ಕೋವಿಡ್‌ ಶವಗಳು ಶೈತ್ಯಾಗಾರದಲ್ಲಿ ಕೊಳೆತ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಶಾಸಕ ಸುರೇಶ್‌ಕುಮಾರ್‌ ಆಗ್ರಹ

ಕೋವಿಡ್‌ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು ಅಂತ್ಯಸಂಸ್ಕಾರ ಕಾಣದೆ ಶೈತ್ಯಾಗಾರದಲ್ಲಿಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ನಿರ್ಲಕ್ಷ್ಯದಲ್ಲಿ ಬಿಬಿಎಂಪಿ ಮತ್ತು ಇಎಸ್‌ಐ ಆಸ್ಪತ್ರೆಯ ಪಾತ್ರವಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ.

ಕೋವಿಡ್‌ ಶವಗಳು ಶೈತ್ಯಾಗಾರದಲ್ಲಿ ಕೊಳೆತ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಶಾಸಕ ಸುರೇಶ್‌ಕುಮಾರ್‌ ಆಗ್ರಹ
Linkup
ಬೆಂಗಳೂರು: ನಗರದ ಇಎಸ್‌ಐ ಆಸ್ಪತ್ರೆಯಲ್ಲಿಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಶವಗಳನ್ನು ಕಳೆದ 15 ತಿಂಗಳಿಂದ ಶೈತ್ಯಾಗಾರದಲ್ಲೇ ಕೊಳೆಯಲು ಬಿಟ್ಟ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌.ಸುರೇಶ್‌ಕುಮಾರ್‌ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಗೆ ಪತ್ರ ಬರೆದಿರುವ ಅವರು, ''ಕೋವಿಡ್‌ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು ಅಂತ್ಯಸಂಸ್ಕಾರ ಕಾಣದೆ ಶೈತ್ಯಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ನಿರ್ಲಕ್ಷ್ಯದಲ್ಲಿ ಬೃಹತ್‌ ಮಹಾನಗರ ಪಾಲಿಕೆ ಮತ್ತು ಇಎಸ್‌ಐ ಆಸ್ಪತ್ರೆಯ ಪಾತ್ರವಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ. ಆದ್ದರಿಂದ, ಈ ಅಮಾನವೀಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು'' ಎಂದು ಆಗ್ರಹಿಸಿದ್ದಾರೆ. ''ಈ ರೀತಿಯ ಪ್ರಸಂಗ ಎಲ್ಲಿಯೂ ಜರುಗಬಾರದು. ಕೋವಿಡ್‌-19 ಸಂದರ್ಭದಲ್ಲಿಬೇರೆ ಬೇರೆ ರೀತಿಯ ಕರುಳು ಹಿಂಡುವ ಪ್ರಸಂಗಗಳನ್ನು ಕೇಳಿದ್ದೇವೆ. ಆದರೆ, ಇಎಸ್‌ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ದೈವದ ಸಂಗತಿ. ಇದು ಬೇಜವಾಬ್ದಾರಿಯ ಪರಾಕಾಷ್ಠೆಯಾಗಿದ್ದು, ಪ್ರಕರಣದ ಬಗ್ಗೆ ಗಂಭೀರ ತನಿಖೆ ಕೈಗೊಳ್ಳಬೇಕು'' ಎಂದು ಸುರೇಶ್‌ಕುಮಾರ್‌ ಸಚಿವರಲ್ಲಿ ಮನವಿ ಮಾಡಿದ್ದಾರೆ. ಏನಿದು ಘಟನೆ? ಕೊರೊನಾ ಸೋಂಕಿನಿಂದ ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜಪೇಟೆಯ ದುರ್ಗಾ (40) ಹಾಗೂ ಕೆ.ಪಿ.ಅಗ್ರಹಾರ ಮೂಲದ ಮನಿರಾಜು (62) ಎಂಬುವವರು 2020ರ ಜುಲೈನಲ್ಲಿ ಮೃತಪಟ್ಟಿದ್ದರು. ಮೃತದೇಹಗಳನ್ನು ಆಸ್ಪತ್ರೆಯ ಹಳೆಯ ಶವಾಗಾರದ ಫ್ರೀಜರ್‌ನಲ್ಲಿಇರಿಸಲಾಗಿತ್ತು. ಕೋವಿಡ್‌ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ಶವಾಗಾರ ನಿರ್ಮಿಸಿ, ಶವಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಹಳೆಯ ಶವಾಗಾರದಲ್ಲಿಈ ಎರಡೂ ಮೃತದೇಹಗಳು ಉಳಿದು ಹೋಗಿದ್ದವು. ಹಳೆ ಶವಾಗಾರದ ಫ್ರೀಜರ್‌ನಲ್ಲಿದ್ದ ಈ ಎರಡು ಶವಗಳು 15 ತಿಂಗಳಾದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಕಳೆದ ಶನಿವಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲು ಹೋದಾಗ ದುರ್ವಾಸನೆ ಬರುವುದನ್ನು ಗಮನಿಸಿ, ವೈದ್ಯಕೀಯ ಸಿಬ್ಬಂದಿಗಳ ಗಮನಕ್ಕೆ ತಂದರು. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಜರ್‌ನಲ್ಲಿಎರಡು ಮೃತದೇಹಗಳಿರುವುದು ಕಂಡು ಬಂದಿತ್ತು. ನಂತರ ವೈದ್ಯಕೀಯ ಅಧೀಕ್ಷಕರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಸಂಬಂಧ ರಾಜಾಜಿನಗರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.