
ಹೊಸದಿಲ್ಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ನಾಯಕ , ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ಗೆ ತೆರಳುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೊಳೆಯುವ ಕೆಂಪು ಟ್ರ್ಯಾಕ್ಟರ್ ಮೇಲೇರಿದ ರಾಹುಲ್ ಗಾಂಧಿ, ಪಕ್ಷದ ಕೆಲವು ನಾಯಕರನ್ನು ಕೂರಿಸಿಕೊಂಡು ದಿಲ್ಲಿಯ ಮುಖ್ಯ ರಸ್ತೆಗಳಲ್ಲಿ ನಿರ್ಭಯದಿಂದ ಚಲಾಯಿಸಿ ಸಾಗಿದರು.
'ನಾನು ರೈತರ ಸಂದೇಶವನ್ನು ಸಂಸತ್ಗೆ ತೆಗೆದುಕೊಂಡು ಬಂದಿದ್ದೇನೆ. ಸರಕಾರವು ರೈತರ ಧ್ವನಿಗಳನ್ನು ಹತ್ತಿಕ್ಕುತ್ತಿದ್ದಾರೆ ಮತ್ತು ಸಂಸತ್ನಲ್ಲಿ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ. ಅವರು ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು. ಈ ಕಾನೂನುಗಳು 2-3 ದೊಡ್ಡ ಉದ್ಯಮಿಗಳಿಗೆ ಅನುಕೂಲಕರವಾಗಿವೆ ಎನ್ನುವುದನ್ನು ಇಡೀ ದೇಶ ತಿಳಿಸಿದೆ' ಎಂದು ರಾಹುಲ್ ಗಾಂಧಿ ಹೇಳಿದರು.
'ಸರಕಾರದ ಪ್ರಕಾರ, ರೈತರು ಬಹಳ ಖುಷಿಯಾಗಿದ್ದಾರೆ ಮತ್ತು ಹೊರಗೆ ಪ್ರತಿಭಟನೆಗೆ ಕುಳಿತಿರುವ ರೈತರೆಲ್ಲರೂ ಭಯೋತ್ಪಾದಕರು. ಆದರೆ ವಾಸ್ತವದಲ್ಲಿ, ರೈತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ' ಎಂದು ಆರೋಪಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಕಳೆದ ಒಂದು ವರ್ಷದಿಂದಲೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಮತ್ತೆ ಹೋರಾಟ ಚುರುಕುಗೊಳಿಸಲು ಮುಂದಾಗಿವೆ.