ಗಂಡನ ಬಳಿ ನೋವು ಹೇಳಲು ಆಗಿಲ್ಲ: ಪ್ರಧಾನಿ ಮೋದಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಯುಪಿಯ ಮಹಿಳೆ, ಕಾರಣವೇನು?

​​ನಿತ್ಯವೂ ಹಿಂಸೆ ನೀಡುತ್ತಿದ್ದ ಮೈದುನರು, ಯಾರ ಬಳಿಯಾದರೂ ಹೇಳಿದರೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದರು. ಪತಿಯ ಬಳಿ ಹೇಳಿದರೆ ಅವರು ನನ್ನನ್ನೇ ತೊರೆಯಬಹುದೆಂದು ಭಯವಾಗಿತ್ತು. ಹೀಗಾಗಿ ಅವರಿಗೂ ಹೇಳಲಿಲ್ಲ ಎಂದು ಪ್ರಧಾನಿ ಮೋದಿ ಬಳಿ ತನ್ನ ನೋವನ್ನು ಪತ್ರದ ಮೂಲಕ ಮಹಿಳೆ ತೋಡಿಕೊಂಡಿದ್ದಾಳೆ.

ಗಂಡನ ಬಳಿ ನೋವು ಹೇಳಲು ಆಗಿಲ್ಲ: ಪ್ರಧಾನಿ ಮೋದಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಯುಪಿಯ ಮಹಿಳೆ, ಕಾರಣವೇನು?
Linkup
ಆಗ್ರಾ: ''ದೇಶದ ಮಹಿಳೆಯರಿಗೆ ಅವರ ಮನೆಗಳಲ್ಲಿ ಸುರಕ್ಷತೆ ಒದಗಿಸಿ,'' ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನಗರದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋನಾ ದ್ವಿವೇದಿ (30) ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದವರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದಿರುವ ಮೂರು ಪುಟಗಳ ಪತ್ರವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬ ಸದಸ್ಯರಿಗೆ ವಾಟ್ಸ್ಯಾಪ್‌ನಲ್ಲಿ ಮೋನಾ ಕಳುಹಿಸಿದ್ದಾರೆ. ತನ್ನ ಮೈದುನರಾದ ಅಂಬುಜ್‌ ಮತ್ತು ಪಂಕಜ್‌ ನೀಡುತ್ತಿದ್ದ ದೈಹಿಕ ಹಿಂಸೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿಸಿದ್ದಾರೆ. ''ರಾಜ್ಯದ ಆಡಳಿತ ಪಕ್ಷದ ಕಾರ್ಯಕರ್ತರಾಗಿರುವ ಅಂಬುಜ್‌ ಮತ್ತು ಅನುಜ್‌ ನನ್ನನ್ನು ಸದಾ ಹೊಡೆಯುತ್ತಿದ್ದರು. ನಾನು ಬಡ ಕುಟುಂಬದಿಂದ ಬಂದವಳು ಎಂಬ ತಾತ್ಸಾರದಿಂದಲೇ ಅವರು ಹಿಂಸೆ ನೀಡುತ್ತಿದ್ದರು. ಚಿಕ್ಕವಳಿದ್ದಾಗಲೇ ನನ್ನ ತಾಯಿ ತೀರಿ ಹೋಗಿದ್ದಾರೆ. ಕುಡುಕ ಅಪ್ಪ 16 ವರ್ಷಕ್ಕೇ ಮದುವೆ ಮಾಡಿ ಬಿಟ್ಟರು. ನಿತ್ಯವೂ ಹಿಂಸೆ ನೀಡುತ್ತಿದ್ದ ಮೈದುನರು, ಯಾರ ಬಳಿಯಾದರೂ ಹೇಳಿದರೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದರು. ಪತಿಯ ಬಳಿ ಹೇಳಿದರೆ ಅವರು ನನ್ನನ್ನೇ ತೊರೆಯಬಹುದೆಂದು ಭಯವಾಗಿತ್ತು. ಹೀಗಾಗಿ ಅವರಿಗೂ ಹೇಳಲಿಲ್ಲ. ದಯವಿಟ್ಟು ಮಹಿಳೆಯರಿಗೆ ಅವರ ಮನೆಗಳಲ್ಲಿಯೇ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ,'' ಎಂದು ಮೋನಾ ಅವರು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.