಿತ್ತು. ಸಂತೋಷ್ರನ್ನು ಪುನೀತ್ ಯಾವಾಗಲೂ ಸಹೋದರನಂತೆಯೇ ಕಾಣುತ್ತಿದ್ದರು. ಮುಂದಿನ ವರ್ಷ ಪುನೀತ್, ಸಂತೋಷ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಕಾಂಬಿನೇಷನ್ನಲ್ಲಿ ಮೂರನೇ ಸಿನಿಮಾ ಘೋಷಣೆ ಆಗಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.