ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ್ರೆ ಆರ್ಥಿಕತೆಗೆ ಹೊಡೆತ: ಎಚ್ಚರಿಕೆಯ ತೀರ್ಮಾನ ಕೈಗೊಳ್ಳುವಂತೆ ಎಫ್ಕೆಸಿಸಿಐ ಮನವಿ
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ್ರೆ ಆರ್ಥಿಕತೆಗೆ ಹೊಡೆತ: ಎಚ್ಚರಿಕೆಯ ತೀರ್ಮಾನ ಕೈಗೊಳ್ಳುವಂತೆ ಎಫ್ಕೆಸಿಸಿಐ ಮನವಿ
ವಾಣಿಜ್ಯ ವಹಿವಾಟು ಇದೇ ರೀತಿ ಮುಂದುವರಿಯಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉದ್ದಿಮೆಗಳು ಬಾಗಿಲು ಮುಚ್ಚಿ ಲಕ್ಷಾಂತರ ಮಂದಿ ಮತ್ತೆ ಉದ್ಯೋಗ ಕಳೆದುಕೊಂಡು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ.
: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಆದರೂ ಓಮಿಕ್ರಾನ್ ಹರಡುವ ಭೀತಿಯಿಂದ ಪ್ರದೇಶದಲ್ಲಿ ಜಾರಿ ಮಾಡಿದರೆ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಲಿದೆ. ಪ್ರಮುಖವಾಗಿ ಕ್ಷೇತ್ರ ಪುನಃ ಸಂಕಷ್ಟಕ್ಕೆ ಸಿಲುಕಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೂ ಮುಕ್ತ ಅವಕಾಶ ನೀಡಬೇಕು ಎಂದು ಎಫ್ಕೆಸಿಸಿ ಅಧ್ಯಕ್ಷ ಡಾ. ಐ. ಎಸ್. ಪ್ರಸಾದ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
'ಕೋವಿಡ್ ಮೊದಲ ಹಾಗೂ 2ನೇ ಅಲೆಯಲ್ಲಿ ಈ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿದೆ. ಶೇ.70ಕ್ಕೂ ಹೆಚ್ಚಿನ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ಕಲಿತಿದ್ದಾರೆ. ಹೀಗಾಗಿ ನಾವು ನೂರಾರು ವೈರಸ್ಗಳ ನಡುವೆಯೇ ಬದುಕುವುದನ್ನು ಕಲಿಯಬೇಕಿದೆ. ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡು ಎಲ್ಲ ಉದ್ದಿಮೆಗಳು ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕು' ಎಂದು ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದರು.
'ರಾಜ್ಯದಲ್ಲಿ ಎಲ್ಲ ಕೋವಿಡ್ ನಿರ್ಬಂಧ ಸಡಿಲಿಸಿದ ನಂತರ ಕಳೆದ ಎರಡು ತಿಂಗಳಿನಿಂದ ಹೋಟೆಲ್ ಸೇರಿದಂತೆ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿರುವುದೇ ಸಾಕ್ಷಿಯಾಗಿದೆ. ವಾಣಿಜ್ಯ ವಹಿವಾಟು ಇದೇ ರೀತಿ ಮುಂದುವರಿಯಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉದ್ದಿಮೆಗಳು ಬಾಗಿಲು ಮುಚ್ಚಿ ಲಕ್ಷಾಂತರ ಮಂದಿ ಮತ್ತೆ ಉದ್ಯೋಗ ಕಳೆದುಕೊಂಡು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ' ಎಂದು ಅವರು ಎಚ್ಚರಿಸಿದರು.
ಬೂಸ್ಟರ್ ಡೋಸ್ ಕೊಡಲಿ: 'ಆರೋಗ್ಯ ಕಾರ್ಯಕರ್ತರು ಸೇರಿದಂತೆ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದುಕೊಂಡಿರುವವರಿಗೆ ಸರಕಾರ ಮೂರನೇ ಡೋಸ್ ಕೊಡಬೇಕು. ಕೋವಿಡ್ ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಬೂಸ್ಟರ್ ಡೋಸ್ ನೀಡುವುದನ್ನು ಆರಂಭಿಸಲಿ' ಎಂದು ಸಲಹೆ ನೀಡಿದರು.
ಮಕ್ಕಳಿಗೆ ಲಸಿಕೆ ನೀಡಲಿ: 'ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಲಿದೆ ಎಂಬ ಭೀತಿ ಇದೆ. ರಾಜ್ಯ ಸರಕಾರ ಶಾಲಾ ಕಾಲೇಜುಗಳಲ್ಲಿ ಸೋಂಕು ಹರಡಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬಾರದು ಎಂದು ನಿರ್ಬಂಧ ವಿಧಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಹಾಗೆಯೇ ಮಕ್ಕಳಿಗೆ ಲಸಿಕೆ ನೀಡಲು ವಿಶೇಷ ಕ್ರಮ ತೆಗೆದುಕೊಳ್ಳಬೇಕು' ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲಿ: ಮೊದಲ ಹಾಗೂ 2ನೇ ಅಲೆ ಸಂದರ್ಭದಲ್ಲಿ ಪ್ರಮುಖವಾಗಿ ಕಾಡಿದ್ದು ಆಸ್ಪತ್ರೆಗಳಲ್ಲಿ ಮೂಲಸೌಲಭ್ಯ ಸಮಸ್ಯೆ. ಹೀಗಾಗಿ ಮೂರನೇ ಅಲೆ ಎದುರಿಸಲು ರಾಜ್ಯ ಸರಕಾರ ತಕ್ಷಣವೇ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಬೇಕು. ಬೆಂಗಳೂರಿನ ಜತೆಗೆ ಇತರೆ ನಗರಗಳಲ್ಲಿ ಉತ್ತಮ ಚಿಕಿತ್ಸೆ ದೊರಕಿಸಿಕೊಡಲು ಹಾಗೂ ಆಕ್ಸಿಜನ್ ಕೊರತೆ ಆಗದಂತೆ ಈಗಿನಿಂದಲೇ ಪೂರೈಕೆ ಹಾಗೂ ಆಕ್ಸಿಜನ್ ಘಟಕ ಸ್ಥಾಪನೆ ಮಾಡಬೇಕು. ಇದರ ಜತೆಗೆ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಈ ಸಂಬಂಧ ರಾಜ್ಯ ಸರಕಾರಕ್ಕೆ ಶೀಘ್ರದಲ್ಲೇ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.