ಉತ್ತರಾಖಂಡದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವಾಹನ, ಕನಿಷ್ಠ 13 ಸಾವು

ಉತ್ತರಾಖಂಡದ ಚಕ್ರತಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕುಗ್ರಾಮವೊಂದರಲ್ಲಿನ ಕಡಿದಾದ ರಸ್ತೆಯಿಂದ ಉರುಳಿದ ವಾಹನ ಕಂದಕಕ್ಕೆ ಬಿದ್ದಿದೆ. ಕಾರಿನಲ್ಲಿದ್ದವರ ಪೈಕಿ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಉತ್ತರಾಖಂಡದಲ್ಲಿ ಭೀಕರ ಅಪಘಾತ: ಕಂದಕಕ್ಕೆ ಉರುಳಿದ ವಾಹನ, ಕನಿಷ್ಠ 13 ಸಾವು
Linkup
ಡೆಹರಾಡೂನ್: ಉತ್ತರಾಖಂಡದ ಚಕ್ರತಾದಲ್ಲಿ ಭಾನುವಾರ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರ ಪೈಕಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಆರಂಭಿಸಿದ್ದಾರೆ. ತುರ್ತು ಸ್ಪಂದನಾ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈವರೆಗೂ 13 ಮೃತದೇಹಗಳನ್ನು ಕಂದಕದಿಂದ ಹೊರ ತೆಗೆಯಲಾಗಿದೆ ಎಂದು ಚಕ್ರತಾದ ಸ್ಟೇಷನ್ ಹೌಸ್ ಅಧಿಕಾರಿ ಸತೇಂದ್ರ ಭಾಟಿ ತಿಳಿಸಿದ್ದಾರೆ. ಅಪಘಾತದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಮೃತದೇಹಗಳನ್ನು ಗ್ರಾಮಸ್ಥರ ನೆರವಿನಿಂದ ಹೊರಗೆ ತರಲಾಗಿದೆ. ಇದು ಬಹಳ ಕುಗ್ರಾಮ ಪ್ರದೇಶವಾಗಿದೆ. ಹೀಗಾಗಿ ಸ್ಥಳಕ್ಕೆ ಅಗತ್ಯ ಸೌಕರ್ಯ ಸಾಧನಗಳೊಂದಿಗೆ ತೆರಳಲು ರಕ್ಷಣಾ ಸಿಬ್ಬಂದಿ ಪರದಾಡಬೇಕಾಗಿದೆ. ಈ ಕಂದಕವು ರಸ್ತೆಯ ಪಕ್ಕದಲ್ಲಿ ಸುಮಾರು 300 ಅಡಿಗಳಷ್ಟು ಆಳವಿದೆ ಎಂದು ಅವರು ವಿವರಿಸಿದ್ದಾರೆ. ರಾಜಧಾನಿ ಡೆಹರಾಡೂನ್‌ನಿಂದ ಸುಮಾರು 170 ಕಿಮೀ ದೂರದಲ್ಲಿ ಚಕ್ರತಾ ತಾಲೂಕಿನ ಟಿಯುನಿ ಎಂಬ ಕುಗ್ರಾಮದಲ್ಲಿ ಈ ಸಂಭವಿಸಿದೆ. ತಾಲೂಕಿನ ಬುಲ್ಹಾದ್-ಬೈಲಾ ರಸ್ತೆ ನಡುವೆ ಈ ಅವಘಡ ಉಂಟಾಗಿದೆ. ಪೊಲೀಸ್ ಅಧಿಕಾರಿಗಳ ಜತೆಗೆ ಚಕ್ರತಾದಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ (ಎಸ್‌ಡಿಎಂ) ಘಟಕದ ಸಿಬ್ಬಂದಿ ಕೂಡ ತೆರಳಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯಾ ದಳದ (ಎಸ್‌ಡಿಆರ್‌ಎಫ್) ಒಂದು ತುಕಡಿಯನ್ನು ಕೂಡ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.